ಮುಂಡಗೋಡ: ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮುಂಡಗೋಡ ತಹಶೀಲ್ದಾರ್ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ರು‌. ಸಭೆಯಲ್ಲಿ ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಅಭಿವೃದ್ಧಿ ವಿಷಯಗಳ ಕುರಿತು ಚರ್ಚಿಸಿದ ಸಚಿವ್ರು, ಕೆಲವು ಅಧಿಕಾರಿಗಳ ಕಿವಿ ಹಿಂಡಿದ್ರು‌.

ಗೃಹಲಕ್ಷ್ಮೀ ಯೋಜನೆ ಬಿಸಿ..!
ಸಭೆಯಲ್ಲಿ ಬಹುತೇಕ ಗ್ಯಾರಂಟಿ ಯೋಜನೆಗಳ ಅನುಷ್ಟಾನಗಳ‌ ಕುರಿತು ಅಧಿಕಾರಿಗಳೊಂದಿಗೆ ಮಾಹಿತಿ ಪಡೆದ ಸಚಿವ ಮಂಕಾಳು ವೈದ್ಯ, ಅನುಷ್ಟಾನದಲ್ಲಿ ಕೊಂಚವಾದ್ರೂ ಯಡವಟ್ಟು ಆಗಿದ್ರೆ ಸಹಿಸಲ್ಲ ಅನ್ನೋ ಸ್ಪಷ್ಟ ಸಂದೇಶ ರವಾನಿಸಿದ್ರು. ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆ ಸಿಕ್ಕಿಲ್ಲ ಎಂದು ತಾಲೂಕಿನಿಂದ ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿ ಇಲ್ಲವೆ ಇತರೆ ಸಚಿವರ ಬಳಿ ಹೇಳಿದರೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬರ್ಥ ಅಂತಾ ಖಡಕ್ಕಾಗಿ ಅಧಿಕಾರಿಗಳಿಗೆ ಕಿವಿ ಹಿಂಡಿದ್ರು.

ಪ್ರಭಾರ CDPO ಜಟಾಪಟಿ..!
ಸಭೆಯಲ್ಲಿ, ಗೃಹಲಕ್ಷ್ಮೀ ಯೋಜನೆಯ ಅನಿಷ್ಟಾನದ ಕುರಿತು ಪ್ರಭಾರ ಸಿಡಿಪಿಓ ರನ್ನು ಪ್ರಶ್ನಿಸಿದ ಸಚಿವ್ರು, ಗೃಹಲಕ್ಷ್ಮೀ ಯೊಜನೆಯಡಿಯಲ್ಲಿ ತಾಲೂಕಿನ ಫಲಾನಭವಿಗಳ ಸಂಖ್ಯೆ ಎಷ್ಟು..? ಅಂತಾ ಕೇಳಿದ್ರು. ಪ್ರತಿ ತಿಂಗಳು ತಾಲೂಕಿನ ಫಲಾನುಭವಿಗಳಿಗೆ ಎಷ್ಟು ಹಣ ಆಗುತ್ತದೆ ಎಂದು ಸಿಡಿಪಿಒ ಅವರಿಗೆ ಕೇಳಿದಾಗ ಅವರು ಆ ಬಗ್ಗೆ ಕೆಲವು ಸ್ಪಷ್ಟನೆ ನೀಡಲು ಮುಂದಾದ್ರು, ಹೀಗಾಗಿ, ಪ್ರತ್ಯುತ್ತರ ನೀಡಲು ಮುಂದಾದ ಅಧಿಕಾರಿಣಿಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಚುನಾವಣೆ ಪೂರ್ವದಲ್ಲಿ ಜನರಿಗೆ ಆಶ್ವಾಸನೆ ನೀಡಿದ್ದೇವೆ ಅದರಂತೆ ನಾಲ್ಕು ತಿಂಗಳದಿಂದ ಮುಖ್ಯಮಂತ್ರಿಗಳು ಮತ್ತು ನಾವುಗಳು ಕಷ್ಟಪಟ್ಟು ಐದು ಗ್ಯಾರಂಟಿಗಳನ್ನು ಅನುಷ್ಟಾನಕ್ಕೆ ತಂದಿದ್ದೇವೆ. ಇದು ಕಟ್ಟಕಡೆಯ ಫಲಾನುಭವಿಗಳಿಗೆ ಮುಟ್ಟಬೇಕು. ಬಡವರ ತೆರಿಗೆಯಿಂದ ನಾನು ನೀವು ಸೇರಿ ಜೀವನ ನಡೆಸುತ್ತೀದ್ದೇವೆ. ಗೃಹಲಕ್ಷ್ಮೀ ಯೋಜನೆಯಲ್ಲಿ ಬಾಕಿ ಇರುವ 1435 ಫಲಾನುಭವಿಗಳಿಗೆ ಒಂದು ತಿಂಗಳೊಳಗೆ ಸಿಗುವಂತಾಗಬೇಕು ಅಂತಾ ಖಡಕ್ ಸೂಚನೆ ನೀಡಿದ್ರು,

ಬಾಡಿಗೆ ರೂಂ ಬೇಡ..!
ಇನ್ನು ಅಂಗನವಾಡಿ ಕೇಂದ್ರಗಳು ಬಾಡಿಗೆಯಲ್ಲಿ ನಡೆಯಬಾರದು ಸುಸಜ್ಜಿತ ಇಲಾಖೆಯ ಸ್ವಂತ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಯಬೇಕು. ಬಾಡಿಗೆಯಲ್ಲಿ ನಡೆಯುತ್ತಿರವ ಅಂಗನವಾಡಿ ಕೇಂದ್ರದ ಜಾಗೆಯನ್ನು ಖರೀದಿ ಮಾಡಬೇಕು. ನಾನು ಹಣ ನೀಡುತ್ತೇನೆ. ಅಂತಹ ಕೇಂದ್ರವನ್ನು ಪಟ್ಟಿಮಾಡಿ ಜಾಗ ಖರೀದಿ ಮಾಡಿ ಇಲ್ಲದಿದ್ದರೇ ಆ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯ ಮೇಲೆ ಕ್ರಮ ಕೈಗೊಳ್ಳುತ್ತೇನೆ. ಜಿಲ್ಲೆಯಲ್ಲಿಯೇ ಅಂಗನವಾಡಿ ಕೇಂದ್ರ ಬಾಡಿಗೆಯಲ್ಲಿ ನಡೆಯಬಾರದು ಎಂದು ಸೂಚಿಸಿದರು.

