ಮುರುಡೇಶ್ವರದಲ್ಲಿ ಮಹಾಶಿವರಾತ್ರಿಯ ಜಾಗರಣೆ ಉತ್ಸವ, ಮುರುಡೇಶ್ವರ ಸಮಗ್ರ ಅಭಿವೃದ್ಧಿಗೆ ಯೋಜನೆ : ಸಚಿವ ಮಾಂಕಾಳ ವೈದ್ಯ

ಕಾರವಾರ: ಮುರುಡೇಶ್ವರದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದ್ದು, ಪ್ರವಾಸಿಗರ ಅನುಕೂಲಕ್ಕಾಗಿ ವ್ಯವಸ್ಥಿತ ರೀತಿಯಲ್ಲಿ ಪಾರ್ಕಿಂಗ್, ಡ್ರೈನೇಜ್ ಮಾಡಲಾಗುವುದು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ ಎಸ್ ವೈದ್ಯ ತಿಳಿಸಿದರು.

ಅವರು ಭಾನುವಾರ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಮುರುಡೇಶ್ವರದಲ್ಲಿ ಆಯೋಜಿಸಿದ್ದ ಮಹಾಶಿವರಾತ್ರಿ ಜಾಗರಣೆ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುರುಡೇಶ್ವರದಲ್ಲಿ ಈ ವರ್ಷ ಭಸ್ಮರ್ಚನೆ, ಗೋಮಾತೆ ಪೂಜೆ, ಸಮುದ್ರ ಆರತಿ, ಲಕ್ಷ ಬಿಲ್ವರ್ಚನೆ ಮತ್ತು ಶಿವರಾತ್ರಿ ಜಾಗರಣೆ ಕಾರ್ಯಕ್ರಮ ಆಯೋಜಿಸಿದ್ದು, ಎಲ್ಲಾ ಕಾರ್ಯಕ್ರಮ ಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತಧಿಗಳು ಭಾಗವಹಿಸಿದ್ದಾರೆ, ಜಿಲ್ಲೆಯಲ್ಲಿ ಶಿಕ್ಷಣದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.

ಜಿಲ್ಲೆಯ ಮುರುಡೇಶ್ವರ, ಗೋಕರ್ಣ, ಗುಣವಂತೇಶ್ವರ, ಧಾರೇಶ್ವರ ಮತ್ತು ಶೇಜೇಶ್ವರದಲ್ಲಿನ ಶಿವನ ದೇವಾಲಯಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು.

ಮುರುಡೇಶ್ವರ ನನ್ನ ಜನ್ಮ ಭೂಮಿ ಹಾಗೂ
ಕರ್ಮ ಭೂಮಿ, ಮುರುಡೇಶ್ವರ ದೇವರ ಆಶೀರ್ವಾದದಿಂದ ನಾನೂ ಅಭಿವೃದ್ಧಿ ಆಗಿದ್ದೇನೆ. ಇಲ್ಲಿನ ಜನತೆ ನನ್ನನ್ನು ಎತ್ತರಕ್ಕೆ ಬೆಳೆಸಿದ್ದಾರೆ, ಇಲ್ಲಿ ಪ್ರತಿ ವರ್ಷ ನಿರಂತರವಾಗಿ ಶಿವರಾತ್ರಿ ಕಾರ್ಯಕ್ರಮ ನಡೆಯುವಂತೆ ಮಾಡಲಾಗುವುದು ಎಂದರು.

ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಮಾತನಾಡಿ, ಪ್ರತಿ ವರ್ಷ ಜಿಲ್ಲೆಯ 5 ಸ್ಥಳದಲ್ಲಿ ಶಿವರಾತ್ರಿ ಆಚರಣೆ ಮಾಡುತ್ತಿದ್ದೇವೆ, ಈ ಎಲ್ಲಾ ಕಡೆಗಳಲ್ಲಿ ಜನ ಸಂದಣಿ ನಿಯಂತ್ರಣ, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಭಕ್ತರಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯದ ವ್ಯವಸ್ಥೆ ಮಾಡಿದೆ. ಬಂದೋಬಸ್ತು ಕೂಡಾ ಉತ್ತಮವಾಗಿದ್ದು, ಉತ್ತಮ ರೀತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದರು.

