Mankalu Vaidya: ಭಟ್ಕಳ: ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರಿಗೆ ಅವಮಾನ, ತೇಜೋವಧೆ ಮಾಡುವ ದೃಷ್ಟಿಯಲ್ಲಿ ಸುಳ್ಳು ವಿಡಿಯೋವನ್ನು ಹರಿಬಿಟ್ಟು ಜನರಿಗೆ ತಪ್ಪು ಸಂದೇಶ ಸಾರಿದ ಇಬ್ಬರು ಆರೋಪಿಗಳನ್ನು ಮುರ್ಡೇಶ್ವರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಾರ್ವಜನಿಕ ನೆಮ್ಮದಿ ವಿರುದ್ಧ ಅಪರಾಧ ಎಸಗುವಂತೆ ಮಾಡುವ ಉದ್ದೇಶವುಳ್ಳ ಮತ್ತು ಒಂದು ಪಕ್ಷದ ಕಾರ್ಯಕರ್ತರು ಅಪರಾಧವನ್ನು ಮಾಡುವಂತೆ ಪ್ರಚೋದಿಸುವ ಉದ್ದೇಶವುಳ್ಳ ಹೇಳಿಕೆಯನ್ನು ಸುಳ್ಳು ಮಾಹಿತಿಯನ್ನು ಅಥವಾ ಗಾಳಿಸುದ್ದಿಯನ್ನು ಸಾಮಾಜಿಕ ಜಾಲತಾಣವಾದ ಫೆಸ್ಟುಕ್ ಖಾತೆಯಿಂದ ಇರರರಿಗೆ ಶೇರ್ ಮಾಡಿದ್ದಾರೆ.ಬೈಲೂರಿನ ದೊಡ್ಡಬಟ್ಟೆಯ ನಾಗರಾಜ ಮಾದೇವ ನಾಯ್ಕ ಮತ್ತು ಬೈಲೂರಿನ ಸಣ್ಣಬಲ್ಲೆಯ ಭಾಸ್ಕರ ನಾರಾಯಣ ದೇವಾಡಿಗ ಪೊಲೀಸರ ವಶದಲ್ಲಿರುವ ಆರೋಪಿಗಳು.
ಇವರು “ಭಟ್ಕಳಕ್ಕೆ ಬದಲಾವಣೆ” ಎಂಬ ಫೇಸ್ ಬುಕ್ ಖಾತೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರಿಗೆ ಉದ್ದೇಶ ಪೂರ್ವಕವಾಗಿ ಅವಮಾನ ಆಗುವ ರೀತಿಯಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಸುಮಾರು 1 ನಿಮಿಷ 29 ಸೆಕೆಂಡ್ ಇರುವ ವಿಡಿಯೋವನ್ನು ಹರಿಬಿಟ್ಟು ಜನರಿಗೆ ತಪ್ಪು ಸಂದೇಶ ನೀಡಿ ಜಿಲ್ಲಾ ಉಸ್ತುವಾರಿ ಸಚಿವರ ತೇಜೋವಧೆ ಮಾಡುವ ದುಸ್ಸಾಹಸ ಮಾಡಿದ್ದಾರೆ.
ಮುಖ್ಯವಾಗಿ “ಭಟ್ಕಳಕ್ಕೆ ಬದಲಾವಣೆ” ಎಂಬ ಹೆಸರಿನ ಪೇಸ್ಟುಕ್ ಖಾತೆದಾರ ಭಾಸ್ಕರ ದೇವಾಡಿಗ, ನಾಗರಾಜ ಎಂ. ನಾಯ್ಕ ಹಾಗೂ ಹಿಂದೂ ಎಂಬ ಹೆಸರಿನ ಫೇಸ್ ಬುಕ್ ಖಾತೆದಾರ ತೇಜು ನಾಯ್ಕ ಹೊನ್ನಾವರ ಎಂಬ ಹೆಸರಿನ ಪೇಸ್ಟುಕ್ ಖಾತೆದಾರ ಹಾಗೂ ಇತರರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇಬ್ಬರು ವ್ಯಕ್ತಿಗಳನ್ನು ಮುರ್ಡೇಶ್ವರ ಪೊಲೀಸರು ವಶಕ್ಕೆ ಪಡೆದಿದ್ದಾರೆ.