ಮುಂಡಗೋಡ ತಾಲೂಕಿನ ಟಿಬೇಟಿಯನ್ ಕ್ಯಾಂಪ್ ಬಳಿ ನಡೆದಿದ್ದ ಕಾರು ಅಪಘಾತ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕಾರವಾರದ ಸಾಮಾಜಿಕ ಕಾರ್ಯಕರ್ತ ಮಾಧವ ನಾಯ್ಕ್ ಇಡೀ ಪ್ರಕರಣದ ಬಗ್ಗೆ ವಿಸ್ತೃತ ದೂರು ನೀಡಿದ್ದಾರೆ. ಘಟನೆ ನಡೆದದ್ದೇ ಬೇರೆ, ಕೇಸು ದಾಖಲಾಗಿದ್ದೇ ಬೇರೆ, ಇನ್ಶ್ಯೂರನ್ಸ್ ಹಣಕ್ಕಾಗಿ ಇಲ್ಲಿ ಇಡೀ ಕೇಸನ್ನೇ ಉಲ್ಟಾ ಪಲ್ಟಾ ಮಾಡಿದ್ದಾರೆ ಅಂತಾ ಗಂಭೀರ ಆರೋಪ ಮಾಡಿದ್ದಾರೆ. ಅಲ್ದೇ ಈ ಕುರಿತು ಪೊಲೀಸ್ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಹೀಗಾಗಿ, ಈ ಕೇಸು ಮುಂಡಗೋಡ ಪೊಲೀಸರಿಗೆ ಬಹುತೇಕ ಉರುಳಾಗೋ ಎಲ್ಲಾ ಸಾಧ್ಯತೆ ಇದೆ.
ಮೊನ್ನೆಯಷ್ಟೇ..!
ಇನ್ನು, ಇತ್ತೀಚಿಗಷ್ಟೆ ಕೌಟುಂಬಿಕ ವಿವಾದದಲ್ಲಿ ಸದ್ದು ಮಾಡಿದ್ದ ಕಾರವಾರದ ಸೈಬರ್ ಕ್ರೈಮ್ ವಿಭಾಗದ DySP ಅಶ್ವಿನಿ .ಬಿ ವಿರುದ್ಧ ಅಧಿಕಾರ ದುರುಪಯೋಗ ,ಇನ್ಸುರೆನ್ಸ್ ಕಂಪನಿಗೆ ವಂಚನೆ, ಸುಳ್ಳು ಪ್ರಕರಣ ದಾಖಲಿಸಿರುವ ಕುರಿತು ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಲಾಗಿದೆ.
ಇದೇಂತಾ ಸುಳ್ಳು ರೀ..?
ಕಾರವಾರದ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯ್ಕ ಎಂಬುವವರು ದೂರು ನೀಡಿದವರಾಗಿದ್ದು ಸೈಬರ್ ಕ್ರೈಂ ವಿಭಾಗದ ಡಿವೈಎಸ್ಪಿ ಅಶ್ವಿನಿ ಬಿ ಅವರ ಕುಟುಂಬದವರು ಚಲಿಸುತ್ತಿದ್ದ ಕಾರು ಮುಂಡಗೋಡದಲ್ಲಿ ಅಪಘಾತವಾಗಿತ್ತು.
ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದರೂ ಟಾಟಾ ಎಸ್ ವಾಹನ ಕಾರಿಗೆ ಗುದ್ದಿರುವ ಬಗ್ಗೆ ಪೊಲೀಸ್ ಪ್ರಕರಣ ದಾಖಲಿಸಿರುವ ಬಗ್ಗೆ ಪೊಲೀಸ್ ಮಹಾನಿರ್ದೇಶಕರಿಗೆ ಇದೀಗ ದೂರು ಸಲ್ಲಿಕೆಯಾಗಿದೆ.
DySp ಪತಿ ನೀಡಿದ್ದ ದೂರು..!
