ಶಿರೂರು ಗುಡ್ಡ ಕುಸಿತದಿಂದ ಹಾನಿಯಾದ ಮೀನುಗಾರರಿಗೆ ಪರಿಹಾರ ವಿತರಿಸಿದ ಸಚಿವ ಮಂಕಾಳ ವೈದ್ಯ, ನಾಳೆ ಸಿಎಂ ಜಿಲ್ಲೆಗೆ..!

ಕಾರವಾರ; ಅಂಕೋಲಾ ತಾಲೂಕಿನ ಶಿರೂರು ಬಳಿಯ ಗುಡ್ಡ ಕುಸಿತದಿಂದ ಹಾನಿಯಾದ ಉಳುವರೆ ಗ್ರಾಮದ ಮೀನುಗಾರರ ಕುಟುಂಬಗಳ 59 ಜನರಿಗೆ ರೂ. 25000 ದಂತೆ 14,75,000 ಮೊತ್ತದ ಚೆಕ್‌ನ್ನು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಶನಿವಾರ ವಿತರಿಸಿದರು.

ನಂತರ ಮಾತನಾಡಿದ ಸಚಿವರು, ಗುಡ್ಡಕುಸಿತದಿಂದ ಹಾನಿಯಾದ ಉಳುವರೆ ಗ್ರಾಮದ ಮೀನುಗಾರರಿಗೆ ಸರ್ಕಾರದ ವತಿಯಿಂದ ಎಲ್ಲಾ ಅಗತ್ಯ ನೆರವು ಒದಗಿಸಲು ಬದ್ದವಾಗಿದ್ದು, ಈಗಾಗಲೇ ಇಲ್ಲಿನ ಜನರಿಗೆ ಅಗತ್ಯ ನಿವೇಶನ ನೀಡಲು ಸ್ಥಳ ಗುರುತಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದರು. ಪ್ರಸ್ತುತ ತುರ್ತು ಕ್ರಮವಾಗಿ ಮೀನು ಬಲೆ, ದೋಣಿ ದುರಸ್ತಿ ಮತ್ತಿತರ ಕಾರ್ಯಗಳಿಗಾಗಿ ರೂ.25000 ದ ಪರಿಹಾರ ವಿತರಿಸಲಾಗಿದ್ದು, ಈ ಅವಘಡದಲ್ಲಿ ಮನೆ ಕಳೆದುಕೊಂಡವರಿಗೆ 1.20 ಲಕ್ಷ ಮತ್ತು ಮೃತಪಟ್ಟ ಕುಟುಂಬದ ವಾರಿಸುದಾರರಿಗೆ 5 ಲಕ್ಷ ರೂ. ಗಳ ಚಕ್ ವಿತರಿಸಲಾಗಿದ್ದು, ಮೀನುಗಾರಿಕಾ ಇಲಾಖೆ ವತಿಯಿಂದ ಇನ್ನೂ ಹೆಚ್ಚಿನ ಪರಿಹಾರ ಒದಗಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು. ಈ ಭಾಗದ ಸಂತ್ರಸ್ತರಿಗೆ ಶಾಸಕರು ಮತ್ತು ತಾವು ರೂ.10000 ಗಳ ವೈಯಕ್ತಿಕ ನೆರವು ಸಹ ಒದಗಿಸಲಾಗಿದ್ದು, ಇಲ್ಲಿನ ಜನತೆಯ ಸಂಕಷ್ಟಕ್ಕೆ ಪಕ್ಷ ಬೇಧ ಮರೆತು ಸದಾ ಸ್ಪಂದಿಸುವುದಾಗಿ ಸಚಿವರು ತಿಳಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕನ್ಸಲ್ಟೆಂಟ್ ಅಂಡ್ ಏಜೆನ್ಸಿಸ್ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್, ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇರ್ಶಕ ಬಬಿನ್ ಬೋಪಣ್ಣ, ಉಪ ನಿರ್ದೇಶಕ ಪ್ರತೀಕ್, ಅಂಕೋಲಾ ತಹಶೀಲ್ದಾರ್ ಅನಂತ ಶಂಕರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುನಿಲ್ ಮತ್ತಿತರರು ಉಪಸ್ಥಿತರಿದ್ದರು.

