Mundgod Doctor News; ಮುಂಡಗೋಡ ಪಟ್ಟಣ ಪಂಚಾಯತಿ ಸಭಾಭವನದಲ್ಲಿ ಗುರುವಾರ ಸಾಮಾನ್ಯ ಸಭೆ ನಡೆಯಿತು, ಸಭೆಯಲ್ಲಿ ಹಲವು ವಿಷಯಗಳ‌ ಕುರಿತು ಗಂಭೀರ ಚರ್ಚೆಗಳು ನಡೆದವು, ಅದ್ರಲ್ಲೂ, ಹಳೂರಿನಲ್ಲಿ ಇರುವ ಖಾಸಗಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅಲ್ಲಿಯ ವೈದ್ಯರು ಅರ್ಹತೆ ಇಲ್ಲದಿದ್ದರೂ, ಆ ಖಾಸಗಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬೇಕಾಬಿಟ್ಟಿ ಅಪರೇಷನ್‌ಮಾಡುತ್ತಿದ್ದಾರೆ. ಇದರಿಂದ ಈಗಾಗಲೇ ಕೆಲವು ರೋಗಿಗಳು ಮೃತಪಟ್ಟಿದ್ದಾರೆ. ಕೂಡಲೇ ಈ ಬಗ್ಗೆ ತನಿಖೆ ಮಾಡುವಂತೆ ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಅಧಿಕಾರಿಗಳಿಗೆ ಪತ್ರ ಬರೆಯುವಂತೆ ಪಟ್ಟಣ ಪಂಚಾಯತಿ ಸದಸ್ಯ ವಿಶ್ವನಾಥ ಪವಾಡ ಶೆಟ್ಟರ್‌ ಹಾಗೂ ಶೇಖರ ಲಮಾಣಿ ಸಭೆಯಲ್ಲಿ ಆಗ್ರಹಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ಮತ್ತೋರ್ವ ಸದಸ್ಯ ಫಣಿರಾಜ್ ಹದಳಗಿ, ಇದು ಸಾರ್ವಜನಿಕ ಸಮಸ್ಯೆಯಾಗಿದ್ದರೆ ಸಭೆಯಲ್ಲಿ ಚರ್ಚೆ ಮಾಡುವುದು ಬೇಡ. ಎಲ್ಲರೂ ಸೇರಿ ಪ್ರತಿಭಟನೆ ಮಾಡೋಣ. ಅದು ಬಿಟ್ಟು ಸಭೆಯ ವ್ಯಾಪ್ತಿಗೆ ಬರದ ವಿಷಯಗಳ ಬಗ್ಗೆ ಚರ್ಚೆ ಸರಿಯಲ್ಲವೆಂದರು.

Mundgod Doctor News;

ಈ ಆಸ್ಪತ್ರೆ ಪಟ್ಟಣ ವ್ಯಾಪ್ತಿಯಲ್ಲಿಯೇ ಬರುವುದರಿಂದ ಸದಸ್ಯರಿಗೆ ಕೇಳುವ ಹಕ್ಕಿದೆ ಎಂದು ಹೇಳುತ್ತಿದ್ದಂತೆ, ಸದಸ್ಯ ಅಶೋಕ ಚಲವಾದಿ ಮಧ್ಯಪ್ರವೇಶಿಸಿ, ನಮ್ಮ ಪ.ಪಂ.ವ್ಯಾಪ್ತಿ ಬರುವ ಆಸ್ಪತ್ರೆ ಬಗ್ಗೆ ಪ.ಪಂ.ದಿಂದ ಅನುಮತಿ ಪಡೆದಿದ್ದಾರೆ ಇಲ್ಲವೇ ಎಂಬುದರ ಬಗ್ಗೆ ಚರ್ಚಿಸೋಣ. ಮನೆ ಎಂದು ಪರ್ಮಿಷನ್‌ ಪಡೆದು ವಾಣಿಜ್ಯ ಬಳಕೆಗೆ ಉಪಯೋಗಿಸುತ್ತಿದ್ದರೆ ಅದರ ಬಗ್ಗೆ ಕ್ರಮ ಕೈಗೊಳ್ಳೋಣ. ಅದು ಬಿಟ್ಟು ನಮ್ಮ ವ್ಯಾಪ್ತಿಗೆ ಬರದ ವಿಷಯಗಳ ಬಗ್ಗೆ ಚರ್ಚಿಸುವುದು ಸೂಕ್ತವಲ್ಲ ಎಂದು ಹೇಳುತ್ತಿದ್ದಂತೆ, ಸದಸ್ಯರಲ್ಲಿಯೇ ಗೊಂದಲ ಉಂಟಾಯಿತು.

