ಇದು ಸನ್ಮಾನ್ಯ “PP ರಮೇಶಣ್ಣ”ನ ರಂಬಾ(ಪಾ) ರಾಡಿ..! ಆ ಪಪಂ ದಿನಗೂಲಿ ನೌಕರ ಇಷ್ಟೆಲ್ಲಾ ಮಾಡಿದ್ನಾ..?

ಇದು ಸನ್ಮಾನ್ಯ “PP ರಮೇಶಣ್ಣ”ನ ರಂಬಾ(ಪಾ) ರಾಡಿ..! ಆ ಪಪಂ ದಿನಗೂಲಿ ನೌಕರ ಇಷ್ಟೆಲ್ಲಾ ಮಾಡಿದ್ನಾ..? ಅಷ್ಟಕ್ಕೂ ಅಧ್ಯಕ್ಷೆ ಜಯಸುಧಾ ಮೇಡಮ್ಮು ಮಾಡಿರೋ ಆರೋಪಗಳೇಲ್ಲ ನಿಜಾನಾ..? ಹಾಗಿದ್ರೆ ಕ್ರಮ‌ ಯಾವಾಗ..?

 


ಮುಂಡಗೋಡ: ಪಟ್ಟಣ ಪಂಚಾಯಿತಿಯಲ್ಲಿ ದಿನಗೂಲಿ‌ ನೌಕರನೊಬ್ಬ ತನ್ನ ಹಾಗೂ ತಮ್ಮ ಕುಟುಂಬದವರ‌ ಹೆಸರಿನಲ್ಲಿ ಭಾರೀ ಅಕ್ರಮ ಎಸಗಿರೋ ಆರೋಪ ಕೇಳಿ ಬಂದಿದೆ. ಸಾರ್ವಜನಿಕರು ನೀಡಿದ್ದ ದೂರಿನ ಆಧಾರದಲ್ಲಿ ಖುದ್ದು ಪಟ್ಟಣ ಪಂಚಾಯತಿ ಅಧ್ಯಕ್ಷರೇ ಪ್ರಾಥಮಿಕ ತನಿಖೆ‌ ನಡೆಸಿ ದಿನಗೂಲಿ ನೌಕರನ ಬಂಡವಾಳ ಬಯಲು ಮಾಡಿದ್ದಾರೆ. ಖುದ್ದು ಅಧ್ಯಕ್ಷರೇ ಪ.ಪಂ ಸಭಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಸ್ಪೋಟಕ ಮಾಹಿತಿ ಹೊರಹಾಕಿದ್ದಾರೆ.

ಆತನ ಹೆಸರು ರಮೇಶ್ ಬೋವಿ..!
ಮುಂಡಗೋಡ ಪಟ್ಟಣ ಪಂಚಾಯತಿಯಲ್ಲಿ ಕಳೆದ ಎರಡು ದಶಕದಿಂದಲೂ ದಿನಗೂಲಿ ನೌಕರನಾಗಿ ಕಾರ್ಯ ನಿರ್ವಹಿಸ್ತಿರೋ ರಮೇಶ್ ಬೋವಿ ಸದ್ಯ‌ ಇಂತಹದ್ದೊಂದು ಆರೋಪ ಹೊತ್ತವ. ಅಧ್ಯಕ್ಷರು ಆರೋಪಿಸುವ ಪ್ರಕಾರ ಈತ ಪಟ್ಟಣ ಪಂಚಾಯತಿಯ ಚೀಪ್ ಆಫೀಸರ್, ಇಂಜಿನೀಯರ್ ಹಾಗೂ ಅಧ್ಯಕ್ಷರು ಹೀಗೆ ಮೂವರ ಕೀ ಬಳಸಿ ಟೇಂಡರುಗಳಲ್ಲಿ ಕೈ ಆಡಿಸುತ್ತಿದ್ದ. ನೂರು ಕಾಮಗಾರಿಗಳಲ್ಲಿ ಈತ ಕನಿಷ್ಟ ಏನಿಲ್ಲವೆಂದರೂ 20 ರಿಂದ 30 ಕಾಮಗಾರಿಗಳನ್ನು ತಾನೇ ಪಡೆದುಕೊಳ್ತಿದ್ದ. ಅದರಲ್ಲಿ ಆತನ ಪತ್ನಿ ಹಾಗೂ ಸಹೋದರನ ಹೆಸರಲ್ಲಿ ಹಾಗೂ RNR ಎಂಟರಪ್ರೈಸಸ್ ಹೆಸರಲ್ಲಿ ಕಾಮಗಾರಿ ಪಡೀತಿದ್ದನಂತೆ‌. ಒಂದರ್ಥದಲ್ಲಿ ಪಟ್ಟಣ ಪಂಚಾಯತಿಯಲ್ಲಿ ಒಂದು “ದಾರ” ಖರೀದಿಸಬೇಕಂದ್ರೂ ಇವನದ್ದೇ ಇಶಾರೆಯ ಅವಶ್ಯಕತೆ ಇತ್ತು ಅನ್ನೋದು, ಅಧ್ಯಕ್ಷರ ತನಿಖೆ ವೇಳೆ ಕನ್ಪರ್ಮ ಆಗಿದೆ ಅಂತಾ ಖುದ್ದು ಅಧ್ಯಕ್ಷೆ ಜಯಸುಧಾ ಭೋವಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ರು.

