Hubli- Dharwad News: ಹುಬ್ಬಳ್ಳಿ : ರಾಜ್ಯದ ಎರಡನೇ ಅತಿ ದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಮಿಷನರ್ಗಳಿಗೆ ಪೂರ್ಣಾವಧಿ ಅಧಿಕಾರ ಸಿಕ್ಕೇ ಇಲ್ಲ.
ಇಲ್ಲಿ ಆಯುಕ್ತರಾಗಿ ಆಗಮಿಸುವವರು ಕೇವಲ ಒಂದು, ಒಂದೂವರೆ ಹಾಗೂ ಆರು ತಿಂಗಳಲ್ಲಿ ವರ್ಗಾವಣೆಯಾಗುತ್ತಿರುವುದರಿಂದ ಅವಳಿ ನಗರದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಒಂದು ನಗರ ಅಭಿವೃದ್ಧಿಗೊಳ್ಳಬೇಕಾದರೆ ಆಯುಕ್ತರಾಗಿ ಬರುವವರು ಕನಿಷ್ಠ ಎರಡು ವರ್ಷವಾದರೂ ಇಲ್ಲಿರಬೇಕು. ಆದರೆ, ಇಲ್ಲಿಗೆ ಕಮಿಷನರ್ ಆಗಿ ಬರುವವರು ಒಂದರಿಂದ ಒಂದೂವರೆ ವರ್ಷದೊಳಗೆ ವರ್ಗಾವಣೆಗೊಳ್ಳುತ್ತಿರುವುದು ಅಭಿವೃದ್ಧಿ ದೃಷ್ಟಿಯಿಂದ ಹಿನ್ನೆಡೆಗೆ ಕಾರಣವಾಗಿದೆ.
ಅಧಿಕಾರ ವಹಿಸಿಕೊಂಡ ಕೇವಲ ಐದೂವರೆ ತಿಂಗಳಲ್ಲಿ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ್ ಘಾಳಿ ವರ್ಗಾವಣೆಗೊಂಡಿದ್ದಾರೆ.
ಸ್ಮಾರ್ಟ್ ಸಿಟಿ ಎಂಡಿ ಆಗಿರುವ ಡಾ. ರುದ್ರೇಶ್ ಅವರಿಗೆ ಕಳೆದ 27ರಂದು ಪಾಲಿಕೆ ಜನವರಿ ಮಹಾನಗರ ಆಯುಕ್ತರನ್ನಾಗಿ ಹೆಚ್ಚುವರಿ ಅಧಿಕಾರವನ್ನು ಸರ್ಕಾರ ನೀಡಿತ್ತು. ಹಿರಿಯ ಕೆಎಎಸ್ ಅಧಿಕಾರಿಯಾಗಿರುವ ಡಾ. ಘಾಳಿ, ಪಾಲಿಕೆ ವ್ಯಾಪ್ತಿಯ ಸಮಸ್ಯೆಗಳನ್ನು ಅರಿತು, ಕಾರ್ಯನಿರ್ವಹಿಸುತ್ತಿದ್ದರು. ಅವಳಿ ನಗರದ ಸಾರ್ವಜನಿಕ ಸಮಸ್ಯೆಗಳು ಒಂದೊಂದಾಗಿ ನಿವಾರಣೆಗೊಳ್ಳುತ್ತಿವೆ ಎನ್ನುತ್ತಿರುವಾಗಲೇ ಸರ್ಕಾರ, ಅವರನ್ನು ವರ್ಗಾವಣೆಗೊಳಿಸಿದೆ.
ಈ ಮೊದಲು ಪಾಲಿಕೆ ಆಯುಕ್ತರಾಗಿ ಬರುವ ಅಧಿಕಾರಿಗಳು ಕನಿಷ್ಠ ಎರಡ್ಮೂರು ವರ್ಷಗಳವರೆಗಾದರೂ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಕಳೆದ ಕೆಲ ವರ್ಷಗಳಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಐಎಎಸ್, ಹಿರಿಯ ಕೆಎಎಸ್ ಅಧಿಕಾರಿಗಳು ಕನಿಷ್ಠ ಎರಡು ವರ್ಷದವರೆಗೂ ಕಾರ್ಯನಿರ್ವಹಿಸುತ್ತಿಲ್ಲ. ಒಂದರಿಂದ ಒಂದೂವರೆ ವರ್ಷ ಪೂರ್ಣಗೊಳ್ಳುವುದರೊಳಗಾಗಿಯೇ ಸರ್ಕಾರ ಅವರನ್ನು ವರ್ಗಾಯಿಸುತ್ತಿದೆ.