ಹೀಗಾಗಿ, ಮುಖ್ಯಾಧಿಕಾರಿಗಳು ಈ ಕುರಿತು ಮಾತನಾಡುವಂತೆ ಸದಸ್ಯರು ಒತ್ತಾಯಿಸಿದಾಗ, ಈ ಖಾಸಗಿ ಆಸ್ಪತ್ರೆ ಕಟ್ಟಲು ಪ.ಪಂ.ದಿಂದ ಪರವಾನಿಗೆ ಪಡೆದಿದ್ದಾರೆಯೇ ಇಲ್ಲವೇ ಎಂಬುದರ ಬಗ್ಗೆ ಪರಿಶೀಲಿಸಿ, ಕ್ರಮ ಕೈಗೊಳ್ಳಬಹುದು. ಅದನ್ನು ಬಿಟ್ಟು ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಆಗುವ ತೊಂದರೆ ಬಗ್ಗೆ ಚರ್ಚೆ ಮಾಡುವುದು ನಮ್ಮ ವ್ಯಾಪ್ತಿಯ ವಿಷಯವಲ್ಲ. ಆದರೆ ಅಧ್ಯಕ್ಷರು, ಖಾಸಗಿ ಆಸ್ಪತ್ರೆಗೆ ಪತ್ರ ಬರೆಯಬಹುದು ಎಂದು ಮುಖ್ಯಾಧಿಕಾರಿ ಕುಮಾರ ನಾಯ್ಕ ಹೇಳಿದರು.

ಮಳೆಗಾಲದಲ್ಲಿ ಮುಂಜಾಗ್ರತಾ ಕ್ರಮ..!
ಈಗಾಗಲೇ ಮಳೆಗಾಲ ಆರಂಭವಾಗಿದ್ದು, ಚರಂಡಿ ಹಾಗೂ ಗಿಡಗಂಟಿಗಳನ್ನು ಸ್ವಚ್ಛ ಮಾಡುವಂತೆ ಪ.ಪಂ.ಅಧ್ಯಕ್ಷೆ ಜಯಸುಧಾ ಭೋವಿ ನೈರ್ಮಲ್ಯ ಸಿಬ್ಬಂದಿಗಳಿಗೆ ಸೂಚಿಸಿದರು. ಆ ವೇಳೆಯಲ್ಲಿ ಮುಖ್ಯ ಹೆದ್ದಾರಿಯ ದೊಡ್ಡ ಚರಂಡಿಗಳಲ್ಲಿ ಹೂಳು ತುಂಬಿರುವುದರಿಂದ ಅದನ್ನು ತೆಗೆಯಲು ಕಾರ್ಮಿಕರು ಸಿಗುತ್ತಿಲ್ಲ. ಕಾರ್ಮಿಕರೂ ಸಹ ಹೆಚ್ಚಿಗೆ ಹಣ ಕೇಳುತ್ತಿದ್ದಾರೆ ಎಂದು ನೈರ್ಮಲ್ಯ ಸಿಬ್ಬಂದಿ ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ತಕ್ಷಣವೇ ಟೆಂಡರ್‌ ಕರೆದು ಮುಖ್ಯ ಹೆದ್ದಾರಿಯ ದೊಡ್ಡ ಚರಂಡಿಗಳನ್ನು ಸ್ವಚ್ಛಗೊಳಿಸುವಂತೆ ಸೂಚಿಸಿದರು.

ಇದನ್ನೂ ಓದಿ👉 ಭಾರೀ ಮಳೆ; ಜಿಲ್ಲೆಯ ಈ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ನಾಳೆಯೂ ರಜೆ..!