ಸಾಪ್ಟವೇರ್ ಇಂಜಿನಿಯರ್ ಆಗಿರುವ ಅಶ್ವಿನಿ ಬಿ. ಅವರ ಪತಿ ಪ್ರವೀಣಕುಮಾರ ಅವರು ಜನವರಿ 18ರಂದು ಮುಂಡಗೋಡು ಟಿಬೇಟಿಯನ್ ಕಾಲೋನಿಯ ಗೋಶಾಲೆಯ ಬಳಿ ಕಾರು ಚಲಾಯಿಸುತ್ತಿದ್ದಾಗ ಹಜರತ್ ಅಲಿ ಚೋಪಿದಾರ್ ಎಂಬಾತ ಟಾಟಾ ಎಸ್ ವಾಹನ ಗುದ್ದಿದ ಬಗ್ಗೆ ಅಶ್ವಿನಿ ಪತಿ ಪ್ರವೀಣಕುಮಾರ ಅವರು ಮುಂಡಗೋಡ ಠಾಣೆ ಪೊಲೀಸರಿಗೆ ಘಟನೆ ನಡೆದು ಎರಡು ದಿನದ ನಂತರ ದೂರು ನೀಡಿದ್ದರು.
ಎತ್ತಿಗೆ ಜ್ವರ, ಎಮ್ಮೆಗೆ ಬರೆ..!
ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಮುಂಡಗೋಡ ಪೊಲೀಸ್ ಸಿಬ್ಬಂದಿ ಚಂದ್ರಕಾಂತ ರಾಥೋಡ್ ತನಿಖೆ ನಡೆಸುತ್ತಿದ್ದಾರೆ. ಆದರೆ, ಹಜರತ್ ಅಲಿ ಹಾಗೂ ಈ ಅಪಘಾತಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ವಿಮಾ ಪರಿಹಾರ ಪಡೆಯುವುದಕ್ಕಾಗಿ ಅಮಾಯಕನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿರುವ ಬಗ್ಗೆ ಅವರು ದೂರಿದ್ದಾರೆ.
ಅಸಲು ಅವ್ರಪ್ಪಾ ಅಂತೆ ಡ್ರೈವರು..!
ಆ ದಿನ ಅಶ್ವಿನಿ ಅವರ ತಂದೆ ಕಾರು ಚಲಾಯಿಸುತ್ತಿದ್ದರು. ಅವರು ಮರಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೆ ಒಳಗಾಗಿದ್ದಾರೆ. ಆ ಕಾರಿನ ವಿಮೆ ಮಾರ್ಚ 2023ರಲ್ಲಿಯೇ ಮುಕ್ತಾಯಗೊಂಡಿದ್ದು, ಅಪಘಾತದ ವಿಮೆ ಪರಿಹಾರ ಸಿಗುವ ಹಾಗಿರಲಿಲ್ಲ.
ಹೀಗಾಗಿ ಟಾಟಾಎಸ್ ವಾಹನದ ವಿಮೆ ಪಡೆಯುವುದಕ್ಕಾಗಿ ತಪ್ಪು ಮಾಡದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮಾಧವ ನಾಯಕ ದೂರಿದ್ದಾರೆ. ‘ಡಿವೈಎಸ್ಪಿ ಅಶ್ವಿನಿ ಅವರು ಅಧೀನ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಇದರಿಂದ ಇನ್ಸುರೆನ್ಸ್ ಕಂಪನಿ ಹಾಗೂ ಸರ್ಕಾರಕ್ಕೆ ಮೋಸವಾಗಲಿದ್ದು, ತಪ್ಪು ಮಾಡಿದ ಎಲ್ಲಾ ಅಧಿಕಾರಿಗಳಿಗೂ ಶಿಕ್ಷೆಯಾಗಬೇಕು ಎಂದು ಪೊಲೀಸ್ ಮಹಾನಿರ್ದೇಶಕರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಹೀಗಾಗಿ, ಈ ಪ್ರಕರಣವೀಗ ಮುಂಡಗೋಡ ಪೊಲೀಸರ ನಿದ್ದೆಗೆಡಿಸಿದೆ. ಅಮಾಯಕ ಎಎಸ್ಐ ಓರ್ವರ ಮೇಲೆ ಈ ಇಡೀ ಪ್ರಕರಣ ಮುರಿದು ಬೀಳುವ ಎಲ್ಲಾ ಸಾಧ್ಯತೆಯಿದೆ ಎನ್ನಲಾಗಿದೆ.