ತಾನೇ ಟೆಂಡರ್ ಹಾಕ್ತಿದ್ದ, ತಾನೇ ಪರಿಶೀಲನೆ ಮಾಡ್ತಿದ್ದ..!
ಇನ್ನೊಂದು ಸಂಗತಿಯೆಂದರೆ, ಅಧ್ಯಕ್ಷರು ಮಾಹಿತಿ ನೀಡಿರೋ ಪ್ರಕಾರ, ಈ ದಿನಗೂಲಿ ನೌಕರ ತಾನೇ ಟೆಂಡರ್ ಹಾಕ್ತಿದ್ದ, ತಾನೇ ಕಾಮಗಾರಿ ನಡೆಸಿ ಮತ್ತೆ ತಾನೇ ಕಾಮಗಾರಿಯ ಪರಿಶೀಲನೆ ಮಾಡ್ತಿದ್ದ. ಹೀಗಾಗಿ ಅಂತಹ ಕಾಮಗಾರಿಗಳ ಗುಣಮಟ್ಟ ಹೇಗಿರಬಹುದು..? ನೀವೇ ಅರ್ಥೈಸಿಕೊಳ್ಳಿ ಅಂತಿದಾರೆ ಅಧ್ಯಕ್ಷೆ ಜಯಸುಧಾ ಬೋವಿ. ಹೀಗಾಗಿ, ಈ ದಿನಗೂಲಿ ಸಿಬ್ಬಂದಿ ಯನ್ನು ತಕ್ಷಣವೇ ವಜಾಗೊಳಿಸಬೇಕು. ಅಷ್ಟಕ್ಕೂ, ಅಧಿಕಾರಿಗಳು ಕ್ರಮ ಕೈಗೊಳ್ಳಲು ಯಾಕೆ ಹಿಂದೇಟು ಹಾಕ್ತಿದಾರೆ..? ಎಂದು ಪ.ಪಂ ಅಧ್ಯಕ್ಷ ಜಯಸುಧಾ ಭೋವಿ ಪ್ರಶ್ನಿಸಿದ್ದಾರೆ.

