ಮುಂಡಗೋಡ: ಚುನಾವಣೆಯೆಂಬ ಪರೀಕ್ಷೆ ಬಂದಿದೆ. ಎದುರಾಳಿ ಬಿಜೆಪಿ ಮನೆಯನ್ನ ಬಿಟ್ಟು ನಮ್ಮ ಮನೆಗೆ ಬರಲು ಹೊರಟಿರುವವರಿಗೆ ಸ್ವಾಗತ ಮಾಡಬೇಕಿದೆ. ಕಾಂಗ್ರೆಸ್ ಎಂಬುದು ದೊಡ್ಡ ಸಮುದ್ರ. ನಮಗೆ ಎಲ್ಲವನ್ನೂ ಅರಗಿಸಿಕೊಳ್ಳುವ ಶಕ್ತಿ ಇದೆ. ಯಾವ ಟೈಮ್ ನಲ್ಲಿ ಯಾವ ಆಪರೇಷನ್ ಮಾಡಬೇಕೆಂಬುದೂ ನನಗೆ ಗೊತ್ತಿದೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಹೇಳಿದರು.

ಮುಂಡಗೋಡಿನಲ್ಲಿ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣಾ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಎಷ್ಟೇ ಗುಂಪಿದ್ದರೂ, ವೈಮಸ್ಸಿದ್ದರೂ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಾಗಿ ದುಡಿಯುತ್ತೀರೆಂಬ ವಿಶ್ವಾಸವಿದೆ. ವಿವಿಧ ಧರ್ಮ- ಸಂಸ್ಕೃತಿಗಳಿದ್ದರೂ ಮುಂಡಗೋಡದಲ್ಲಿ ಎಲ್ಲರೂ ಒಂದಾಗಿ ಬಾಳುತ್ತಿದ್ದಾರೆ. ಕಾಂಗ್ರೆಸ್ ಎಂದರೆ ನನ್ನ ಕುಟುಂಬವಿದ್ದಂತೆ. ಇಲ್ಲಿ ಎಲ್ಲರ ಮಾತಿಗೂ ಬೆಲೆ ಇದೆ. ಪಕ್ಷ ನಿಮ್ಮ ಹಿಂದಿದೆ, ಕಾರ್ಯಕರ್ತರೂ ಪಕ್ಷದೊಂದಿಗೆ ಇರಬೇಕು. ಹಿಂದುಳಿದ ತಾಲೂಕು, ಜಿಲ್ಲೆಯ ಅಭಿವೃದ್ಧಿಗೆ ಸಂಸತ್ ನಲ್ಲಿ ಮಾತನಾಡಲು ಪಕ್ಷದ ಸಂಸದರು ಬೇಕೇ ಬೇಕು. ಇದಕ್ಕಾಗಿ ನನ್ನನ್ನ ನಿಮ್ಮ ಮನೆ ಮಗಳೆಂದು ಆಶೀರ್ವದಿಸಿ ಎಂದು ಮನವಿ ಮಾಡಿದರು.

