ಕಾರ್ ಓವರ್ ಟೇಕ್ ಮಾಡಲು ಹೋಗಿ, ಬಸ್‌ಗೆ ಸ್ಕೂಟಿ ಡಿಕ್ಕಿ; ಇಬ್ಬರು ಯುವಕರು ಸ್ಥಳದಲ್ಲೇ ಸಾವು..!

ಕಾರನ್ನು ಓವರ್‌ಟೇಕ್ ಮಾಡಲು ಹೋಗಿ ಸ್ಕೂಟಿಯೊಂದು ಎದುರಿನಿಂದ ಬಂದ ಕೆಎಸ್ಆರ್‌ಟಿಸಿ (KSRTC) ಬಸ್‌ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಭೀಕರ ದುರ್ಘಟನೆ ರವಿವಾರ ಸಂಜೆ ರಾಷ್ಟ್ರೀಯ ಹೆದ್ದಾರಿ-52ರ ಚಿಕ್ಕಮಾವಳ್ಳಿ ಕ್ರಾಸ್ ಬಳಿ ನಡೆದಿದೆ.

​ಹಳೆ ಹುಬ್ಬಳ್ಳಿ ನಿವಾಸಿಗಳಾದ ಮಂಜುನಾಥ (27) ಹಾಗೂ ಸುಮೀತ್ (18) ಮೃತಪಟ್ಟ ದುರ್ದೈವಿಗಳು ಎಂದು ಗುರುತಿಸಲಾಗಿದೆ.

​ಅಪಘಾತ ನಡೆದಿದ್ದು ಹೇಗೆ?
​ಕಾರವಾರದಿಂದ ಸಿಂಧನೂರಿಗೆ ತೆರಳಿ ಮರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್ (ನೊಂದಣಿ ಸಂಖ್ಯೆ: KA-31 F-1664) ಚಿಕ್ಕಮಾವಳ್ಳಿ ಕ್ರಾಸ್ ಬಳಿ ಬರುತ್ತಿದ್ದಾಗ, ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ಸ್ಕೂಟಿ (ನೊಂದಣಿ ಸಂಖ್ಯೆ: KA-63 EB-8690) ತನ್ನ ಮುಂಭಾಗದಲ್ಲಿ ಸಾಗುತ್ತಿದ್ದ ಕಾರನ್ನು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಓವರ್‌ಟೇಕ್ ಮಾಡಲು ಮುಂದಾಗಿದೆ. ಈ ವೇಳೆ ಎದುರಿನಿಂದ ಬರುತ್ತಿದ್ದ ಬಸ್‌ಗೆ ಸ್ಕೂಟಿ ನೇರವಾಗಿ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ಭೀಕರ ಅಪಘಾತ ಸಂಭವಿಸಿ ಇಬ್ಬರೂ ಸವಾರರು ದುರ್ಮರಣ ಹೊಂದಿದ್ದಾರೆ.

​ಹೆಲ್ಮೆಟ್ ಧರಿಸದ ಸವಾರರು..!
​ಅಪಘಾತದ ಸಮಯದಲ್ಲಿ ಸ್ಕೂಟಿಯಲ್ಲಿದ್ದ ಇಬ್ಬರೂ ಸವಾರರು ಹೆಲ್ಮೆಟ್ ಧರಿಸಿರಲಿಲ್ಲ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಸ್ಕೂಟಿ ಚಾಲಕ ಮಂಜುನಾಥ ಹಾಗೂ ಹಿಂಬದಿ ಸವಾರ ಸುಮೀತ್ ಅವರ ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ ಸ್ಕೂಟಿ ಹಾಗೂ ಬಸ್ ಎರಡೂ ವಾಹನಗಳಿಗೂ ಹಾನಿಯಾಗಿದೆ.
​ಬಸ್ ನಿರ್ವಾಹಕ ಸುರೇಶ್ ಗುಬ್ಬಿವಾಡ ನೀಡಿದ ದೂರಿನ ಮೇರೆಗೆ, ಮೃತ ಸ್ಕೂಟಿ ಚಾಲಕನ ವಿರುದ್ಧ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.