ಚರಂಡಿ ನೀರು ಮನೆಗಳಿಗೆ..!
ಪ.ಪಂ.ದವರು ಅವೈಜ್ಞಾನಿಕವಾಗಿ ಬೇಡವಾದ ಕಡೆ ಚರಂಡಿ ನಿರ್ಮಾಣ ಮಾಡಿರುವುದರಿಂದ ಚರಂಡಿ ನೀರು ಮನೆಗಳಿಗೆ ಹಾಗೂ ಹೊಲಗದ್ದೆಗಳಿಗೆ ನುಗ್ಗುತ್ತಿದೆ ಎಂದು ರೈತರು ಪ.ಪಂ.ಗೆ ಮನವಿ ನೀಡಿದ್ದು, ಮಳೆಗಾಲದಲ್ಲಿ ನಮಗೇನಾದರೂ ತೊಂದರೆ ಆದರೆ, ಪ.ಪಂ.ದವರೇ ನೇರ ಹೊಣೆ ಎಂದು ಮನವಿ ನೀಡಿದ್ದಾರೆ ಎಂದು ಸಾರ್ವಜನಿಕರು ನೀಡಿದ ಮನವಿಯನ್ನು  ಸಭೆಯಲ್ಲಿ ಓದಿ ಹೇಳಲಾಯಿತು.   ಇದಕ್ಕೆ ಪ್ರತಿಕ್ರಿಯಿಸಿದ, ಸದಸ್ಯ ಮಹ್ಮದಗೌಸ್‌ ಮಕಾನದಾರ ಮಾತನಾಡಿ, ಪ.ಪಂ.ಸಭೆಯ ಗಮನಕ್ಕೂ ತರದೇ ಅರಣ್ಯ ಜಾಗದಲ್ಲಿ ಚರಂಡಿ ನಿರ್ಮಾಣ ಮಾಡಿದ್ದಿರಿ. ಅದನ್ನು ಮುಂದುವರೆದ ಕಾಮಗಾರಿ ಎಂದು ಮಾಡಬೇಕು. ಆದರೆ, ಅರ್ಧಮರ್ಧವಾಗಿ ಚರಂಡಿ ನಿರ್ಮಾಣ ಮಾಡಿರುವುದರಿಂದ ಏಳೆಂಟು ಮನೆಗಳು ಹಾಗೂ ಹೊಲಗದ್ದೆಗಳಿಗೆ ನೀರು ಹೊಕ್ಕುತ್ತಿದೆ. ಇದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು.   ಮಳೆಯ ನೀರು ಯಾವ ಕೆರೆಗೆ ಹರಿದುಹೋಗುತ್ತದೆ ಎಂಬುದನ್ನು ತಿಳಿದುಕೊಳ್ಳಲು ಸರ್ವೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇಂದೂ ಸಹ ತಹಶೀಲ್ದಾರ್‌ ಜೊತೆಗೂಡಿ ಈ ಸಮಸ್ಯೆ ಬಗೆಹರಿಸಲು ಚರ್ಚಿಸಲಾಗುವುದು ಎಂದರು.

ಇದನ್ನೂ ಓದಿ👉 ಭೂ ಕುಸಿತ ಪ್ರದೇಶದಲ್ಲಿ ವಾಹನ ನಿಲುಗಡೆಗೆ ನಿಷೇಧ ; ಡಿಸಿ ಲಕ್ಷ್ಮೀಪ್ರಿಯ ಆದೇಶ

7 ವರ್ಷದಿಂದ ವಾಣಿಜ್ಯ ಮಳಿಗೆ ಬಾಡಿಗೆ ನೀಡಿಲ್ಲ:
ಸರ್ಕಾರದ ನಿಯಮದಂತೆ ವಾಣಿಜ್ಯ ಮಳಿಗೆಗಳ ದರ  ಹೆಚ್ಚಿಗೆ ಮಾಡಿರುವುದರಿಂದ ಯಾರೂ ಸಹ ಟೆಂಡರ್‌ಗೆ ಬರುತ್ತಿಲ್ಲ. ಟೆಂಡರ್‌ ಕರೆದರೂ ಸಹ ಕಡಿಮೆ ದರದಲ್ಲಿ ಟೆಂಡರ್‌ ಕೂಗುತ್ತಾರೆ. ಇದನ್ನು ನೀವು ಜಿಲ್ಲಾಧಿಕಾರಿಗಳಿಗೆ ಕಳಿಸುತ್ತಿರಿ. ಅಲ್ಲಿಂದ ಯಾವುದೇ ಉತ್ತರ ಬರುತ್ತಿಲ್ಲ. ಇದರಿಂದ ಕಳೆದ ಏಳು ವರ್ಷಗಳಿಂದ  ಕೆಲವು ಮಳಿಗೆಗಳು ಖಾಲಿ ಬಿದ್ದಿವೆ. ಇದರಿಂದ ಪ.ಪಂ.ಕ್ಕೆ ಆದಾಯ ಸಹ ಬರುವುದಿಲ್ಲ ಎಂದು ಸದಸ್ಯರು ಹೇಳಿದರು. ಅಲ್ಲದೇ, ಪಟ್ಟಣ ವ್ಯಾಪ್ತಿಯಲ್ಲಿ ವಾಣಿಜ್ಯ ಮಳಿಗೆಗಳಿಗೆ ಎಷ್ಟು ದರವಿದೆ ಎಂಬುದನ್ನು ಚರ್ಚಿಸಿ, ವಾಣಿಜ್ಯ ಮಳಿಗೆಗಳಿಗೆ ಸ್ಥಳೀಯ ದರದಂತೆ ಫಿಕ್ಸ್‌ ಮಾಡಿ ನೀಡಲು ಸದಸ್ಯರು ಒತ್ತಾಯಿಸಿದರು. ಆಗ ಮುಖ್ಯಾಧಿಕಾರಿ, ಏನೇ ಮಾಡಿದರೂ ಸಹ ನಾವು ಜಿಲ್ಲಾಧಿಕಾರಿಗಳಿಗೆ ವರದಿ ನೀಡಬೇಕಾಗುತ್ತದೆ ಎಂದು  ಸಭೆಗೆ ತಿಳಿಸಿದರು.