ಐಎಎಸ್ ಅಧಿಕಾರಿ ಡಾ. ಸುರೇಶ್ ಇಟ್ನಾಳ ಅವರು 2021ರ ಮೇ 3ರಂದು ಪಾಲಿಕೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ, 2022ರ ಜ.13ರಂದು ವರ್ಗಾವಣೆಗೊಂಡರು. 2022ರ ಜ.13ರಂದು ಪಾಲಿಕೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದ ಮತ್ತೊಬ್ಬ ಐಎಎಸ್ ಅಧಿಕಾರಿ ಡಾ. ಗೋಪಾಲ ಕೃಷ್ಣ, ಒಂದೂವರೆ ವರ್ಷ ಅಧಿಕಾರ ನಡೆಸಿದ ನಂತರ 2023ರ ಜು.1ರಂದು ವರ್ಗಾವಣೆಗೊಂಡರು.
ಒಂದೇ ದಿನದಲ್ಲಿ ವರ್ಗಾವಣೆ:
ಮತ್ತೊಬ್ಬ ಐಎಎಸ್ ಅಧಿಕಾರಿ ಭರತ್ ಎಸ್. ಅವರು 2023ರ ಜು.6ರಂದು ಅಧಿಕಾರ ವಹಿಸಿಕೊಂಡು ಮರುದಿನ ವರ್ಗಾವಣೆಗೊಂಡರು. ಅಧಿಕಾರ ವಹಿಸಿಕೊಂಡ ಕೇವಲ ಒಂದು ದಿನ ಆಯುಕ್ತರಾಗಿ ಕಾರ್ಯನಿರ್ವಹಿಸಿರುವುದು ಅಚ್ಚರಿಯ ಸಂಗತಿ.
2023 ಜು.7ರಂದು ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಕೆಎಎಸ್ ಅಧಿಕಾರಿ ಡಾ. ಈಶ್ವರ್ ಉಳ್ಳಾಗಡ್ಡಿ, 2025ರ ಜ.27ರವರೆಗೆ ಕಾರ್ಯನಿರ್ವಹಿಸಿದರು. ಇವರು ಸಹ ಒಂದೂವರೆ ವರ್ಷ ಕಾರ್ಯ ನಿರ್ವಹಿಸಿದರು. ಇವರ ನಂತರ ಆಯುಕ್ತರಾಗಿದ್ದ ಡಾ. ರುದ್ರೇಶ ಘಾಳಿ, ಕೇವಲ ಐದೂವರೆ ತಿಂಗಳಲ್ಲಿ ವರ್ಗಾವಣೆಗೊಂಡರು.
ಸಮರ್ಪಕ ತ್ಯಾಜ್ಯ ನಿರ್ವಹಣೆ ಪಾಲಿಕೆ ವ್ಯಾಪ್ತಿಯ ದೊಡ್ಡ ಸಮಸ್ಯೆಯಾಗಿದೆ. ಇದರೊಂದಿಗೆ ಧೂಳು ಮುಕ್ತ ಮಹಾನಗರ, ಗುಣಮಟ್ಟದ ರಸ್ತೆಗಳ ನಿರ್ಮಾಣ, ಸ್ವಚ್ಛ-ಸುಂದರ ಮಹಾನಗರ ಎಂಬೆಲ್ಲ ಕನಸುಗಳು ಇದುವರೆಗೆ ಕನಸಾಗಿಯೇ ಉಳಿದಿವೆ. ಈ ಎಲ್ಲ ಕನಸುಗಳು ನನಸಾಗಬೇಕಾದರೆ ಹು-ಧಾ ಮಹಾನಗರ ಪಾಲಿಕೆಯಲ್ಲಿ ಹೆಚ್ಚು ಸಮಯದವರೆಗೆ ನೆಲೆಯೂರಿ ನಿಲ್ಲುವ ಆಯುಕ್ತರ ಅಗತ್ಯವಿದೆ. ಅದರಲ್ಲಿಯೂ ಒಬ್ಬ ಐಎಎಸ್ ಅಧಿಕಾರಿ ಅವಳಿ ನಗರಕ್ಕೆ ಬೇಕೆಂಬ ಬೇಡಿಕೆ ಇಲ್ಲಿನ ಸಾರ್ವಜನಿಕರಲ್ಲಿದೆ.
ಶಾಲಾ ಶಿಕ್ಷಣ ಇಲಾಖೆಗೆ ವರ್ಗ:
ರುದ್ರೇಶ್ ಘಾಳಿ ಅವರನ್ನು ಧಾರವಾಡ ಜಿಲ್ಲಾ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಆಯುಕ್ತರಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಧಾರವಾಡ ಜಿಲ್ಲಾ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿದ್ದ ಜಯಶ್ರೀ ಶಿಂತ್ರಿ ಅವರನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಸಚಿವರನ್ನಾಗಿ ನೇಮಕ ಮಾಡಲಾಗಿದೆ. ರುದ್ರೇಶ್ ಘಾಳಿ ಅವರಿಂದ ತೆರವಾದ ಪಾಲಿಕೆ ಆಯುಕ್ತ ಸ್ಥಾನಕ್ಕೆ ಯಾರನ್ನೂ ನೇಮಕ ಮಾಡಿಲ್ಲ.
