Sea Bird News; ಕಾರವಾರ; ಸೀಬರ್ಡ್ ನೌಕಾನೆಲೆ ಯೋಜನೆಯಡಿ ಭೂಮಿ ಕಳೆದುಕೊಂಡಿದ್ದ 57 ಭೂ ಮಾಲೀಕರಿಗೆ ಹೆಚ್ಚುವರಿ ಪರಿಹಾರದ ಮೊತ್ತ ರೂ.10.47 ಕೋಟಿಗಳನ್ನು ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಶನಿವಾರ ವಿತರಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂತ್ರಸ್ಥ ಭೂ ಮಾಲೀಕರ ಬ್ಯಾಂಕ್ ಖಾತೆಗಳಿಗೆ ಆರ್.ಟಿ.ಜಿ.ಎಸ್ ಮೂಲಕ ಹಣ ವರ್ಗಾವಣೆ ಮಾಡಿದ ಸಚಿವರು, ನೌಕನೆಲೆಗೆ ಅಗತ್ಯವಿರುವ ಜಮೀನು ಮತ್ತು ಎಲ್ಲಾ ರೀತಿಯ ವ್ಯವಸ್ಥೆಯನ್ನು ಕಾರವಾರ ತಾಲೂಕಿನ ಜನತೆ ಕಲ್ಪಿಸಿ ನೌಕಾನೆಲೆ ನಿರ್ಮಿಸಲು ಸಹಕಾರ ನೀಡಿದ್ದಾರೆ. ಪ್ರಸ್ತುತ ಹೆಚ್ಚುವರಿ ಪರಿಹಾರದ ಮೊತ್ತ 10.47 ಕೋಟಿ ಮಾತ್ರ ಬಂದಿದ್ದು, ಇನ್ನೂ 60 ಕೋಟಿ ರೂ ಗಳ ಪರಿಹಾರದ ಮೊತ್ತ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಬೇಕಿದ್ದು, ಶೀಘ್ರದಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಿದ್ದು, ಸಂಸದರು ಈ ಬಗ್ಗೆ ಪ್ರಯತ್ನ ನಡೆಸುವಂತೆ ಹಾಗೂ ಇದಕ್ಕಾಗಿ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.
ಕಾರ್ಯಕ್ರದಲ್ಲಿ ಆನ್ ಲೈನ್ ಮೂಲಕ ಭಾಗವಹಿಸಿದ್ದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ , ಅತ್ಯಂತ ಪಾರದರ್ಶಕವಾಗಿ ಪರಿಹಾರವನ್ನು ಮೊತ್ತವನ್ನು ಸಂತ್ರಸ್ಥರಿಗೆ ವಿತರಿಸಲಾಗಿದ್ದು, ಬಾಕಿ ಉಳಿದ ಮೊತ್ತ ಶೀಘ್ರದಲ್ಲಿ ಅವರಿಗೆ ತಲುಪುವಂತಾಗಬೇಕು ಹಾಗೂ ಪರಿಹಾರ ಪಡೆದ ಸಂತ್ರಸ್ಥರು ಸದ್ರಿ ಮೊತ್ತವನ್ನು ದುಂದು ವೆಚ್ಚ ಮಾಡದೇ, ಉತ್ತಮ ಕಾರ್ಯಗಳಿಗೆ ಬಳಿಸಿಕೊಳ್ಳುವಂತೆ ತಿಳಿಸಿದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಜಿಲ್ಲೆಯ ಜನರ ತ್ಯಾಗದಿಂದ ಸೀಬರ್ಡ್ ಯೋಜನೆ ಬಂದಿದೆ, ಸಂತ್ರಸ್ಥರ ಹೆಚ್ಚುವರಿ ಪರಿಹಾರ ಮೊತ್ತ ಬಿಡುಗಡೆ ಕುರಿತಂತೆ ಕೇಂದ್ರ ರಕ್ಷಣಾ ಸಚಿವರೊಂದಿಗೆ ಚರ್ಚಿಸಿ, ಇದಕ್ಕಾಗಿ ಪ್ರತ್ಯೇಕ ಅಧಿಕಾರಿಯನ್ನು ನಿಯೋಜಿಸಿದ ನಂತರ ಈ ಕಾರ್ಯಕ್ಕೆ ವೇಗ ದೊರೆತಿದೆ. ಪ್ರಸ್ತುತ ಜಿಲ್ಲೆಯಲ್ಲಿ ಪರಿಹಾರದ ಕುರಿತಂತೆ ಯಾವುದೇ ಫೈಲ್ ಇಲ್ಲ , ಎಲ್ಲಾ ಕಡತಗಳನ್ನು ಬೆಂಗಳೂರು ಗೆ ತಲುಪಿದೆ. ಬಾಕಿ ಇರುವ ಪರಿಹಾರದ ಮೊತ್ತವನ್ನು ಮಂಜೂರು ಮಾಡಿಸುವ ಜವಾಬ್ದಾರಿ ನನ್ನದಾಗಿದ್ದು, ವಿಶೇಷ ಭೂಸ್ವಾಧಿನ ನೌಕಾನೆಲೆ ಕಾರ್ಯಲಯದಲ್ಲಿ (ಎಸ್ಎಲ್ಓ) ಆಧುನಿಕರಣ ಬಳಸಿಕೊಂಡು ತಂಬಾ ಸುಧಾರಣೆ ಹೊಂದಿದೆ. ಹಳೆಯ ಮತ್ತು ಹೊಸ ದಾಖಲೆಗಳನ್ನು ಕಂಪ್ಯೂಟರೈಜಡ್ ಮಾಡಲಾಗಿದೆ. 30 ಲಕ್ಷ ದಾಖಲೆಗಳಲ್ಲಿ, 3 ಲಕ್ಷ ದಾಖಲೆಗಳನ್ನು ಕಂಪ್ಯೂಟ ರೈಜಡ್ ಮಾಡಿ ಸಂರಕ್ಷಿಸಿಡಲಾಗಿದೆ ಪುನರ್ವಸತಿ ಕೇಂದ್ರದ ಸುಧಾರಣೆ ಗೆ ಪ್ರಯತ್ನ ಮಾಡಲಾಗುವುದು ಎಂದರು.
ಕಾರವಾರದಲ್ಲಿ ಗೋಶಾಲೆ ಉದ್ಘಾಟಿಸಿದ ಸಚಿವ, ಗೋವು ತಾಯಿ ಸಮಾನ ಅಂದ್ರು; ಸಚಿವ ಮಂಕಾಳ ವೈದ್ಯ
ಕರ್ನಾಟಕ ರಾಜ್ಯ ಮಾರ್ಕೇಟಿಂಗ್ ಕನ್ಸಲೆಂಟ್ ಅಂಡ್ ಏಜೆನ್ಸಿಸ್ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್ ಮಾತನಾಡಿ, ಸೀ ಬರ್ಡ್ ಪರಿಹಾರದ ಮೊತ್ತ ಪಾವತಿ ಪ್ರಕರಣದಲ್ಲಿ ವಿಳಂಬದ ಕಾರಣ ಹಲವು ಮಂದಿಗೆ ಪರಿಹಾರ ದೊರೆತಿಲ್ಲ ಅವವರಿಗೂ ಪರಿಹಾರದ ಮೊತ್ತ ದೊರೆಯುವ ರೀತಿಯಲ್ಲಿ ಕ್ರಮವಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಪ್ರವಾಸೋದÀ್ಯಮ ಇಲಾಖೆಯಿಂದ ಜಿಲ್ಲೆಯ ಕಡಲ ತೀರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜೀವರಕ್ಷಕರಿಗೆ 17.55 ಲಕ್ಷ ರೂ ಮೊತ್ತದ ಜೀವ ರಕ್ಷಕ ಉಪಕರಣಗಳನ್ನು ವಿತರಿಸಲಾಯಿತು. ಅಂಕಿ ಅಂಶ ಇಲಾಖೆಯ 2023-24 ಸಾಲಿನ ಪುಸ್ತಕ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾದಿಕಾರಿ ಕೆ.ಲಕ್ಷ್ಮೀಪ್ರಿಯ, ಜಿ.ಪಂ. ಸಿಇಓ ಈಶ್ವರ ಕಾಂದೂ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಉಪ ವಿಭಾಗಾಧಿಕಾರಿ ಕನಿಷ್ಕ, ಪ್ರೋಬೇಷನರಿ ಐ.ಎ.ಎಸ್ ಅಧಿಕಾರಿ ಝುಪಿಶಾನ್ ಹಕ್, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ನಾವಿ, ಜಿಲ್ಲಾ ಸಂಖ್ಯ ಸಂಗ್ರಹಣಾಧಿಕಾರಿ ಸೋಮಶೇಖರ್ ಮೇಸ್ತಾ ಮತ್ತಿತರರು ಉಪಸ್ಥಿತರಿದ್ದರು.