Environment News:ಕಾರವಾರ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಛೇರಿ ಹಾಗೂ ನಗರಸಭೆ, ಕಾರವಾರ ಇವರ ಸಹಯೋಗದೊಂದಿಗೆ ನಗರಸಭೆ ಸಭಾಭವನದಲ್ಲಿ ವಿಶ್ವ ಪರಿಸರ ದಿನಾಚರಣೆ-2025 ರನ್ವಯ ಘೋಷವಾಕ್ಯ “ಜಾಗತಿಕವಾಗಿ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದು” ವಿಷಯದ ಕುರಿತಾಗಿ ಪೌರಕಾರ್ಮಿಕರಿಗೆ ಕಾರ್ಯಾಗಾರವನ್ನು ಶನಿವಾರ ಹಮ್ಮಿಕೊಳ್ಳಲಾಯಿತು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಬಿ.ಕೆ. ಸಂತೋಷ, ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಬಳಕೆಯಿಂದ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳು ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳ ನಿರ್ವಹಣೆ ವಿಲೇವಾರಿ ಬಗ್ಗೆ ಹಾಗೂ ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಉಪಯೋಗಿಸದಂತೆ ಜಾಗೃತಿ ಮೂಡಿಸಿ, ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಉಪಯೋಗವನ್ನು ಸಂಪೂರ್ಣವಾಗಿ ನಿಷೇಧಿಸಿ ಬದಲಾಗಿ ಅಡಿಕೆ ಎಲೆ / ಕಟ್ಟಿಗೆ / ಗಾಜು / ಪೇಪರ್ / ಸ್ಟೀಲ್‌ನಿಂದ ತಯಾರಿಸಿದ ವಸ್ತುಗಳನ್ನು ಬಳಸುವಂತೆ ಮತ್ತು ಕೇವಲ ಬಟ್ಟೆ ಚೀಲಗಳನ್ನು ಬಳಸುವಂತೆ ಹಾಗೂ ಪ್ಲಾಸ್ಟಿಕ್ ಚೀಲಗಳನ್ನು ಬಳಸಿದಲ್ಲಿ ದಂಡವನ್ನು ವಿಧಿಸಲಾಗುವುದು ಎಂದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಡಾ. ಗಣಪತಿ ಹೆಗಡೆ ಮಾತನಾಡಿ ಪ್ಲಾಸ್ಟಿಕ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಲ್ಲಿ ಸಾರ್ವಜನಿಕರ ಪಾಲುದಾರಿಕೆ ಮತ್ತು ಸಹಕಾರ ಅತ್ಯಮೂಲ್ಯವಾದುದು ಪ್ಲಾಸ್ಟಿಕ್ ತ್ಯಾಜ್ಯವು ಎಲ್ಲ ರೀತಿಯ ಮಾಲಿನ್ಯಕ್ಕೂ ಕಾರಣವಾಗುತ್ತಿದೆ ಮತ್ತು ಪಶು, ಪಕ್ಷಿ, ಪ್ರಾಣಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇರುವುದೊಂದೇ ಭೂಮಿ ಪ್ರಪಂಚದ ಯಾವುದೇ ಜಾಗದಲ್ಲಿ ಮಾಲಿನ್ಯವಾದರೆ ಅದರ ಪರಿಣಾಮವನ್ನು ಎಲ್ಲರೂ ಎದುರಿಸಬೇಕಾಗಿರುತ್ತದೆ ಎಂದರು.

ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಪ್ರತಿಯೊಬ್ಬ ನಾಗರಿಕನೂ ಸರಿಯಾಗಿ ಕಾರ್ಯ ನಿರ್ವಹಿಸಿದ್ದಲ್ಲಿ ನಗರವನ್ನು ಸುಂದರವಾಗಿಸುವುದರ ಜೊತೆಗೆ ಜನರ ಆರೋಗ್ಯವನ್ನು ಕಾಪಾಡಿದಂತಾಗುತ್ತದೆ ಮತ್ತು ಮಲೇರಿಯಾ, ಡೆಂಗ್ಯೂನಂತಹ ಸೊಳ್ಳೆಯಿಂದ ಉತ್ಪತ್ತಿಯಾಗುವ ರೋಗಗಳನ್ನು ತಡೆಗಟ್ಟಬಹುದಾಗಿದೆ ಮತ್ತು ಈ ನಿಟ್ಟಿನಲ್ಲಿ ಪೌರಕಾರ್ಮಿಕರ ದೈನಂದಿನ ಕೆಲಸವನ್ನು ಶ್ಲಾಘಿಸಿದರು.