ಮಾತಿನ ಚಕಿಮಿಕಿ..!
ಪ್ರಧಾನ‌ಮಂತ್ರಿ ಆವಾಸ ಯೋಜನೆ ಅಡಿಯಲ್ಲಿ ಮನೆಕಟ್ಟಿಕೊಂಡ ಫಲಾನುಭವಿಗಳಿಗೆ ಬಿಲ್ ಆಗದಿರುವುದ್ದರ ಬಗ್ಗೆ ಸಾಮಾನ್ಯ ಸಭೆಯ ಚರ್ಚೆಯ ವೇಳೆ ಇಬ್ಬರು ಸದಸ್ಯರ ನಡುವೆ ಮಾತಿನ ವಾಗ್ವಾದ ನಡೆಯಿತು.

ಇದನ್ನೂ ಓದಿ👉 ವಿಮಾನ ಪತನ; 242 ಪ್ರಯಾಣಿಕರೂ ಸಾವು, ವಿಮಾನ ಬಿದ್ದಿದ್ದು ಹಾಸ್ಟೆಲ್ ಕಟ್ಟಡದ ಮೇಲೆ; 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ..!

2015-16 ನೇ ಸಾಲಿನ  ಪ್ರಧಾನ‌ಮಂತ್ರಿ ಆವಾಸ ಯೋಜನೆ ಅಡಿಯಲ್ಲಿ  21 ಫಲಾನುಭವಿಗಳ ಮನೆಕಟ್ಟಿಕೊಂಡಿದ್ದಾರೆ. ಆದರೆ ಈ ವರೆಗೂ ಬಿಲ್ಲ ಆಗಿಲ್ಲ. ಏನು ಸಮಸ್ಯೆ ಎಂದು ಸದಸ್ಯ ರಜಾಖಾನ ಪಠಾಣ ಅಧಿಕಾರಿಗಳಿಗೆ‌  ಪ್ರಶ್ನಿಸುತ್ತಿರುವಾಗ ಸದಸ್ಯೆ ಬಿಬಿಜಾನ ಅವರು ಮಧ್ಯ ಪ್ರವೇಶಿಸಿ, ನಾನು ಸಾಲಸೋಲ ಮಾಡಿಕೊಂಡು 2015 ರಲ್ಲಿ ಮನೆ ಕಟ್ಟಿಕೊಂಡಿದ್ದೇನೆ. ಪಕ್ಕದ ಮನೆಯವರಿಗೆ ಬಿಲ್ ಆಗಿದೆ ನಮಗೆ ಏಕೆ ಆಗಿಲ್ಲವೆಂದು ಹೇಳುತ್ತಿದ್ದಂತೆ  ರಜಾಖಾನ   ನಡುವೆ ಮಾತಿನ ಚಕಮಕಿ ಜರುಗಿತು. ಅಧ್ಯಕ್ಷೆ ಮಧ್ಯ ಪ್ರವೇಶಿಸಿ ಸಮಧಾನ ಪಡಿಸಿದರು. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುವುದಾಗಿ ಹೇಳಿದರು.

ಈ ಸಭೆಯಲ್ಲಿ ಉಪಾಧ್ಯಕ್ಷೆ ರಹಿಮಾಬಾನು ಕುಂಕೂರ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಸುಬ್ಬಾಯವರ, ಮುಖ್ಯಾಧಿಕಾರಿ ಕುಮಾರ ನಾಯ್ಕ, ಪ.ಪಂ.ಸದಸ್ಯರು ಉಪಸ್ಥಿತರಿದ್ದರು.

error: Content is protected !!