ಇದೆ ಸಂದರ್ಭದಲ್ಲಿ, ಮಾವಳ್ಳಿ 1 ಮತ್ತು 2 ಗ್ರಾಮ ಪಂಚಾಯತ್ ಗಳನ್ನು ಮುರುಡೇಶ್ವರ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆರಿಸಿದ ಸಚಿವರನ್ನು ಸನ್ಮಾನಿಸಲಾಯಿತು.

ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸತೀಶ್ ನಾಯ್ಕ, ಜಿಲ್ಲಾ‌ ಪಂಚಾಯತ್ ಸಿಇಒ ಡಾ. ದಿಲೀಷ್ ಶಶಿ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ. ಎನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ್, ಉಪ ವಿಭಾಗಾಧಿಕಾರಿ ಪ್ರವೀಣ್ ಕರಾoಡೆ, ತಹಶೀಲ್ದಾರ್ ನಾಗೇಂದ್ರ ಕೊಳಶೆಟ್ಟಿ, ಡಿವೈಎಸ್ಪಿ ಗಿರೀಶ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಜು ನಾಯ್ಕ, ಮುರುಡೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಜಯರಾಮ ಅಡಿಗ, ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ, ಮುರುಡೇಶ್ವರ ಗ್ರಾಮೀಣ ಪ್ರತಿಷ್ಠಾನದ ಅಧ್ಯಕ್ಷ ಎಸ್ ಎಸ್ ಕಾಮತ್, ಡಾ. ಪುಷ್ಪಲತಾ ವೈದ್ಯ, ಮಾವಳ್ಳಿ-1 ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷೆ ನಯನಾ ನಾಯ್ಕ, ಮಾವಳ್ಳಿ-2 ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷೆ ನಾಗರತ್ನ ಪಡಿಯರ ಸ್ಥಳೀಯ ಮುಖಂಡ ಆರ್.ವಿ‌ ಕಾಮತ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಭಜನಾ ಕಾರ್ಯಕ್ರಮ,ಹರಿಕಥೆ, ಖ್ಯಾತ ಗಾಯಕ ಹೇಮಂತ ಅವರ ತಂಡದಿಂದ ಕಾರ್ಯಕ್ರಮ,ಬಿಗ್ ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ ಅವರಿಂದ ಮನರಂಜನಾ ಕಾರ್ಯಕ್ರಮ, ನಟಿ ರಾಗಿಣಿ ದ್ವಿವೇದಿ ಅವರಿಂದ ಕಾರ್ಯಕ್ರಮ, ಖ್ಯಾತ ಜೋಗಿ ಸುನೀತಾ ಇವರಿಂದ ಸಂಗೀತಾ ಕಾರ್ಯಕ್ರಮ,ಖ್ಯಾತ ಗಾಯಕಿ ಮಾನಸಾ ಹೊಳ್ಳ ಇವರಿಂದ ಕಾರ್ಯಕ್ರಮ, ಶಿವಧ್ಯಾನ ಮತ್ತು ಹಲವಾರು ಕಾರ್ಯಕ್ರಮಗಳು ಹಾಗೂ ಸ್ಥಳೀಯ ಪ್ರತಿಭೆಗಳಾದ
ಧನಲಕ್ಷ್ಮೀ ಮೊಗೇರ ಅವರಿಂದ
ಭರತನಾಟ್ಯ, ಮಂಕಿಯ ಶಿವಮ್ಮ ದುರ್ಗಮ್ಮ ಭಜನಾ ತಂಡ ಮತ್ತು ಅಳ್ವೆಕೋಡಿಯ ದುರ್ಗಾ ಪರಮೇಶ್ವರಿ ಭಜನಾ ತಂಡದಿಂದ ಭಜನಾ ಕುಣಿತ, ಗಣೇಶ ಆಚಾರ್ಯ ಅವರಿಂದ ಗಾಯನ ಕಾರ್ಯಕ್ರಮ, ಆದರ್ಶ ದಂಪತಿ ಕಾರ್ಯಕ್ರಮದಲ್ಲಿ ಮತ್ತು ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು