ನವದೆಹಲಿ: ನಾಲ್ಕು ದಿನಗಳಿಂದ ನಡೆದ ಭಾರತ- ಪಾಕಿಸ್ತಾನ ನಡುವಿನ ಸೇನಾ ಸಂಘರ್ಷದಲ್ಲಿ ಪಾಕಿಸ್ತಾನದ ಶೆಲ್, ಡ್ರೋನ್ ದಾಳಿಗಳಿಂದ ಯಾವುದೇ ಹಾನಿಯಾಗಿಲ್ಲ ಎಂದು ಏರ್ ಮಾರ್ಷಲ್ ಅವಧೇಶಕುಮಾರ್ ಭಾರ್ತಿ ಭಾನುವಾರ ದೃಢಪಡಿಸಿದ್ದಾರೆ.
ಸೇನೆಯ ಡಿಜಿಎಂಒ (DGMO) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 7 ರಂದು ಪಾಕಿಸ್ತಾನಿ ಸೇನೆ ನಡೆಸಿದ ಶೆಲ್ ದಾಳಿಯಿಂದ ನಮ್ಮ ನೆಲದಲ್ಲಿ ಯಾವುದೇ ಹಾನಿಯಾಗದಂತೆ ಭಾರತದ ವಾಯು ರಕ್ಷಣಾ ವ್ಯವಸ್ಥೆ ಸಜ್ಜಾಗಿತ್ತು. ಮೇ 8 ಮತ್ತು 9 ರಂದು ರಾತ್ರಿ 10:30 ಗಂಟೆಗೂ ಮುನ್ನಾ ಭಾರತದ ಹಲವಾರು ನಗರಗಳಲ್ಲಿ ಡ್ರೋನ್ಗಳು, ಮಾನವ ರಹಿತ ವೈಮಾನಿಕ ವಿಮಾನಗಳು (UAVS) ಮತ್ತು ಮಾನವರಹಿತ ಯುದ್ಧ ವೈಮಾನಿಕ ವಾಹನ (UCAVS) ಮೂಲಕ ಪಾಕಿಸ್ತಾನ ಸೇನೆಯು ದಾಳಿಗೆ ಯತ್ನಿಸಿತು. ಮೇ 7 ರಂದು ಮಾನವ ರಹಿತ ವೈಮಾನಿಕ ವಿಮಾನ (UAV) ಗಳನ್ನು ನಿಯೋಜಿಸಿದ್ದ ಪಾಕಿಸ್ತಾನ ನಂತರದ ದಿನಗಳಲ್ಲಿ ಅವುಗಳ ಸಂಖ್ಯೆಯನ್ನು ಕಡಿಮೆ ಮಾಡಿತ್ತು. ನಾಗರಿಕರಿಗೆ ಕಿರುಕುಳ ನೀಡಲು ಸೇನೆಯು ಹೆಲಿಕಾಪ್ಟರ್ ಮೂಲಕ ದಾಳಿ ನಡೆಸಿತ್ತು ಎಂದು ಮಾಹಿತಿ ನೀಡಿದರು.
ಪಾಕಿಸ್ತಾನದ 700 ಡ್ರೋನ್ ಗಳ ಧ್ವಂಸ.!