ನಗರಸಭೆ ಪೌರಾಯುಕ್ತ ಜಗದೀಶ ಬಿ., ಹುಲಗೆಜ್ಜಿ ಮಾತನಾಡಿ ನಗರಸಭೆಯ ವತಿಯಿಂದ ನಿಯಮಿತವಾಗಿ ಪ್ಲಾಸ್ಟಿಕ್ ಮಾರಾಟ ಮಾಡುವ ಅಂಗಡಿಗಳಿಗೆ ಭೇಟಿ ನೀಡಿ ರೈಡ್ ಮಾಡಲಾಗುತ್ತಿದೆ ಹಾಗೂ ದಂಡವನ್ನು ವಿಧಿಸಲಾಗುತ್ತಿದೆ. ಇನ್ನು ಮುಂದೆ ನಿಯಮಿತವಾಗಿ ಭೇಟಿ ನೀಡುವುದು ಹಾಗೂ ಪೌರಕಾರ್ಮಿಕರು ಮನೆ ಮನೆಗಳಿಂದ ಕಸವನ್ನು ಸಂಗ್ರಹಿಸುವ ಸಂದರ್ಭದಲ್ಲಿ ಸಂಗ್ರಹಿಸಿದ ತ್ಯಾಜ್ಯಗಳಿಂದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಬೇರ್ಪಡಿಸಬೇಕಾಗಿರುತ್ತದೆ ಎಂದು ತಿಳಿಸಿದರು.

ನಗರಸಭೆಯಿಂದ ಎಲ್ಲ ಪೌರಕಾರ್ಮಿಕರುಗಳಿಗೆ ಸುರಕ್ಷತಾ ದೃಷ್ಟಿಯಿಂದ ಕಸ ಸಂಗ್ರಹಣೆ ಮತ್ತು ಬೇರ್ಪಡಿಸುವ ಸಂದರ್ಭದಲ್ಲಿ ಉಪಯೋಗಿಸಲು hand gloves and Gum boots ಗಳನ್ನು ನೀಡಲಾಗಿರುತ್ತದೆ ಅವುಗಳನ್ನು ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ನಿಯಮಿತವಾಗಿ ಕಸ ಸಂಗ್ರಹಿಸುವ ಮತ್ತು ಬೇರ್ಪಡಿಸುವ ಸಂದರ್ಭದಲ್ಲಿ ಉಪಯೋಗಿಸಬೇಕಾಗಿರುತ್ತದೆ ಎಂದರು. ಈಗ ಮತ್ತೆ ಕರೋನಾ ರೋಗವು ಹರಡುತ್ತಿರುವುದರಿಂದ ಮಾಸ್ಕನ್ನು ಧರಿಸುವುದರ ಮೂಲಕ ಆರೋಗ್ಯ ಕಾಪಾಡಿಕೊಳ್ಳಲು ತಿಳಿಸಿದರು.

ಕಾರ್ಯಗಾರದಲ್ಲಿ ನಗರಸಭೆಯ ಕಿರಿಯ ಆರೋಗ್ಯ ನಿರೀಕ್ಷಕಿ ದೀಪಾ ಎಮ್. ಶೆಟ್ಟಿ, ಲೆಕ್ಕಾಧಿಕಾರಿ ಮಂಜುನಾಥ ಬಿಸ್ಗಣ್ಣವರ, ಕಂದಾಯ ಅಧಿಕಾರಿ ರವಿ ನಾಯ್ಕ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಶಂಕರ ಚೆಲುವ ಹಾಗೂ ಕಾರವಾರ ನಗರಸಭೆಯ ಪೌರಕಾರ್ಮಿಕರು ಮತ್ತು ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

error: Content is protected !!