ಮುಂಡಗೋಡ ಪ.ಪಂಚಾಯತಿಯ ಮುಚ್ಚಂಡಿ ಸಾಹೇಬ್ರು ವರ್ಗವಾಗಿ 20 ದಿನ ಆಯ್ತು..! ಆದ್ರೂ ಇಲ್ಲೇ ಇದಾರಲ್ರಿ..? ಅದ್ಯಾರ ಕೃಪೆ..?

ಮುಂಡಗೋಡ ಪಟ್ಟಣ ಪಂಚಾಯತಿಯ ಬಿಲ್ ಕಲೆಕ್ಟರ್ ಮಂಜುನಾಥ್ ಮುಚ್ಚಂಡಿ ಅಂತೂ ಇಂತೂ ಟ್ರಾನ್ಸಪರ್ ಆಗಿದ್ದಾರೆ‌. ಜುಲೈ 31 ರಂದೇ ವರ್ಗಾವಣೆಗೊಳಿಸಿ ಸರ್ಕಾರ ಆದೇಶಿಸಿದ್ದರೂ ಸಾಹೇಬ್ರು ಮಾತ್ರ ಇನ್ನೂ ಜಾಗ ಕದಲಿಸಿಲ್ಲ. ಅದ್ಯಾರ ಕೃಪೆಯೋ ಅಥವಾ, ತಮಗಿರೋ ಭಾರೀ ಪ್ರಭಾವ ಬಳಸಿ ಇಲ್ಲೇ ಮುಂದುವರಿಯೋ ಮಹಾ ಪ್ಲ್ಯಾನೋ ಯಾರಂದ್ರೆ ಯಾರಿಗೂ ಅರ್ಥವಾಗಿಲ್ಲ. ಹೀಗಾಗಿ, ಸಾರ್ವಜನಿಕ ವಲಯದಲ್ಲಿ ಇದು ಭಾರೀ ಚರ್ಚೆಗೆ ಕಾರಣವಾಗ್ತಿದೆ. ಗುಸು, ಗುಸು ಪಿಸು, ಪಿಸು ನಡೀತಿದೆ..!

ವರ್ಗಾವಣೆ ಆದೇಶ ಪ್ರತಿ

ಅಸಲು, ಸಾಕಷ್ಟು ಆಕ್ರೋಶಗಳು, ಆರೋಪಗಳು ಮಾರ್ದನಿಸಿದ ಹಿನ್ನೆಲೆಯಲ್ಲಿ, ಮುಚ್ಚಂಡಿ ಸಾಹೇಬ್ರನ್ನು ಸರ್ಕಾರ ವರ್ಗಾವಣೆಗೊಳಿಸಿದೆ ಅನ್ನೊ ಮಾಹಿತಿ ಸಿಕ್ಕಿದೆ. ಅಂದಹಾಗೆ, ಸರ್ಕಾರ ಇವರನ್ನು ವರ್ಗಾವಣೆಗೊಳಿಸಿ ಮುಂದಿನ ಕಾರ್ಯಸ್ಥಳವನ್ನೇ ನೀಡಿಲ್ಲ. ಆದ್ರೆ, ಮುಂದೆ ಸ್ಥಳ ಸೂಚಿಸುವ ವರೆಗೂ ಬೆಂಗಳೂರಿನ ಕೇಂದ್ರ ಸ್ಥಾನದಲ್ಲಿ ಇರುವಂತೆ ಸೂಚಿಸಲಾಗಿದೆ. ಹೀಗಾಗಿ, ಶಿರಿಸಿಯಿಂದ ಬರುವ ಹುಚ್ಚಯ್ಯ ಹಿರೇಮಠರು ಖೋ… ಅಂದಕೂಡಲೇ ಮುಚ್ಚಂಡಿ ಸಾಹೇಬ್ರು ಬೆಂಗಳೂರಿನ ಬಸ್ ಹತ್ತಬೇಕಿದೆ.