ಶಿರೂರು ಗುಡ್ಡ ಕುಸಿತದಲ್ಲಿ ಸಿಲುಕಿರುವವರಿಗೆ ನಿರಂತರ ಶೋಧ..!
ಅಂಕೋಲಾ ತಾಲೂಕಿನ ಶಿರೂರು ಬಳಿಯ ಗುಡ್ಡ ಕುಸಿತದಲ್ಲಿ ಸಿಲುಕಿರುವವನ್ನು ಪತ್ತೆ ಹಚ್ಚಲು ಜಿಲ್ಲಾಡಳಿತ ವತಿಯಿಂದ ನಿರಂತರವಾಗಿ ವ್ಯಾಪಕ ಶೋಧ ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು. ಅವರು ಶನಿವಾರ ಅಂಕೋಲಾ ತಾಲೂಕಿನ ಶಿರೂರು ಬಳಿಯ ಗುಡ್ಡಕುಸಿತ ಪ್ರದೇಶಕ್ಕೆ ಭೇಟಿ ನೀಡಿ, ಗುಡ್ಡ ಕುಸಿತದಿಂದ ಬಿದ್ದಿರುವ ಮಣ್ಣು ತೆರವು ಪರಿಶೀಲನಾ ಕಾರ್ಯಾಚರಣೆ ವೀಕ್ಷಿಸಿ ಮಾತನಾಡಿದರು. ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿರುವವರನ್ನು ಹುಡುಕಲು ಜಿಲ್ಲಾಡಳಿತ ವತಿಯಿಂದ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದ್ದು, ನಿರಂತರವಾಗಿ ಗುಡ್ಡದಿಂದ ಜಾರಿರುವ ಮಣ್ಣು ತೆರವು ಕಾರ್ಯ ಮಾಡಲಾಗುತ್ತಿದೆ. ಅಲ್ಲದೆ ಸುರತ್ಕಲ್‌ನ ಎನ್.ಐ.ಟಿ.ಕೆ ಯಿಂದ ಆಗಮಿಸಿರುವ ತಜ್ಞರ ತಂಡ ರಾಡಾರ್ ಮೂಲಕ ಪತ್ತೆ ಕಾರ್ಯಚರಣೆ ಕೈಗೊಂಡಿದೆ. ರಾಷ್ಟಿಯ ವಿಪತ್ತು ನಿರ್ವಹಣಾ ತಂಡ, ರಾಜ್ಯ ವಿಪತ್ತು ನಿರ್ವಹಣಾ ತಂಡ ಮತ್ತು ಅಗ್ನಿಶಾಮಕ ಇಲಾಖೆ ವತಿಯಿಂದ ಸಮೀಪದ ನದಿಯಲ್ಲಿಯೂ ಪತ್ತೆ ಕಾರ್ಯ ನಡೆಯುತ್ತಿದೆ. ಹೆಲಿಕ್ಯಾಪ್ಟರ್ ಮೂಲಕ ಕಾರ್ಯಾಚರಣೆ ಮಾಡಲು ಜಿಲ್ಲಾಡಳಿತ ಈಗಾಗಲೇ ಕ್ರಮ ಕೈಗೊಂಡಿದ್ದು ಹವಾಮಾನ ವೈಪರಿತ್ಯದ ಕಾರಣದಿಂದ ವಿಳಂಬವಾಗಿದ್ದು ಆದರೂ ಸಹ ಜಿಲ್ಲಾಡಳಿದ ಮೂಲಕ ಸರ್ವ ರೀತಿಯಲ್ಲೂ ಪ್ರಯತ್ನ ಮಾಡಲಾಗುತ್ತಿದೆ ಎಂದರು. ಗುಡ್ಡ ಕುಸಿತ ಪ್ರದೇಶದ ಮೇಲ್ಬಾಗಕ್ಕೆ ಕ್ರೇನ್ ಮೂಲಕ ತೆರಳಿದ ಸಚಿವರು ಮತ್ತು ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕನ್ಸಲ್ಟೆಂಟ್ ಅಂಡ್ ಏಜೆನ್ಸಿಸ್ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್ ರಕ್ಷಣಾ ಕಾರ್ಯಚರಣೆಯನ್ನು ವೀಕ್ಷಿಸಿ ಅಗತ್ಯ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್, ಭಟ್ಕಳ ಉಪ ವಿಭಾಗಾಧಿಕಾರಿ ಡಾ. ನಯನ ಮತ್ತು ವಿವಿಧ ಅಧಿಕಾರಿಗಳು ಇದ್ದರು.

ನಾಳೆ ಜಿಲ್ಲೆಯಲ್ಲಿ ಸಿಎಂ ಪ್ರವಾಸ..
ಕಾರವಾರ; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜು.21 ರಂದು ಉತ್ತರ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಅಂದು ಮಧ್ಯಾಹ್ನ 2.15 ಗಂಟೆಗೆ ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಅತಿವೃಷ್ಠಿಯಿಂದಾದ ಗುಡ್ಡ ಕುಸಿತದ ಸ್ಥಳಕ್ಕೆ ಭೇಟಿ ಹಾಗೂ ಗುಡ್ಡ ಕುಸಿತದಿಂದ ಸಂತ್ರಸ್ತರಾದ ಕುಟುಂಬದವರನ್ನು ಭೇಟಿ ಮಾಡಲಿದ್ದಾರೆ. ನಂತರ ಸಂಜೆ 4.45 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ನೌಕಾನೆಲೆ, ಕೆಪಿಸಿಎಲ್ ಮತ್ತು ಎನ್‌ಪಿಸಿಎಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಪ್ರಕಟಣೆ ತಿಳಿಸಿದೆ.

error: Content is protected !!