ಡಾ.ರುದ್ರೇಶ್ ಘಾಳಿ ವರ್ಗಾವಣೆ ಖಂಡಿಸಿ ಪ್ರತಿಭಟನೆ:
ಹು-ಧಾ ಮಹಾನಗರ ಪಾಲಿಕೆಯ ಆಯುಕ್ತ ರುದ್ರೇಶ್ ಘಾಳಿ ಅವರ ವರ್ಗಾವಣೆಯನ್ನು ತಡೆಯುವಂತೆ ಮತ್ತು ಸದ್ಯದ ಸ್ಥಾನದಲ್ಲೇ ಅವರನ್ನು ಮುಂದುವರೆಸುವಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘದಿಂದ ಹುಬ್ಬಳ್ಳಿಯ ಪಾಲಿಕೆ ಆವರಣದಲ್ಲಿಂದು ಪ್ರತಿಭಟನೆ ನಡೆಸಿದರು.
ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿದ ಸಂಘದ ಸದಸ್ಯರು ರುದ್ರೇಶ್ ಘಾಳಿಯವರು ಹುಧಾ ಮಹಾನಗರ ಪಾಲಿಕೆಯ ಸಮಸ್ಯೆಗಳನ್ನು ಮತ್ತು ಮಹಾನಗರದ ಎಲ್ಲಾ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹರಿಸುತ್ತಾ ಬರುತ್ತಿರುವ ಸಂದರ್ಭದಲ್ಲಿ ಅವರನ್ನು ವರ್ಗಾವಣೆ ಮಾಡಿದ್ದು ಸರಿಯಲ್ಲ ಎಂದು ಖಂಡಿಸಿದರು. ಸರ್ಕಾರವು ಇತರ ವರ್ಗಾವಣೆಯನ್ನು ರದ್ದು ಮಾಡಿ ಪಾಲಿಕೆಯಲ್ಲಿಯೇ ಸೇವೆಯನ್ನು ಮುಂದುವರೆಸುವಂತೆ ಗುತ್ತಿಗೆದಾರರ ಸಂಘ ಆಗ್ರಹಿಸಿದೆ.
ಈ ಕುರಿತಂತೆ ಗುತ್ತಿಗೆದಾರರ ಕಾರ್ಯದರ್ಶಿ ಪಂಪಣ್ಣ ಅಂಬಿಗೇರ ಮಾತನಾಡಿ, “ಅವಳಿನಗರ ಅಭಿವೃದ್ಧಿಗೆ ಕನಿಷ್ಠ ಎರಡು ವರ್ಷ ಅಧಿಕಾರಿಗಳು ಇರಬೇಕು. ಆದರೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಗೆ ಈ ಹಿಂದೆ ಬಂದ ಅಧಿಕಾರಿಗಳ ಅವಧಿ ಕುಂಠಿತವಾಗಿದೆ. ಒಬ್ಬ ಅಧಿಕಾರಿ ರೂಪುರೇಷೆ ಸಿದ್ದಪಡಿಸಿ ಅಭಿವೃದ್ಧಿಪಡಿಸುವಾಗಲೇ ಎತ್ತಂಗಡಿ ಮಾಡುತ್ತಾರೆ. ಹೀಗಾಗಿ ದಕ್ಷ ಪ್ರಾಮಾಣಿಕ ಐಎಎಸ್ ಅಧಿಕಾರಿ ಬೇಕಿದೆ” ಎಂದರು.
ಮೋಹನ್ ಗೌಡರ ಎಂಬುವವರು ಮಾತನಾಡಿ, “ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ಡಾ. ರುದ್ರೇಶ್ ಘಾಳಿ ಅವರನ್ನು ಆರು ತಿಂಗಳಲ್ಲೇ ವರ್ಗಾವಣೆ ಮಾಡಿದ್ದಾರೆ. ಉತ್ತಮವಾಗಿ ಕೆಲಸ ಮಾಡುವವರನ್ನು ಕನಿಷ್ಟ ಎರಡು ವರ್ಷ ಮುಂದುವರೆಸಬೇಕು. ಆದರೆ ಈಗ ಏಕಾಏಕಿ ವರ್ಗಾವಣೆ ಮಾಡಿದ್ದು ಸರಿಯಲ್ಲ. ಒಬ್ಬ ದಿಟ್ಟ ಐಎಎಸ್ ಅಧಿಕಾರಿಯನ್ನು ಸರ್ಕಾರ ನಿಯೋಜನೆ ಮಾಡಬೇಕು” ಎಂದು ಒತ್ತಾಯಿಸಿದರು