ಜನಾಕ್ರೋಶವಿತ್ತು..!
ಅಸಲು, ಮುಂಡಗೋಡ ಪಟ್ಟಣ ಪಂಚಾಯತಿಯಲ್ಲಿ ಒಂದಿಷ್ಟು ಮುಖಗಳು ಮುಂಡಗೋಡಿಗರ ಕಣ್ಣು ಕೆಂಪಗಾಗಿಸಿವೆ. ಪಟ್ಟಣದ ಅಭಿವೃದ್ಧಿ ಅನ್ನೋ ಪದದ ಮಾನ ಮರ್ಯಾದೆಯನ್ನೇ ಕಳೆದಂತಾಗಿದೆ. ಇಲ್ಲಿನ ಕೆಲ ಸಿಬ್ಬಂದಿಗಳ ಅಟ್ಟಹಾಸಗಳು ಇಡೀ ಪಟ್ಟಣದ ಮಂದಿಗೆ ವಾಕರಿಕೆ ತರಿಸಿವೆ. ಆದ್ರೂ, ಇಲ್ಲಿನ ಅಸಲೀ ಕಾರುಬಾರುಗಳು ಮಾತ್ರ ಕೆಲವೇ ಕೆಲವು ಆಟಗಾರರ ಕೈಯಲ್ಲಿ ಬದ್ರವಾಗಿದೆ ಅನ್ನೋ ಆರೋಪಗಳಿವೆ. ಫಾರ್ಮ ನಂಬರ್ 3 ಅನ್ನೋ ಮಾಯಾಂಗನೆಯ ಹಿಂದೆ ದೊಡ್ಡದೊಂದು ದಂಧೆಯೇ ಹುಟ್ಟಿಕೊಂಡಿದೆ ಅನ್ನೋ ಬಾತ್ಮಿಗಳಿವೆ. ಈ ಕಾರಣಕ್ಕಾಗೇ ತಾಲೂಕಿನಲ್ಲಿ ನಡೆವ ಅದೇಷ್ಟೋ ಕೆಡಿಪಿ, ಜನಸ್ಪಂಧನ ಸಭೆಗಳಲ್ಲಿ ಸಾರ್ವಜನಿಕರಿಂದ ಪಟ್ಟಣ ಪಂಚಾಯತಿಯ ಕೆಲ ಸಿಬ್ಬಂದಿಗಳ ವಿರುದ್ಧ ಆಕ್ರೋಶಗಳು ತುಂಬಿ ತುಳುಕಿವೆ.

ಅದ್ರಲ್ಲಿ ಈ ಮಂಜಣ್ಣ ಮುಚ್ಚಂಡಿಯವರ ಬಗ್ಗೆ ಸಾಕಷ್ಟು ಆರೋಪಗಳು ನಿತ್ಯದ ಪುಕಾರುಗಳಾಗಿದ್ದವು. ಅದೇಂತದ್ದೇ ಮೀಟಿಂಗು ಇದ್ರೂ ಅಲ್ಲಿ ಇವರ ಬಗ್ಗೆ ಸಾರ್ವಜನಿಕರು, ಜನಪ್ರತಿನಿಧಿಗಳು ಇನ್ನಿಲ್ಲದ ಆಕ್ರೋಶ, ಆರೋಪಗಳನ್ನು ಸ್ಪೋಟಿಸುತ್ತಿದ್ರು. ಹೀಗಾಗಿ, ಕೊನೆಗೂ ಮುಚ್ಚಂಡಿಯವರ ವರ್ಗಾವಣೆ ನಡೆದು ಹೋಗಿದೆ. ದಶಕಗಳ ಕಾಲ ಮುಂಡಗೋಡ ಪಟ್ಟಣ ಪಂಚಾಯತಿಯ ಅನಭಿಷಕ್ತರಾಗಿದ್ದ ಮಂಜಣ್ಣರಿಗೆ ಈ ವರ್ಗಾವಣೆ ನಿಜಕ್ಕೂ ಸಿಡಿಲಾಘಾತ ನೀಡಿದೆ.

ಯಾರ ಕೃಪೆಯೋ..?
ನಿಜ ಅಂದ್ರೆ ಇಷ್ಟು ವರ್ಷಗಳ ಕಾಲ ಮುಂಡಗೋಡ ಪಟ್ಟಣ ಪಂಚಾಯತಿಯಲ್ಲಿ ಅದೇಷ್ಟೇ ಆರೋಪಗಳು ಬಂದ್ರೂ, ಆಕ್ರೋಶಗಳು ಬಂದ್ರೂ ಯಾರಂದ್ರೆ ಯಾರೂ ಮುಚ್ಚಂಡಿಯವರ ಬಗ್ಗೆ ತುಟಿ ಬಿಚ್ಚುತ್ತಿರಲಿಲ್ಲ. ಯಾವ ಕ್ರಮಗಳೂ ನಡೆದಿರಲಿಲ್ಲವಂತೆ.. ಹಾಗಂತ ಸಾಮಾನ್ಯ ಜನರೂ ಕೂಡ ಮಾತಾಡಿಕೊಳ್ತಿದ್ರು. ಆದ್ರೆ, ಇವಾಗ ಅದ್ಯಾವ ಪುಣ್ಯಾತ್ಮರು ಈ ಕ್ರಮಕ್ಕೆ ಶಿಪಾರಸ್ಸು ಮಾಡಿದ್ರೋ ದೇವ್ರೆ..? ಅಂತಾ ಸಾರ್ವಜನಿಕರು ಮಾತಾಡಿಕೊಳ್ತಿದಾರಂತೆ. ಅಸಲು, ವರ್ಗಾವಣೆ ಆದೇಶ ಬಂದು 20 ದಿನಗಳು ಕಳೆದ್ರೂ ಈ ಕ್ಷಣದವರೆಗೂ ಸಾಹೆಬ್ರೂ ಇಲ್ಲೇ ಇದ್ದಾರಲ್ಲ..? ಅಂತ ಜನ ಅಚ್ಚರಿಯೊಂದಿಗೆ ಆತಂಕಗೊಂಡಿದ್ದಾರಂತೆ. ಹೀಗಾಗಿ, ಮಾತ್ಯಾರದ್ದಾದ್ರೂ ಕೃಪೆಯ “ಹಸ್ತ” ಒಳಗೊಳಗೇ ಉಳಿಸಿಕೊಳ್ಳುವ ಮಸಲತ್ತು ನಡೆಸ್ತಿದೆಯಾ ಅನ್ನೋ ಅನುಮಾನ ಶುರುವಾಗಿದೆ.

ಒಟ್ನಲ್ಲಿ, ಮುಂಡಗೋಡ ಪಟ್ಟಣ ಪಂಚಾಯತಿಯ ಕರವಸೂಲಿಗಾರ ಮಂಜುನಾಥ್ ಮುಚ್ಚಂಡಿ ವರ್ಗಾವಣೆಗೊಂಡಿದ್ದಾರೆ. ಸದ್ಯ ಶಿರಸಿ ನಗರಸಭೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ನಿರ್ವಹಿಸ್ತಿದ್ದ, ಹುಚ್ಚಯ್ಯ ಕುಮಾರಸ್ವಾಮಿ ಹಿರೇಮಠ ಮುಂಡಗೋಡ ಪಟ್ಟಣ ಪಂಚಾಯತಿಗೆ ಬಂದು ಹಾಜರಾಗುತ್ತಿದ್ದಾರೆ ಅನ್ನೋದು ಬರೋಬ್ಬರಿ ಇಪ್ಪತ್ತು ದಿನಗಳ ಹಿಂದಿನ ಮಾತು.. ಅಷ್ಟೇ..!

error: Content is protected !!