Kalaburgi Triple Murder; ಕಲಬುರ್ಗಿ: ಹೆಣ್ಣಿನ ಸೇಡಿಗಾಗಿ ಇಲ್ಲಿ ತ್ರಿಬಲ್ ಮರ್ಡರ್ ನಡೆದಿದೆ. ಗಂಡನ ಕೊಂದವರನ್ನು ಮುಗಿಸದೇ ತಾಳಿ ತೆಗೆಯಲ್ಲ ಅಂತ ಪ್ರತಿಜ್ಞೆ ಮಾಡಿದ್ದ ಆ ಹೆಣ್ಣಿನ ಕೋಪಜ್ವಾಲೆಯಲ್ಲಿ, ಮೂವರು ಹೆಣವಾಗಿದ್ದಾರೆ. ಕಲಬುರ್ಗಿ ತ್ರಿಬಲ್ ಮರ್ಡರ್ ಕೇಸಿನಲ್ಲಿ ರೋಚಕ ಕಹಾನಿಗಳು ಹೊರ ಬರುತ್ತಿವೆ. 8 ತಿಂಗಳ ಹಿಂದೆ ಕೊಲೆಯಾಗಿದ್ದ ರೌಡಿಶೀಟರ್ ಸೋಮು ತಾಳಿಕೋಟಿ ಪತ್ನಿಯ ಶಪಥ ಮತ್ತೆ ಮೂರು ಜೀವ ತೆಗೆಯುವಂತೆ ಮಾಡಿದೆ.
ಹೆಣ್ಣಿನ ದ್ವೇಷ ಎಷ್ಟೊಂದು ಕೆಟ್ಟದು ಎಂಬುದು ಇಲ್ಲಿ ಸಾಬೀತಾಗಿದೆ. ಕಲಬುರ್ಗಿ ಹೊರವಲಯದ ಡ್ರೈವರ್ ಧಾಬಾದಲ್ಲಿ ಮಂಗಳವಾರ ತಡರಾತ್ರಿ ನಡೆದ ಮೂರು ಕೊಲೆಗಳು ಇದಕ್ಕೆ ಸಾಕ್ಷಿಯಾಗಿವೆ. ಗುರುತು ಸಿಗಲಾರದಷ್ಟು ಭಯಂಕರವಾಗಿ ಕೊಲ್ಲಲು ಅದೆಂಥಾ ದ್ವೇಷ ಮನದಲ್ಲಿ ಮನೆ ಮಾಡಿತ್ತು ಎಂಬುದು ಸಾರ್ವಜನಿಕರಲ್ಲಿ ಕಾಡುತ್ತಿರುವ ಪ್ರಶ್ನೆಯಾಗಿದೆ.
ಅದು ನವೆಂಬರ್, 2024….!
2024ರ ನವೆಂಬರ್ನಲ್ಲಿ ಡ್ರೈವರ್ ದಾಬಾ ಮಾಲೀಕ ಸಿದ್ಧಾರೂಢ ಹಾಗೂ ಇತರರು ಸೇರಿಕೊಂಡು ರೌಡಿಶೀಟರ್ ಸೋಮು ತಾಳಿಕೋಟಿಯನ್ನು ಬರ್ಬರವಾಗಿ ಹತ್ಯೆ ಮಾಡಿ, ಶವವನ್ನು ಅನಾಥವಾಗಿ ಎಸೆದು ಹೋಗಿದ್ದರು. ಈ ವೇಳೆ ಕೊಲೆಯಾದ ಸೋಮು ತಾಳಿಕೋಟಿಯ ಪತ್ನಿ ಭಾಗ್ಯಶ್ರೀ ‘ತನ್ನ ಪತಿಯನ್ನು ಕೊಂದವರನ್ನು ಮುಗಿಸೋವರೆಗೂ ತಾಳಿ ತೆಗೆಯುವುದಿಲ್ಲ’ ಎಂದು ಶಪಥ ಮಾಡಿದ್ದಳು.
Kalaburgi Triple Murder; ಡ್ರೈವರ್ ದಾಬಾದ ಮಾಲೀಕ ಸಿದ್ಧಾರೂಢ ಜೈಲಿನಿಂದ ಹೊರಬರುತ್ತಲೇ ಸೋಮು ತಾಳಿಕೋಟಿ ಪತ್ನಿ ಭಾಗ್ಯಶ್ರೀ ತಾಳಿಕೋಟಿ, ಮೃತನ ಸಹೋದರ ರಾಚಣ್ಣ ತಾಳಿಕೋಟಿ ಸೇರಿ ಹಲವು ಸಹಚರರು ಕೊಲೆಗೆ ಸ್ಕೆಚ್ ಹಾಕಿದ್ದಾರೆ.
ಪತಿಯ ಕೊಲೆಯಾದ ಎಂಟು ತಿಂಗಳ ನಂತರ ಕಾರಹುಣ್ಣಿಮೆಯ ಕರಿಯಂದು, ಮುಂದಿನ ಅಮಾವಾಸ್ಯೆಗೆ ಮೂಹೂರ್ತ ಫಿಕ್ಸ್ ಮಾಡಿದ್ದರು. ಅದರಂತೆ ಮಂಗಳವಾರ ತಡರಾತ್ರಿ ಒಂದು ಜೀಪ್, ಎರಡು ಕಾರ್ಗಳಲ್ಲಿ ಮಾರಕಾಸ್ತ್ರಗಳೊಂದಿಗೆ 10ಕ್ಕೂ ಹೆಚ್ಚಿನ ಜನರು ಆಗಮಿಸಿ ಅಟ್ಯಾಕ್ ನಡೆಸಿ ಮೊದಲಿಗೆ ಕಣ್ಣಿಗೆ ಖಾರದಪುಡಿ ಎರಚಿ ನಂತರ ಬರ್ಬರವಾಗಿ ಸಿದ್ದಾರೂಢ ತುಗದಿ, ಜಗದೀಶ್, ರಾಮಚಂದ್ರ ಜೀವ ತೆಗೆದಿದ್ದಾರೆ. ಇದೀಗ ಕೊಲೆ ಮಾಡಿರುವ 10 ಮುಖ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.