ಭಾರತದ ವಾಯುನೆಲೆ, ನಾಗರಿಕರನ್ನು ಗುರಿಯಾಗಿಸಿ ನಿರಂತರ ದಾಳಿ ನಡೆಸಿದರೂ ಭಾರತ ಪಾಕಿಸ್ತಾನದ ಟ್ರೋನ್ಗಳನ್ನು ಹೊಡೆದುರುಳಿಸುವಲ್ಲಿ ಅಥವಾ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಯಿತು. ಮೇ 8 ರ ಸಂಜೆ ಪಾಕಿಸ್ತಾನ ಸೇನೆಯು ಭಾರತೀಯ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ಯುದ್ಧ ವಿಮಾನಗಳು ಮತ್ತು ಅನೇಕ ಡ್ರೋನ್ ದಾಳಿ ನಡೆಸಿತು. ಆದರೆ ಪೆಚೋರಾ, ಗರುಡಾ ಸ್ನೈಪರ್ಸ್ ಮತ್ತು ಐಎಎಫ್ (IAF) ಸಮರ್ನಂತಹ ಭಾರತದ ವಾಯು ರಕ್ಷಣಾ ವ್ಯವಸ್ಥೆಗಳಿಂದ 700 ಡ್ರೋನ್ ಗಳನ್ನು ಹೊಡೆದುರುಳಿಸಲಾಯಿತು ಎಂದು ತಿಳಿಸಿದರು.
ಡಿಜಿಎಂಒ (DGMO) ಲೆಫ್ಟಿನೆಂಟ್ ಜನರಲ್ ರಾಜೀವ ಘಾಯ್, ಶತ್ರುರಾಷ್ಟ್ರದ ಯಾವುದೇ ರಕ್ಷಣಾ ವ್ಯವಸ್ಥೆಯನ್ನು ಗುರಿಯಾಗಿಸುವ ಸಾಮರ್ಥ್ಯವನ್ನು ಭಾರತ ಹೊಂದಿದೆ. ಆದರೆ ಸಂಯಮದಿಂದ ಕಾರ್ಯನಿರ್ವಹಿಸುತ್ತದೆ ಎಂದು ಪುನರುಚ್ಚರಿಸಿದರು.
ಕೆಲವು ಪಾಕ್ ವಿಮಾನಗಳ ಧ್ವಂಸ..!
ಶತ್ರು ವಿಮಾನಗಳು ಭಾರತೀಯ ವಾಯು ಪ್ರದೇಶಕ್ಕೆ ಬಾರದಂತೆ ಹೊಡೆದುರುಳಿಸಲಾಗಿದೆ. ಆದರೆ, ಎಷ್ಟು ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂಬುದರ ಬಗ್ಗೆ ನಿಖರವಾದ ಸಂಖ್ಯೆ ಗೊತ್ತಿಲ್ಲ. ಈ ಸಂಬಂಧ ತಾಂತ್ರಿಕ ವಿವರಗಳನ್ನು ಪಡೆಯುತ್ತಿದ್ದೇವೆ ಎಂದು ಏರ್ ಮಾರ್ಷಲ್ ತಿಳಿಸಿದರು.
ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತದ ಎಲ್ಲಾ ಪೈಲಟ್ ಗಳು ಸುರಕ್ಷಿತವಾಗಿ ಮರಳಿದ್ದಾರೆ ಎಂದು ರಾಜೀವ ಘಾಯ್ ತಿಳಿಸಿದರು. ಕಾರ್ಯಾಚರಣೆ ವೇಳೆ ಭಾರತಕ್ಕೆ ಆದ ನಷ್ಟ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಯುದ್ಧದ ಸನ್ನಿವೇಶದಲ್ಲಿ ನಷ್ಟ ಅನಿವಾರ್ಯ ಎಂಬುದನ್ನು ಒಪ್ಪಿಕೊಂಡರು. ಯುದ್ಧದ ಸಂದರ್ಭದಲ್ಲಿ ನಷ್ಟಗಳು ಯುದ್ಧದ ಒಂದು ಭಾಗವಾಗಿರುತ್ತದೆ. ಇನ್ನೂ ಕಾರ್ಯಾಚರಣೆಯ ಸನ್ನಿವೇಶದಲ್ಲಿರುವುದರಿಂದ ಎಷ್ಟು ನಷ್ಟವಾಗಿದೆ ಎಂಬುದನ್ನು ಬಹಿರಂಗಪಡಿಸಲು ಆಗುವುದಿಲ್ಲ ಎಂದು ತಿಳಿಸಿದರು.