ನೀರಿನ ಅಭಾವದ ಎಚ್ಚರಿಕೆ..!
ಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ನೊಡಿಕೊಳ್ಳಬೇಕು. ನೀರಿನ ಕೊರತೆಯಾದರೆ ಖಾಸಗಿ ಬೊರವೇಲ್, ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿ. ಯಾವುದೇ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮವಹಿಸಬೇಕೆಂದು ತಹಶೀಲ್ದಾರರಿಗೆ ಸೂಚಿಸಿದರು. ಅಧಿಕಾರಿಗಳು 450 ರೈತರಿಗೆ ಬರಪರಿಹಾರ ಸಿಕ್ಕಿಲ್ಲ ಎಂಬ ಮಾಹಿತಿ ಹೇಳುತ್ತಿದ್ದಂತೆ ಸಚಿವರು ಗರಂ ಆಗಿ ತಕ್ಷಣವೇ ಆ ರೈತರಿಗೆ ಪರಿಹಾರದ ಹಣ ದೊರಕಬೇಕು. ನಮ್ಮ ಸರಕಾರ ರೈತರ ಪರವಾಗಿದೆ. ರೈತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಕೃಷಿ ಮತ್ತು ತೋಟಗಾರಿಗೆ ಇಲಾಖೆಯ ಅಧಿಕಾರಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಒಂದು ತಿಂಗಳಿನಲ್ಲಿ ಸಮಸ್ಯೆ ಪರಿಹರಿಸುವಂತೆ ಸಚಿವರು ಸೂಚಿಸಿದರು.

ಅಧಿಕಾರಿಗಳೇ ಹಾರಿಕೆ ಉತ್ತರ ನಡಿಯಲ್ಲ..!
ಇನ್ನು ಸಭೆಯಲ್ಲಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಸಚಿವ ಮಂಕಾಳು ವೈದ್ಯ, ಹಾರಿಕೆಯ ಉತ್ತರ ನನ್ನ ಮುಂದೆ ನಡೆಯುವುದಿಲ್ಲ ಎಂದು ಎಚ್ಚರಿಸಿದರು. ತಾಲೂಕಿನ ಪ್ರತಿಯೊಂದು ಮನೆಗಳಲ್ಲಿ ವಿದ್ಯುತ ಇರಬೇಕು. ನನ್ನ ಜೀವನದಲ್ಲಿ ವಿದ್ಯುತ ಇಲ್ಲದೆ ಚುಮಣಿಯಲ್ಲಿ ಓದಿ ಈ ಮಟ್ಟಕ್ಕೆ ಬಂದಿದ್ದೇನೆ ಆ ನೋವು ನನಗೆ ಗೊತ್ತಿದೆ. ಹೀಗಾಗಿ ತಾಲೂಕಿನ 260 ಮನೆಗಳಿಗೆ ವಿದ್ಯುತ್ ಒದಗಿಸಲು ಅಧಿಕಾರಿಗಳು ಕ್ರಮವಹಿಸಿ ಎಂದರು.

ಬಸ್ ತೊಂದರೆ ನೀಗಿಸಿ..!
ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಬಸ್ಸಿನ ತೊಂದರೆ ಆಗಬಾರದು ಮತ್ತು ಕಾಲೇಜ ನಿಲ್ದಾಣ ಇಲ್ಲವೇ ವಿದ್ಯಾರ್ಥಿಗಳು ನಿಲ್ಲುವ ಸ್ಥಳದಲ್ಲಿ ಬಸ್‌ಗಳು ನಿಲ್ಲಿಸಬೇಕು. ಈ ಬಗ್ಗೆ ವಿದ್ಯಾರ್ಥಿಗಳು ಏನಾದರು ದೂರು ನೀಡಿದರೆ ಯಾವುದೇ ಬಸ್ ಚಾಲಕನಾಗಿರಲಿ ಆತನ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಈ ಬಗ್ಗೆ ಬಸ್ ಚಾಲಕ ನಿರ್ವಾಹಕರಿಗೆ ತಿಳಿಸುವಂತೆ ಡಿಪೋ ವ್ಯವಸ್ಥಾಪಕರಿಗೆ ಸೂಚಿಸಿದರು. ವಿವಿಧ ಇಲಾಖೆಯ ಪ್ರಗತಿಯನ್ನು ಪರಿಶೀಲಿಸಿ ಮಾಹಿತಿ ಪಡೆದರು.

ಸಭೆಯಲ್ಲಿ ತಹಶೀಲ್ದಾರ ಶಂಕರ್ ಗೌಡಿ, ತಾ.ಪಂ ಇಒ ಟಿ,ವೈ ದಾಸನಕೊಪ್ಪ, ಮಾಜಿ ಶಾಸಕ ವಿ.ಎಸ್ ಪಾಟೀಲ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಮುಖಂಡರು ಇದ್ದರು.

error: Content is protected !!