ಗಂಭೀರ ಆರೋಪ..!
ಅಧ್ಯಕ್ಷೆ ಜಯಸುಧಾ ಬೋವಿಯವರು ಮಾಹಿತಿ ನೀಡಿರೋ ಪ್ರಕಾರ, ರಮೇಶ ಭೋವಿ ಅಧಿಕಾರಿಗಳ ಕೀ ಬಳಸಿದ್ದಾನೆ. ಅಲ್ದೆ, ಈತನ ವಿರುದ್ಧ ಎಸ್ಸಿ ಎಸ್ಟಿ ಗುತ್ತಿಗೆದಾರರು ಸಹ ದೂರ ನೀಡಿದ್ದಾರೆ. ಈ ಬಗ್ಗೆ ತನಿಖೆ ಕೈಗೊಂಡಾಗ ಈತ ಬಹಳಷ್ಟು ಕಾಮಗಾರಿ ಮಾಡಿದ್ದಲ್ಲದೆ, ತಮ್ಮ ಸಂಬಂಧಿಕರ ಹೆಸರಿನಲ್ಲಿ ಟೆಂಡರ್ ಹಾಕಿರುವುದು ಬೆಳಕಿಗೆ ಬಂದಿದೆ. ಇದಲ್ಲದೆ ಕಾಮಗಾರಿ ‌ಮುಗಿದ ನಂತರ ಮೂರನೇ ವ್ಯಕ್ತಿಯ ತಪಾಸಣಾ ವರದಿ ಮಾಡಿದ್ದಾನೆ ಅಂತಾ ದಾಖಲೆ ಸಮೇತ ಆರೋಪಿಸಿದ್ರು.

ಚೀಪ್ ಆಫೀಸರ್ ಮೀನಾಮೇಷ..!?
ಈ ದಿನಗೂಲಿ ನೌಕರರನ್ನು ತೆಗೆದು ಹಾಕುವಂತೆ ಪ.ಪಂ ಮುಖ್ಯಾಧಿಕಾರಿಗಳಿಗೆ ಪತ್ರ ನೀಡಿದ್ದೆ ಆದರೆ ಅವರು ಕುಂಟು ನೆಪ ಹೇಳಿ ಸಮಯ ದೂಡುತ್ತಿದ್ದರು.‌ ಹೀಗಾಗಿ ನನ್ನ ನೇತೃತ್ವದ ನಮ್ಮ ಸದಸ್ಯರ ನಿಯೋಗ ಜಿಲ್ಲಾಧಿಕಾರಿ ಗಳಿಗೆ ಭೇಟಿ ನೀಡಿದ್ದೇವು. ಆಗ ಅವರು ಕಮಿಟಿಯವರೇ ಆ ನೌಕರರನ್ನು ತೆಗೆದು ಹಾಕುವ ಅಧಿಕಾರಿವಿದೆ ಎಂದು ಹೇಳಿದ್ದರು. ಆದರೂ ಸಹ ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ. ಇದೀಗ ಮತ್ತೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಜಿಲ್ಲಾಧಿಕಾರಿ ಕಾರ್ಯಾಲಯದಿಂದ ಕಮಿಟಿಯವರು, ತಮ್ಮ ಹಂತದಲ್ಲಿ ಕೈಗೊಳ್ಳುವಂತೆ ಸೂಚಿಸಿದರು. ಹೀಗಾಗಿ  ಆ ನೌಕರನಿಗೆ ನೋಟಿಸ್ ನೀಡಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

ಪ.ಪಂ ಉಪಾಧ್ಯಕ್ಷೆ ರಹಿಂಬಾನು ಕುಂಕೂರ,  ಸ್ಥಾಯಿ ಸಮಿತಿ ಅಧ್ಯಕ್ಷ  ಶಿವರಾಜ ಸುಬಯ್ಯವರ,  ಸದಸ್ಯರಾದ ವಿಶ್ವನಾಥ ಪವಾಡಶೆಟ್ಟರ್, ಶೇಖರ್ ಲಮಾಣಿ, ರಜಾಖಾನ್ ಪಠಾಣ್, ಮಮ್ಮದಗೌಸ ಮಕಾಂದರ, ಮಮ್ಮದಜಾಫರ ಹಂಡಿ, ಮಂಜುನಾಥ  ಹರಮಲ್ಕರ್, ಬೀಬಿಜಾನ ಸೇರಿದಂತೆ  ಇತರರಿದ್ದರು.

error: Content is protected !!