Karnataka Govt. News:ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ (Guest Lecturers) ಸೇವೆ ಸಲ್ಲಿಸಿ 60 ವರ್ಷ ಪೂರೈಸಿದವರಿಗೆ ಮತ್ತು ಮರಣ ಹೊಂದಿದ ಅತಿಥಿ ಉಪನ್ಯಾಸಕರ ಕುಟುಂಬಕ್ಕೆ 5 ಲಕ್ಷ ಇಡುಗಂಟು ನೀಡಲು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ವಿವಿಧ ಸೌಲಭ್ಯಗಳು 2024ರ ಜನವರಿ 1ರಿಂದ ಜಾರಿಗೆ ಬರುವಂತೆ ಮಂಜೂರಾಗಲಿದ್ದು, ಕನಿಷ್ಠ ಒಂದು ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅಥವಾ ಮರಣ ಹೊಂದಿರುವ ಎಲ್ಲಾ ಅತಿಥಿ ಉಪನ್ಯಾಸಕರಿಗೂ ಇಡುಗಂಟು ಯೋಜನೆಯ ಪ್ರಯೋಜನ ಸಿಗಲಿದೆ.
ಯೋಜನೆ ಅನುಷ್ಠಾನಕ್ಕೆ ಬಂದ ಹಿಂದಿನ ಐದು ವರ್ಷಗಳಲ್ಲಿ ಕನಿಷ್ಠ ಒಂದು ವರ್ಷ ಸೇವೆ ಸಲ್ಲಿಸಿ 60 ವರ್ಷ ಪೂರ್ಣಗೊಳಿಸಿರುವ ಅತಿಥಿ ಉಪನ್ಯಾಸಕರಿಗೂ ಇದು ಅನ್ವಯವಾಗಲಿದೆ.
ಸೇವಾ ಭದ್ರತೆ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ 2024ರಲ್ಲಿ ಅತಿಥಿ ಉಪನ್ಯಾಸಕರು ನಡೆಸಿದ್ದ ಧರಣಿ, ಪಾದಯಾತ್ರೆಯ ನಂತರ ಸರ್ಕಾರ ಇಡುಗಂಟು ನೀಡುವ ಭರವಸೆ ಸೇರಿತ್ತು. ಭರವಸೆಯಂತೆ ಉನ್ನತ ಶಿಕ್ಷಣ ಇಲಾಖೆ ಈಗ ಕ್ರಮ ಕೈಗೊಂಡಿದೆ. ಈ ಯೋಜನೆಗೆ ಒಟ್ಟಾರೆ 44.15 ಕೋಟಿ ರೂಪಾಯಿಗಳನ್ನು ಸರ್ಕಾರ ಕಾಯ್ದಿರಿಸಿದೆ.
ಇದಕ್ಕೆ ಆಯಾ ಕಾಲೇಜುಗಳ ಪ್ರಾಂಶುಪಾಲರು ಸೇವಾ ದೃಢೀಕರಣ ಪತ್ರ ನೀಡಬೇಕು. ಅತಿಥಿ ಉಪನ್ಯಾಸಕರು ಸಲ್ಲಿಸಿದ ಸೇವಾ ವರ್ಷಗಳ ಆಧಾರದಲ್ಲಿ ಪ್ರತಿ ವರ್ಷಕ್ಕೆ 50 ಸಾವಿರದಂತೆ ಗರಿಷ್ಠ 10 ವರ್ಷಗಳ ಸೇವೆಯನ್ನು ಪರಿಗಣಿಸಲಾಗುವುದು. ಆಯಾ ಶೈಕ್ಷಣಿಕ ವರ್ಷದಲ್ಲಿ 240 ದಿನಗಳು ಕೆಲಸ ಮಾಡಿರಬೇಕು. 8 ತಿಂಗಳಿಗಿಂತ ಕಡಿಮೆ ಅವಧಿ ಕೆಲಸ ಮಾಡಿದ್ದರೆ ಅದನ್ನು ಭಾಗಶಃ ವರ್ಷ ಎಂದು ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದು. ಕೆಲಸದ ಅವಧಿಯಲ್ಲೇ ಮರಣ ಹೊಂದಿದರೆ ಅವರ ಕುಟುಂಬಕ್ಕೆ ಮೊತ್ತವನ್ನು ಹಸ್ತಾಂತರಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.