ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 2024-25ನೇ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಆಯುಕ್ತಾಲಯದಿಂದ ಜಿಲ್ಲೆಗೆ ನೀಡಿದ ನಿಗಧಿತ ಮಾನವ ದಿನಗಳನ್ನು ಸೃಜಿಸುವ ಕಾರ್ಯದಲ್ಲಿ ಶೇ.100 ರಷ್ಟು ಸಾಧನೆ ಮಾಡಿದ್ದು, 2023-24 ರ ಅವಧಿಯಲ್ಲೂ ಸಹ ಶೇ.100 ಸಾಧನೆ ಮಾಡಿದ್ದು, ಸತತ ಎರಡನೇ ವರ್ಷವೂ ಗುರಿ ಸಾಧಿಸುವ ಮೂಲಕ ವಿಶೇಷ ಸಾಧನೆ ಮಾಡಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಆಯುಕ್ತಾಲಯದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 17 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿ ನೀಡಲಾಗಿದ್ದು, ಈ ಗುರಿಗೆ ಎದುರಾಗಿ ಒಟ್ಟೂ 17.46 ಲಕ್ಷ ಮಾನವ ದಿನಗಳನ್ನು ಸೃಜಿಸುವ ಮೂಲಕ ಶೇ. 102.73 ರಷ್ಟ್ಟು ಸಾಧನೆ ಮಾಡಲಾಗಿದ್ದು, ಕಳೆದ 2023-24 ನೇ ಸಾಲಿನಲ್ಲಿ 18 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿಗೆ ಎದುರಾಗಿ ಒಟ್ಟೂ 18.29 ಲಕ್ಷ ಮಾನವ ದಿನಗಳನ್ನು ಸೃಜಿಸುವ ಮೂಲಕ ಶೇ. 101.61 ರಷ್ಟ್ಟು ಸಾಧನೆ ಮಾಡಲಾಗಿತ್ತು.
ಅಂಕೋಲಾ ತಾಲೂಕಿನಲ್ಲಿ 1.33 ಲಕ್ಷ ಮಾನವ ದಿನಗಳ ಸೃಜನೆಯ ಗುರಿಗೆ 1.40 ಲಕ್ಷ ಮಾನವ ದಿನಗಳನ್ನು ಸೃಜಿಸಿದ್ದು, ಭಟ್ಕಳದಲ್ಲಿ 0.33 ಲಕ್ಷ ಗುರಿಗೆ 0.47 ಲಕ್ಷ, ದಾಂಡೇಲಿಯಲ್ಲಿ 0.23 ಲಕ್ಷ ಗುರಿಗೆ 0.22 ಲಕ್ಷ, ಹಳಿಯಾಳದಲ್ಲಿ 2.31 ಲಕ್ಷ ಗುರಿಗೆ 2.42 ಲಕ್ಷ, ಹೊನ್ನಾವರದಲ್ಲಿ 0.93 ಲಕ್ಷ ಗುರಿಗೆ 1.06 ಲಕ್ಷ, ಕಾರವಾರದಲ್ಲಿ 0.79 ಲಕ್ಷ ಗುರಿಗೆ 0.82 ಲಕ್ಷ, ಕುಮಟಾದಲ್ಲಿ 0.83 ಲಕ್ಷ ಗುರಿಗೆ 0.82 ಲಕ್ಷ, ಮುಂಡಗೋಡದಲ್ಲಿ 2.41 ಲಕ್ಷ ಗುರಿಗೆ 2.41 ಲಕ್ಷ, ಸಿದ್ದಾಪುರದಲ್ಲಿ 1.39 ಲಕ್ಷ ಗುರಿಗೆ 1.52 ಲಕ್ಷ, ಶಿರಸಿಯಲ್ಲಿ 2.10 ಲಕ್ಷ ಗುರಿಗೆ 2.22 ಲಕ್ಷ, ಸೂಪಾ ದಲ್ಲಿ 1.02 ಲಕ್ಷ ಗುರಿಗೆ 0.94 ಲಕ್ಷ, ಯಲ್ಲಾಪುರದಲ್ಲಿ 3.24 ಲಕ್ಷ ಗುರಿಗೆ 3.15 ಲಕ್ಷ ಮಾನವ ದಿನಗಳನ್ನು ಸೃಜಿಸಿದ್ದು ಒಟ್ಟು 95.30 ಕೋಟಿ ರೂ ಗಳ ಆರ್ಥಿಕ ಸಾಧನೆ ಮಾಡಲಾಗಿದೆ.
ಪ್ರಸ್ತಕ ಸಾಲಿನಲ್ಲಿ ಕೂಡಾ ಮನರೇಗಾ ಯೋಜನೆಯಡಿ ಅನುಮೋದಿತ ಗುರಿ ಸಾಧಿಸುವ ನಿಟ್ಟಿನಲ್ಲಿ ಈಗಾಗಲೇ ಯೋಜನೆ ರೂಪಿಸಲಾಗಿದೆ. ಪ್ರಸ್ತುತ ಕೂಲಿ ಮೊತ್ತ ಸಹ 349 ರೂ ಗಳಿಂದ. 370 ರೂ. ಹೆಚ್ಚಳವಾಗಿದೆ. ಜೊತೆಗೆ ಬೇಸಿಗೆಯಲ್ಲಿ ಕೂಲಿಕಾರರ ಆರೋಗ್ಯ ಹಿತದೃಷ್ಟಿಯಿಂದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೆಲಸದ ಪ್ರಮಾಣದಲ್ಲಿ 30% ರಿಯಾಯಿತಿ ಸಹ ಮಾಡಲಾಗಿದ್ದು, ಎಪ್ರಿಲ್, ಮೇ ಮತ್ತು ಜೂನ್ ತಿಂಗಳುಗಳಲ್ಲಿ ಅತಿ ಹೆಚ್ಚು ಕೂಲಿಕಾರರು ಭಾಗವಹಿಸುವಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪ್ರಸಕ್ತ 2025-26 ನೇ ಸಾಲಿನಲ್ಲಿ ಜಿಲ್ಲೆಗೆ 16 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿ ನೀಡಲಾಗಿದ್ದು, ಈ ಗುರಿಯನ್ನು ಶೇ.100 ರಷ್ಟು ಸಾಧಿಸಲು ಈಗಾಗಲೇ ಯೋಜನೆ ರೂಪಿಸಲಾಗಿದೆ. ನರೇಗಾ ಯೋಜನೆಯಡಿ ಮಹಿಳಾ ಕೂಲಿಕಾರರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲೆಯಾದ್ಯಂತ ಏಪ್ರಿಲ್ 1 ರಿಂದ ಜೂನ್ 30ರ ವರೆಗೆ ಸ್ತ್ರೀ ಚೇತನ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಬಾರಿಯೂ ಗುರಿ ಸಾಧಿಸಿ ಹ್ಯಾಟ್ರಿಕ್ ಸಾಧನೆ ಮಾಡಲಾಗುವುದು:
ಈಶ್ವರ ಕಾಂದೂ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್, ಉತ್ತರ ಕನ್ನಡ ಜಿಲ್ಲೆ.