ಸಿನಿಮೀಯ ರೀತಿಯಲ್ಲಿ ಉದ್ಯಮಿಯಿಂದ, 2 ಕೋಟಿ ರೂ. ಎಗರಿಸಿದ ಖದೀಮರು..!

Robbery News; ಬೆಂಗಳೂರು: ಹಾಡಹಗಲೇ ಸಿನಿಮೀಯ ರೀತಿಯಲ್ಲಿ 2 ಕೋಟಿ ರೂಪಾಯಿ ದರೋಡೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಜೂನ್ 25ರಂದು ವಿದ್ಯಾರಣ್ಯಪುರ ಠಾಣೆ ವ್ಯಾಪ್ತಿಯ ಎಂ.ಎಸ್. ಪಾಳ್ಯದಲ್ಲಿ ಘಟನೆ ನಡೆದಿದ್ದು, ಹಣ ಕಳೆದುಕೊಂಡ ಉದ್ಯಮಿ ಶ್ರೀಹರ್ಷ ವಿ. ಅವರು ನೀಡಿರುವ ದೂರಿನ ಅನ್ವಯ ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಂಗೇರಿ ಮೂಲದ ಶ್ರೀಹರ್ಷ ತಮ್ಮ ಉದ್ಯಮಕ್ಕೆ‌ ಅಗತ್ಯವಿರುವ ಯಂತ್ರವೊಂದನ್ನು ಜರ್ಮನಿಯಿಂದ ಆಮದು ಮಾಡಿಕೊಳ್ಳಬೇಕಿದ್ದುದರಿಂದ 2 ಕೋಟಿ ರೂ. ಹಣವನ್ನು ಯುಎಸ್‌ಡಿಐಟಿಗೆ ಕನ್ವರ್ಟ್ ಮಾಡಿಸಿಕೊಳ್ಳಬೇಕಿತ್ತು. ಈ ಸಂದರ್ಭದಲ್ಲಿ ತನ್ನ ಸ್ನೇಹಿತರೊಬ್ಬರ ಮೂಲಕ ಶ್ರೀಹರ್ಷ ಅವರಿಗೆ ಬೆಂಜಮಿನ್ ಹರ್ಷ ಎಂಬಾತನ ಪರಿಚಯವಾಗಿತ್ತು. ಯುಎಸ್‌ಡಿಐಟಿಗೆ ಹಣ ಕನ್ವರ್ಟ್ ಮಾಡಿಸುವ ಸಲುವಾಗಿ ಚರ್ಚಿಸಿದಾಗ ಎಂ‌.ಎಸ್. ಪಾಳ್ಯದಲ್ಲಿರುವ ಎ.ಕೆ. ಎಂಟರ್ಪ್ರೈಸಸ್ ಬಳಿ ಬರುವಂತೆ ಬೆಂಜಮಿನ್ ಹರ್ಷ ಸೂಚಿಸಿದ್ದ. ಅದರಂತೆ ಜೂನ್ 25ರಂದು ಮಧ್ಯಾಹ್ನ 3 ಗಂಟೆಗೆ ಎಂ.ಎಸ್.ಪಾಳ್ಯದ ಎ.ಕೆ. ಎಂಟರ್ಪ್ರೈಸಸ್‌ನಲ್ಲಿ ಬೆಂಜಮಿನ್ ಹರ್ಷ ಹಾಗೂ ಶ್ರೀಹರ್ಷ ಭೇಟಿಯಾಗಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.

Robbery News;ಶ್ರೀಹರ್ಷ, ಬೆಂಜಮಿನ್ ಮತ್ತು ಆತನ ಇಬ್ಬರು ಸ್ನೇಹಿತರು 2 ಕೋಟಿ ರೂ. ಹಣ ಎಣಿಕೆ ಮಾಡುತ್ತಿದ್ದಾಗ ಏಕಾಏಕಿ ಅಂಗಡಿಗೆ ನುಗ್ಗಿದ್ದ 6-7 ಜನರು ಚಾಕುವಿನಿಂದ ಶ್ರೀಹರ್ಷ ಅವರ ಮೇಲೆ ಹಲ್ಲೆಗೈದಿದ್ದಾರೆ. ಬಳಿಕ ಕತ್ತಿಗೆ ಚಾಕು ಇಟ್ಟು ಬೆಂಜಮಿನ್ ಹರ್ಷ, ಶ್ರೀಹರ್ಷ ಮತ್ತು ಅವರ ಸ್ನೇಹಿತರನ್ನು ರೂಮ್‌ನಲ್ಲಿ ಕೂಡಿ ಹಾಕಿ, 2 ಕೋಟಿ ರೂ. ಹಣವನ್ನು ಚೀಲಕ್ಕೆ ತುಂಬಿಕೊಂಡು ಎಸ್ಕೇಪ್ ಆಗಿದ್ದಾರೆ. ಕೊನೆಗೆ ಕಷ್ಟಪಟ್ಟು ರೂಮ್ ಬಾಗಿಲು ಹಾಗೂ ಶಟರ್ ತೆರೆದಾಗ ಬೆಂಜಮಿನ್ ಮತ್ತು ಅವರ ಸ್ನೇಹಿತರು ಸಹ ದಿಢೀರನೇ ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ಶ್ರೀಹರ್ಷ ದೂರಿದ್ದಾರೆ.

ಇದನ್ನೂ ಓದಿ👉 ತಡಸ ತಾಯವ್ವ ದೇವಸ್ಥಾನ ಸಮೀಪ ಲಾರಿ ಅಪಘಾತ..! ಮುಂಡಗೋಡ- ಹುಬ್ಬಳ್ಳಿ ರಸ್ತೆ ಸಂಚಾರ ಸ್ಥಗಿತ..!

ಸದ್ಯ ಶ್ರೀಹರ್ಷ ನೀಡಿರುವ ದೂರಿನ ಅನ್ವಯ ಅಪರಿಚಿತ ಆಸಾಮಿಗಳು, ಬೆಂಜಮಿನ್ ಹರ್ಷ ಮತ್ತು ಅವರ ಸ್ನೇಹಿತರ ವಿರುದ್ಧ ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಜಮಿನ್ ಹರ್ಷ ಮತ್ತು ಆತನ ಸ್ನೇಹಿತರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ👉 ಪತಿಯ ಕೊಲೆಗೆ ಪ್ರತಿಕಾರ; ಆ ಹೆಣ್ಣಿನ ಸೇಡಿಗೆ ಅಲ್ಲಿ ಹೆಣವಾಗಿ ಬಿದ್ದವರು ಬರೋಬ್ಬರಿ ಮೂರು ಜನ..!

error: Content is protected !!