Scheduled Castes Survey:
ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನದಾಸ ಏಕ ಸದಸ್ಯ ವಿಚಾರಣಾ ಆಯೋಗದ ನಿರ್ದೇಶನದಂತೆ ಪರಿಶಿಷ್ಟ ಜಾತಿ ಸಮುದಾಯದ ವಿವಿಧ ಅಂಶಗಳ ಬಗ್ಗೆ ದತ್ತಾಂಶಗಳನ್ನು ಸಂಗ್ರಹಿಸಲು ನಡೆಸಲಾಗುತ್ತಿದ್ದ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025 ರ ಕಾರ್ಯದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.100.32 ಸಾಧನೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಸಮೀಕ್ಷೆಗಾಗಿ 2011 ಜನಗಣತಿಯಂತೆ ಪ.ಜಾತಿಯ 26,617 ಮನೆಗಳನ್ನು ಭೇಟಿ ನೀಡುವ ಗುರಿ ಇದ್ದು, ಪ್ರಸ್ತುತ ಗಣತಿಯಲ್ಲಿ 28,964 ಪ.ಜಾತಿಯ ಮನೆಗಳನ್ನು ಗುರುತಿಸಿ ಸಮೀಕ್ಷೆ ನಡೆಸಲಾಗಿದ್ದು, ಮನೆ ಗಣತಿಯಲ್ಲಿ ಶೇ.108.82 ಸಾಧನೆ ಆಗಿದ್ದು, 2025 ರ ಅಂದಾಜು ಪ.ಜಾತಿಯ ಜನಸಂಖ್ಯೆಯ 1,16,781 ಗುರಿಗೆ ಎದುರಾಗಿ 1,17,156 ಪ.ಜಾತಿಯ ಜನರನ್ನು ಸಮೀಕ್ಷೆಗೆ ಒಳಪಡಿಸಿದ್ದು ಶೇ.100.32 ಸಾಧನೆ ಮಾಡಲಾಗಿದೆ.

ಇದನ್ನೂ ಓದಿ👉ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ : ನಾಗೇಶ್ ರಾಯ್ಕರ್..!

ಮೇ.27 ರ ವರೆಗೆ ನಡೆಸಿರುವ ಸಮೀಕ್ಷೆಯಲ್ಲಿ ವಿಧಾನಸಭಾ ಕ್ಷೇತ್ರವಾರು, ಹಳಿಯಾಳದಲ್ಲಿ ಪ.ಜಾತಿಯ 5,369 ಮನೆಗಳನ್ನು ಸಮೀಕ್ಷೆ ಮಾಡಿದ್ದು, 20,462 ಜನರನ್ನು ಗುರುತಿಸಲಾಗಿದ್ದು, ಕಾರವಾರದಲ್ಲಿ 3,576 ಮನೆಗಳ ಸಮೀಕ್ಷೆಯಲ್ಲಿ 14,039 ಮಂದಿ, ಕುಮಟಾದ 3,310 ಮನೆಗಳ ಸಮೀಕ್ಷೆಯಲ್ಲಿ 13,095 ಮಂದಿ, ಭಟ್ಕಳದ 4,398 ಮನೆಗಳ ಸಮೀಕ್ಷೆಯಲ್ಲಿ 20,195 ಮಂದಿ, ಶಿರಸಿಯ 4,640 ಮನೆಗಳ ಸಮೀಕ್ಷೆಯಲ್ಲಿ 19,020 ಮಂದಿ, ಯಲ್ಲಾಪುರದ 7,671 ಮನೆಗಳ ಸಮೀಕ್ಷೆಯಲ್ಲಿ 30,345 ಮಂದಿ ಪ.ಜಾತಿಯ ನಾಗರೀಕರು ಸೇರಿದಂತೆ ಒಟ್ಟು 28,964 ಮನೆಗಳಲ್ಲಿ 1,17,156 ಜನರನ್ನು ಗುರುತಿಸಿದ್ದು, ಇದೇ ಅವಧಿಯಲ್ಲಿ 3,33,024 ಪ.ಜಾತಿಯಲ್ಲದ ಮನೆಗಳಗೆ ಭೇಟಿ ನೀಡಲಾಗಿದೆ.

ಜಿಲ್ಲೆಯಲ್ಲಿ ಈ ಸಮೀಕ್ಷೆಗಾಗಿ 1,445 ಗಣತಿದಾರರು, 156 ಕಾಯ್ದಿರಿಸಿದ ಗಣತಿದಾರರು, 144 ಮೇಲ್ವಿಚಾರಕರು ಮತ್ತು 19 ಕಾಯ್ದಿರಿಸಿದ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದ್ದು, ಇವರಿಗೆ ಅಗತ್ಯ ತರಬೇತಿ ನೀಡಲು 4 ಜಿಲ್ಲಾ ಮಾಸ್ಟರ್ ಟ್ರೈನರ್, 57 ತಾಲೂಕು ಮಾಸ್ಟರ್ ಟ್ರೈನರ್ಗಳನ್ನು ನಿಯೋಜಿಸಿದ್ದು, ಸಮೀಕ್ಷೆ ಸಂದರ್ಭದಲ್ಲಿ ಕಂಡು ಬರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಒಬ್ಬ ತಾಂತ್ರಿಕ ಸಮಾಲೋಚಕರನ್ನು ನೇಮಿಸಲಾಗಿತ್ತು.

ಇದನ್ನೂ ಓದಿ👉ಬೇರೆ ಕಂಪನಿಗೆ ಹೋಗದಂತೆ ತಡೆಯಲು ಭಾರತದ ಮೂಲದ ಈ ವ್ಯಕ್ತಿಗೆ ಸುಮಾರು 850 ಕೋಟಿ ರೂ. ಆಫರ್‌ ನೀಡಿ ಉಳಿಸಿಕೊಂಡಿತ್ತಂತೆ ಗೂಗಲ್‌..! ಯಾರು ಗೊತ್ತೆ..?

ಪ್ರಸ್ತುತ ನಡೆಯುತ್ತಿರುವ ಪ.ಜಾತಿಯ ಸಮಗ್ರ ಸಮೀಕ್ಷೆಯನ್ನು ಮೇ.29 ರವರೆಗೆ ವಿಸ್ತರಿಸಲಾಗಿದ್ದು, ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ಕಾರ್ಯವನ್ನು ಮೇ 30 ರಿಂದ ಜೂನ್ 1 ರವರೆಗೆ ಮರು ನಿಗಧಿಪಡಿಸಲಾಗಿದ್ದು, ಆನ್ಲೈನ್ ಮೂಲಕ ಸ್ವಯಂ ಘೋಷಣೆ ಜೂನ್ 1 ರ ವರೆಗೆ ಮುಂದುವರೆಯಲಿದ್ದು, ಈ ವಿಸ್ತರಣೆಯ ಅವಧಿಯಲ್ಲಿ ಪ.ಜಾತಿಯ ನಾಗರೀಕರ ಸಂಖ್ಯೆಯಲ್ಲಿ ಇನ್ನೂ ಹೆಚ್ಚಳವಾಗಲಿದೆ.

ಪ.ಜಾತಿಯ ಸಮಗ್ರ ಸಮೀಕ್ಷೆಯ ಮೂಲಕ ರಾಜ್ಯದ ಎಲ್ಲ ಪರಿಶಿಷ್ಟ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಸ್ಥಿತಿಗತಿಗಳ ಕುರಿತು ಸಮಗ್ರ ಅಂಕಿ-ಅಂಶಗಳನ್ನು ಸಂಗ್ರಹಿಸುವುದು ಮಾತ್ರವಲ್ಲದೆ ಸಮೀಕ್ಷೆಯಲ್ಲಿ ಅನುಸರಿಸಿದ ವಿವಿಧ ಮಾನದಂಡಗಳ ಆಧಾರದ ಮೇಲೆ ಸಂಗ್ರಹಿಸಿದ ಅಂಕಿ-ಅಂಶಗಳ ಹಿನ್ನಲೆಯಲ್ಲಿ ಒಳ ಮೀಸಲಾತಿಯ ವರ್ಗೀಕರಣ ಮಾಡುವ ಉದ್ದೇಶ ಹೊಂದಲಾಗಿದೆ. ಸಮೀಕ್ಷಾ ಪ್ರಶ್ನಾವಳಿಯಲ್ಲಿ 42 ಪ್ರಶ್ನೆಗಳಿದ್ದು, ಇದರಲ್ಲಿ ಪ.ಜಾತಿಯ ವ್ಯಕ್ತಿಗಳ ಕೌಟುಂಬಿಕ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ವಿಷಯಗಳನ್ನೊಳಗೊಂಡಂತೆ ಸಮಗ್ರವಾದ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.

ಇದನ್ನೂ ಓದಿ👉ಚಿನ್ನದ ಬೆಲೆ ಸತತ ಎರಡು ದಿನ ಇಳಿಕೆ ನಂತರ ಸ್ಥಿರ; ಈಗ ಬೆಂಗಳೂರಲ್ಲಿ ಬಂಗಾರದ ಬೆಲೆ ಎಷ್ಟಿದೆ..?

ಉತ್ತರ ಕನ್ನಡ ಜಿಲ್ಲೆಯಲ್ಲಿ ಪ.ಜಾತಿಯ ಸಮಗ್ರ ಸಮೀಕ್ಷೆಗೆ ನಿಗಧಿಪಡಿಸಿದ್ದ ಗುರಿಯಲ್ಲಿ ಈಗಾಗಲೇ ಗುರಿ ಮೀರಿದ ಸಾಧನೆಯಾಗಿದ್ದು, ಇನ್ನೂ ಕೂಡಾ ಸಮೀಕ್ಷೆಯ ಅವಧಿ ಉಳಿದಿರುವುದರಿಂದ ಈ ಸಮಯದಲ್ಲಿ ಸಮೀಕ್ಷೆಯನ್ನು ಮುಂದುವರೆಸುವ ಮೂಲಕ ಜಿಲ್ಲೆಯ ಯಾವುದೇ ಪ.ಜಾತಿಯ ಕುಟುಂಬ ಈ ಸಮೀಕ್ಷೆಯಿಂದ ವಂಚಿತವಾಗದಂತೆ ಎಚ್ಚರ ವಹಿಸಲಾಗುವುದು. ಗಣತಿದಾರರು ರಜೆ ದಿನಗಳಲ್ಲಿಯು ಕೂಡಾ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಸಮೀಕ್ಷೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ತಾಂತ್ರಿಕ ಸಮಸ್ಯೆ ಸೇರಿದಂತೆ ಯಾವುದೇ ಸಮಸ್ಯೆಗಳು ಕಂಡು ಬಂದಿರುವುದಿಲ್ಲ.; ವೈ.ಕೆ.ಉಮೇಶ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ, ಉತ್ತರ ಕನ್ನಡ ಜಿಲ್ಲೆ.

error: Content is protected !!