ಮಾಜಿ ಶಾಸಕ ವಿ.ಎಸ್.ಪಾಟೀಲ್ ಮಾತನಾಡಿ, ಐದು ಗ್ಯಾರಂಟಿ ಕೊಟ್ಟು ರಾಜ್ಯದಲ್ಲಿ ೧.೧೭ ಕೋಟಿ ಆರ್ಥಿಕವಾಗಿ ಹಿಂದುಳಿದವರನ್ನ ಮೇಲಕ್ಕೆತ್ತುವ ಕೆಲಸ ಮಾಡಲಾಗಿದೆ. ತಾಲೂಕಿನಲ್ಲಿ ೨೪,೩೪೪ ಪಡಿತರ ಕಾರ್ಡ್ ನಲ್ಲಿ ೧೯,೮೮೮ ಜನರಿಗೆ ಅನ್ನಭಾಗ್ಯ ಹಣ ಜಮೆಯಾಗಿದೆ. ಕನಿಷ್ಠ ಎರಡು ಸಾವಿರ ಕುಟುಂಬಕ್ಕೆ ಗೃಹಲಕ್ಷ್ಮೀ ಹಣ ಬರುತ್ತಿದೆ. ಪ್ರತಿ ಬೂತ್ ನಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ತಿಳಿವಳಿಕೆ ಮೂಡಿಸಬೇಕಿದೆ ಎಂದರು‌.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್ ಮಾತನಾಡಿ, ಡಾ.ಅಂಜಲಿ ನಿಂಬಾಳ್ಕರ್ ಅವರಂಥ ಸರಳ- ಸಜ್ಜನಿಕೆಯ ಮಹಿಳೆ ನಮ್ಮ ಪಕ್ಷದ ಅಭ್ಯರ್ಥಿಯಾಗಿರುವುದು ಹಮ್ಮೆಯ ಸಂಗತಿ. ವೈದ್ಯರಾಗಿದ್ದರೂ ಇನ್ನಷ್ಟು ಸಾಮಾಜಿಕ ಕಾರ್ಯಗಳನ್ನ ಮಾಡಬೇಕೆಂಬ ಉತ್ಕಟ ಮನಸ್ಸಿನಿಂದ ರಾಜಕೀಯ ರಂಗ ಪ್ರವೇಶಿಸಿ, ವಿವಿಧ ಹುದ್ದೆಗಳನ್ನ ಅಲಂಕರಿಸಿ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಡಾ.ಅಂಜಲಿಯವರ ಗೆಲುವು ನಮ್ಮೆಲ್ಲರ ಗೆಲುವಿದ್ದಂತೆ. ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ತಿಳಿವಳಿಕೆ‌ ನೀಡುತ್ತಾ ಮತ ಪಡೆಯಬೇಕಿದೆ ಎಂದರು‌.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜ್ಞಾನದೇವ ಗುಡಿಯಾಳ್ ಮಾತನಾಡಿ, ಜಿಲ್ಲೆಯಲ್ಲಿ ಮುಂಡಗೋಡ ತಾಲೂಕಿನಲ್ಲೇ ನಮ್ಮ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಹೆಚ್ಚಿನ ಮತ ಬೀಳುವಂತೆ ಪ್ರಯತ್ನಿಸೋಣ. ಎಲ್ಲರೂ ಒಗ್ಗಟ್ಟಾಗಿ ದುಡಿದು ಅವರನ್ನು ಗೆಲ್ಲಿಸೋಣ ಎಂದು ಕರೆನೀಡಿದರು.

ಹಿರಿಯ ಕಾಂಗ್ರೆಸ್ಸಿಗ ಎಚ್.ಎಂ.ನಾಯ್ಕ, ಪಕ್ಷ ವಿರೋಧಿ ಕೆಲಸ ಮಾಡುವವರನ್ನ ಗುರುತಿಸುವ ಕೆಲಸ ಮಾಡದಿದ್ದರೆ ಭವಿಷ್ಯವಿಲ್ಲ. ಪಕ್ಷ ನಿಷ್ಠೆ ಇದ್ದವರನ್ನು ಜಿಲ್ಲಾ ಸಮಿತಿ ಮರೆಯಬಾರದು. ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಪಕ್ಷಕ್ಕೆ ಅನ್ಯಾಯವಾಗಬಾರದು. ಡಾ.ಅಂಜಲಿ ತಾಯಿಯವರನ್ನ ಬಹುಮತದಿಂದ ಆರಿಸುವ ಜವಾಬ್ದಾರಿ ಜಿಲ್ಲಾ ಸಮಿತಿಗೂ ಇದೆ, ಅದನ್ನ ನಿಷ್ಠೆಯಿಂದ ಮಾಡಬೇಕಿದೆ ಎಂದರು‌.

ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ, ಎಚ್.ಎಂ.ನಾಯ್ಕ, ದೀಪಕ್ ದೊಡ್ಡೂರು, ರಾಜಶೇಖರ ಹಿರೇಮಠ, ಮರಿಯೋಜಿ ರಾವ್, ಕೃಷ್ಣ ಹಿರೇಹಳ್ಳಿ, ಗೋಪಾಲ ಪಾಟೀಲ ಸೇರಿದಂತೆ ಹಲವು ಮುಖಂಡದರು ಹಾಜರಿದ್ದರು.

error: Content is protected !!