Consumer Court News: ಕಾರವಾರ; ಸಮುದ್ರದಲ್ಲಿ ಮುಳುಗಿದ ಮೀನುಗಾರಿಕಾ ದೋಣಿಗೆ ಮಾಡಿಸಲಾಗಿದ್ದ ವಿಮಾ ಮೊತ್ತ 40 ಲಕ್ಷ ರೂಪಾಯಿಗಳನ್ನು ವಾರ್ಷಿಕ ಶೇ.9ರ ಬಡ್ಡಿಯೊಂದಿಗೆ ಪಾವತಿಸುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಪ್ರಕರಣದ ಹಿನ್ನಲೆ..!
ಜಿಲ್ಲೆಯ ಅಂಕೋಲಾ ತಾಲೂಕಿನ ಮಂಜುಗುಣಿಯ ನಿವಾಸಿ ಉಲ್ಲಾಸ ದತ್ತಾ ತಾಂಡೇಲರವರು ಮೀನುಗಾರರಾಗಿದ್ದು, ಮೀನುಗಾರಿಕೆಗಾಗಿ ಸ್ವತಃ ತಮ್ಮದೇ ದೋಣಿಯನ್ನು ಹೊಂದಿದ್ದರು. ಮೀನುಗಾರಿಕೆಗೆ ತೆರಳಿದಾಗ ಮೀನುಗಾರರ ದೋಣಿ ಮುಳುಗಿದ್ದು, ಈ ದೋಣಿಗೆ ಉಲ್ಲಾಸ ಅವರು ರೂ.1,32,083/-ಗಳನ್ನು ಪಾವತಿಸಿ 40 ಲಕ್ಷಗಳ ವಿಮೆ ಪಡೆದಿದ್ದರು.

ದೋಣಿ ಮುಳಗಿದ್ದರಿಂದ ದೋಣಿಗೆ ವಿಮೆ ಇದ್ದಿದ್ದರಿಂದ ವಿಮಾ ಮೊತ್ತವನ್ನು ಪಾವತಿಸಲು ದೂರುದಾರರು ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪನಿಗೆ ವಿನಂತಿಸಿದ್ದರು. ಸರ್ವೇಯರ್ ವರದಿ ಆಧಾರದ ಮೇಲೆ ವಿಮಾ ಕಂಪನಿ ವಿಮಾ ಮೊತ್ತ ನೀಡದೇ ವಿಮಾ ಅರ್ಜಿ ತಿರಸ್ಕರಿಸಿತ್ತು. ಈ ಹಿನ್ನಲೆಯಲ್ಲಿ ತಾಂಡೇಲರವರು ಕಾರವಾರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದರು.

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಪ್ರಭಾರ ಅಧ್ಯಕ್ಷ ಡಾ.ಮಂಜುನಾಥ ಎಂ.ಬಮ್ಮನಕಟ್ಟಿ ಹಾಗೂ ಸದಸ್ಯ ನೈನಾ ಕಾಮಟೆರವರು, ದೋಣಿಗೆ ಮಾಡಿಸಲಾದ ವಿಮಾ ಮೊತ್ತ ರೂ.40ಲಕ್ಷ ರೂಪಾಯಿಗಳನ್ನು ಹಾಗೂ ಈ ಮೊತ್ತಕ್ಕೆ ವಾರ್ಷಿಕ ಶೇ.9ರ ಬಡ್ಡಿಯನ್ನು ಪಾವತಿಸಲು ಮತ್ತು ದೂರುದಾರರಿಗೆ ಪರಿಹಾರವಾಗಿ ರೂ.3,00,000/-ಗಳನ್ನು ಹಾಗೂ ಖರ್ಚು-ವೆಚ್ಚಕ್ಕಾಗಿ ರೂ.10,000/-ಗಳನ್ನು ನೀಡುವಂತೆ ವಿಮಾ ಕಂಪನಿ ವಿರುದ್ಧ ಆಯೋಗ ಆದೇಶಿಸಿದೆ.

ದೂರಿನಲ್ಲಿ ವಿಮಾ ಕಂಪನಿ ನಿರಾಕರಣೆ ಮಾಡಿರುವ ವಿಷಯಗಳನ್ನು ಹಾಗೂ ಮಾಡಿರುವ ಲೋಪಗಳನ್ನು ಗುರುತಿಸಿರುವ ಆಯೋಗವು ಅಂತಿಮವಾಗಿ ದೂರುದಾರರ ಪರ ಆದೇಶಿಸಿದೆ. ದೂರುದಾರರ ಪರ ನ್ಯಾಯವಾದಿ ನಾಗಾನಂದ ಐ, ಬಂಟ ವಾದ ಮಂಡಿಸಿದ್ದರು.

error: Content is protected !!