ಜಿಲ್ಲೆಯಲ್ಲಿ ಇನ್ಮೇಲೆ ಅಕ್ರಮಿಗಳು ಬಾಲ ಬಿಚ್ಚಂಗಿಲ್ಲ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕ್ತಿವಿ : ನೂತನ ಎಸ್ಪಿ ನಾರಾಯಣ್ ಮೊದಲ ಮಾತು

ಕಾರವಾರ: ಉತ್ತರ ಕನ್ನಡದಲ್ಲಿ ಶಾಂತಿ ಸುವ್ಯವಸ್ಥೆ ಮತ್ತು ಕೋಮು ಸೌಹಾರ್ದತೆ ಕಾಪಾಡಲು ಹೆಚ್ಚಿನ ಆದ್ಯತೆ ನೀಡಲಿದ್ದು, ಜಿಲ್ಲೆಯಲ್ಲಿನ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ, ಜಿಲ್ಲೆಯಲ್ಲಿ ಅಪರಾಧ ಸಂಖ್ಯೆಗಳನ್ನು ಕಡಿಮೆ ಮಾಡಿ, ಜನಸ್ನೇಹಿ ಪೊಲೀಸ್ ವ್ಯವಸ್ಥೆ ಮಾಡುವುದಾಗಿ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ್ ಹೇಳಿದ್ರು.

ಅವರು ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡು ಮಾತನಾಡಿದರು.

ಇಲ್ಲಿ ಕೆಲಸ ಮಾಡೋದು ಸವಾಲು..!
ಬಹುತೇಕ ಅರಣ್ಯ ಪ್ರದೇಶದಿಂದ ಕೂಡಿಕೊಂಡಿರುವ ಉತ್ತರ ಕನ್ನಡ ಜಿಲ್ಲೆ ಪ್ರಕೃತಿ ಸೌಂದರ್ಯದಿಂದ ಭರಿತವಾಗಿದೆ. ಗಡಿಭಾಗದ ಜಿಲ್ಲೆಯಾಗಿರುವುದರಿಂದ ಇಲ್ಲಿ ಕೆಲಸ ಮಾಡುವುದು ಸವಾಲಾಗಿದೆ, ಜಿಲ್ಲೆಯ ಎಲ್ಲರ ಸಹಕಾರದಿಂದ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳ ಜೊತೆಗೂಡಿ ಜನರಿಗೆ ಉತ್ತಮ ಸೇವೆ ನೀಡಲಾಗುವುದು ಎಂದರು.

ನಾನು ಜಿಲ್ಲೆಗೆ ಹೊಸಬನಲ್ಲ..!
ಉತ್ತರ ಕನ್ನಡ ಜಿಲ್ಲೆ ಹೊಸ ಜಿಲ್ಲೆಯಲ್ಲ. ಈ ಹಿಂದೆ ಜಿಲ್ಲೆಯ ಭಟ್ಕಳದಲ್ಲಿ ಕಾರ್ಯನಿರ್ವಹಿಸಿದ ಅನುಭವವಿದ್ದು, ಮರಳಿ ಮನೆಗೆ ಬಂದ ಹಾಗೆ ಆಗಿದೆ. ಜಿಲ್ಲೆಯ ಜನರ ರಕ್ಷಣೆ ಪೊಲೀಸ್ ಇಲಾಖೆ ಮೇಲೆ ಇದ್ದು, ಯಾರೂ ಕೂಡಾ ಕಾನೂನನ್ನು ದುರುಪಯೋಗ ಪಡಿಸಿಕೊಂಡು ಅಮಾಯಕರ ಮೇಲೆ ಸುಳ್ಳು ಕೇಸ್ ನೀಡಬಾರದು. ರಾಜ್ಯದ ಗುಪ್ತಚರ ವಿಭಾಗದಲ್ಲಿ ಕಾರ್ಯ ನಿರ್ವಹಿಸಿರುವುದರಿಂದ, ಜಿಲ್ಲೆಯ ಪತ್ರಿಯೊಂದು ಹಳ್ಳಿಯ ಇಂಚಿಂಚು ಗೊತ್ತಿದೆ. ಪ್ರತಿ ಹೋಬಳಿಯಲ್ಲಿ ಮಾಹಿತಿದಾರರಿದ್ದು, ಕಾನೂನನ್ನು ಯಾರು ದುರುಪಯೋಗ ಮಾಡಿಕೊಳ್ಳಬಾರದು ಒಂದು ವೇಳೆ ಕಾನೂನು ದುರುಪಯೋಗ ಮಾಡಿಕೊಂಡಲ್ಲಿ ಅಂತಹವರ ವಿರುದ್ಧ ಹೊಸ ಕಾನೂನಿಂತೆ ಕ್ರಮ ಕೈಗೊಂಡು ಹೆಡೆಮುರಿ ಕಟ್ಟಲಾಗುವುದು ಎಂದರು.

ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ ಗಮನಕ್ಕೆ ತಂದರೆ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಹಾಗೂ ಜಿಲ್ಲೆಯ ಹೆದ್ದಾರಿಯಲ್ಲಿ ಆಗುತ್ತಿರುವ ಅಪಘಾತ ಪ್ರಕರಣಗಳ ಬಗ್ಗೆ ಮಾಹಿತಿ ಇದ್ದು, ರಾಷ್ಟಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಚರ್ಚಿಸಿ ಅಪಘಾತ ವಲಯದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಅಪಘಾತ ಪ್ರಕರಣಗಳನ್ನು ಕಡಿಮೆ ಮಾಡಲಾಗುವುದು ಮತ್ತು ನಗರಗಳಲ್ಲಿ ಟ್ರಾಫಿಕ್ ನಿಯಮ, ಸಿಸಿಟಿವಿ ಅಳವಡಿಕೆ ಸೇರಿದಂತೆ ಎಲ್ಲಾ ಸುರಕ್ಷಾ ಕ್ರಮಗಳನ್ನು ಕೈಗೊಂಡು ಟ್ರಾಫಿಕ್ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದರು.

ಜಿಲ್ಲೆಯು ಪ್ರಮುಖ ಪ್ರವಾಸಿ ತಾಣವಾಗಿದ್ದು, ಇಲ್ಲಿಗೆ ಬರುವ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು, ಪೊಲೀಸ್ ಗುಪ್ತಚರ ವಿಭಾಗವನ್ನು ಇನ್ನಷ್ಟು ಬಲಪಡಿಸಲಾಗುವುದು, ಈ ಹಿಂದೆ ಭಟ್ಕಳದಲ್ಲಿ ಕೆಲಸ ನಿರ್ವಹಿಸಿರುವ ಅನುಭವವಿದ್ದು, ಜಿಲ್ಲೆಯ ಬಗ್ಗೆ ತಿಳಿದಿದೆ ಎಂದರು.

ಜಿಲ್ಲೆಯ ಜನರು, ವಿವಿಧ ಇಲಾಖೆಗಳು ಮತ್ತು ಮಾಧ್ಯಮದವರ ಸಹಕಾರದಿಂದ ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅಹಿತಕರ ಘಟನೆಗಳು ಜರುಗದಂತೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುವುದು ಎಂದರು.

ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಹದ್ದಿನ ಕಣ್ಣು ಇಡಲಾಗಿದೆ. ಯಾವುದೇ ಮಾಹಿತಿಯನ್ನು ಪರಾಮರ್ಶಿಸದೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬಾರದು. ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ, ಶಿಸ್ತು, ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಭಾರತ ಟಿ20 ವಿಶ್ವ ಕಪ್ ಗೆದ್ದ ರೀತಿಯಲ್ಲಿ ಪೊಲೀಸ್ ಇಲಾಖೆಯಿಂದ ಜಿಲ್ಲೆಯ ಜನರ ಮನಸ್ಸಿನ ಕಪ್ ಗೆಲ್ಲುತ್ತೇವೆ ಎಂದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್ ಹಾಗು ಜಿಲ್ಲೆಯ ಎಲ್ಲಾ ಡಿವೈಎಸ್‌ಪಿಗಳು , ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತಿತರರು ಇದ್ದರು

error: Content is protected !!