ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪತ್ರಕರ್ತರಿಂದ ಮುಖ್ಯಮಂತ್ರಿಗೆ ರಕ್ತ ‘ಸಹಿ’ತ ಮನವಿ..!

ಕಾರವಾರ : ಜೀವದ ಹಂಗು ತೊರೆದು ಹಗಲು, ರಾತ್ರಿ ಸಮಾಜದ ಒಳಿತಿಗೋಸ್ಕರ ದುಡಿಯುತ್ತಿರುವ ಪತ್ರಕರ್ತ ಸಮೂಹಕ್ಕೆ ಸರ್ಕಾರ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಅವರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆಯ ಉ. ಕ. ಜಿಲ್ಲಾಧ್ಯಕ್ಷ ಸದಾನಂದ ದೇಶಭಂಡಾರಿ ನೇತೃತ್ವದಲ್ಲಿ ಮುಖ್ಯಮಂತ್ರಿ ಅವರಿಗೆ ತಲುಪಿಸುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಸ್ವಾತಂತ್ರ್ಯ ದೊರೆತು 77 ವರ್ಷ ಕಳೆದಿವೆ. ಈಗಾಗಲೇ ನಮ್ಮ ರಾಜ್ಯದಲ್ಲಿ ಸರ್ಕಾರ ಹಾಗೂ ಸಮಾಜದ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ 90 ಶೇಕಡಾ ಪತ್ರಕರ್ತರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಪ್ರತಿ ದಿನ ಹಗಲು-ರಾತ್ರಿ ಎನ್ನದೆ ಸಮಾಜಮುಖಿ ಚಿಂತನೆಗಳ ಮೂಲಕ ಸಮಾಜದ ಒಳಿತಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಪ್ರಾಣದ ಹಂಗನ್ನು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಸಹಸ್ರಾರು ಪತ್ರಕರ್ತರ ಬದುಕು ಇಂದು ಭಾಗಶಃ ಶೋಚನೀಯ ಸ್ಥಿತಿಯಲ್ಲಿದೆ. ಈ ನಡುವೆ ಕೆಲ ಆಯ್ದ ಪತ್ರಕರ್ತರಿಗೆ ಮಾತ್ರ ಸರ್ಕಾರದ ಸವಲತ್ತುಗಳು ಲಭ್ಯವಾಗುತ್ತಿದ್ದು, ಇನ್ನುಳಿದ 90 ಶೇಕಡಾ ಪತ್ರಕರ್ತರಿಗೆ ಸರ್ಕಾರದ ಸವಲತ್ತುಗಳು ಮರೀಚಿಕೆಯಾಗಿಯೇ ಉಳಿದಿದೆ. ಇಂತಹ ಪತ್ರಕರ್ತರು ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಡಬೇಕಾದ ದಯನೀಯ ಸ್ಥಿತಿಯಲ್ಲಿದ್ದಾರೆ. ಮುಖ್ಯವಾಗಿ ಕಾರ್ಮಿಕ ಇಲಾಖೆಯ ಮೂಲಕ ನೊಂದ ಪತ್ರಕರ್ತರನ್ನು ಗುರುತಿಸಿ ಅವರಿಗೆ ಸರ್ಕಾರದ ಸೌಲಭ್ಯಗಳು ದೊರೆಯುವಂತಾಗಬೇಕು.

ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ 800 ಪತ್ರಿಕೆಗಳು ಇದುವರೆಗೂ ಕಾರ್ಮಿಕ ಇಲಾಖೆಯಡಿಗೆ ಒಳಪಡದೆ ನೊಂದಣಿಯಾಗದೇ ಆಯಾ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸುತ್ತಿರುವ (ವರದಿಗಾರರಿಗೆ) ಕಾರ್ಮಿಕರಿಗೆ ಇ.ಎಸ್.ಐ, ಪಿ. ಎಫ್, ಪೇ ಸ್ಲಿಫ್, ವಾರದ ರಜೆ, ಮೀಡಿಯಾ ಕಿಟ್ ಹಾಗೂ ಇನ್ನಿತರ ಸೌಲಭ್ಯಗಳಿಂದ ಇಂದಿನವರೆಗೂ ವಂಚಿತರಾಗಿರುವುದಕ್ಕೆ ಸರ್ಕಾರದ ಮೃದು ದೊರಣೆಯೇ ಕಾರಣ. ಮುಂದಾದರೂ ಸರ್ಕಾರ ಎಚ್ಚುತ್ತುಕೊಂಡು ಪತ್ರಿಕೆ ನಡೆಸುವ ಬಂಡವಾಳಶಾಹಿಗಳ ಮೇಲೆ ಕಠಿಣ ನಿಲುವನ್ನು ತಾಳಿ ಕಾರ್ಮಿಕ ಇಲಾಖೆಗೆ ನೊಂದಣಿಯಾಗುವಂತೆ ಕ್ರಮಕೈಗೊಂಡರೆ ನಾಡಿನ10 ಸಾವಿರ ಮೇಲ್ಪಟ್ಟು ವರದಿಗಾರರ ಜೀವನ ಹಸನಾಗುವುದರ ಜೊತಗೆ ಪ್ರತಿಯೊಬ್ಬ ವರದಿಗಾರನ ಕುಟುಂಬದಲ್ಲಿ ಮಂದಹಾಸ ಬೀರುವಂತಾಗಬೇಕು.

ಪತ್ರಕರ್ತರು ಅನೇಕ ವರ್ಷಗಳಿಂದ ಸಾರ್ವಜನಿಕರಿಗಾಗಿ ಸೇವೆ ಒದಗಿಸಲು ಉಚಿತ ಬಸ್- ಪಾಸ್‍ಗಾಗಿ ಹೋರಾಟ ನಡಸುತ್ತಾ ಬಂದಿದ್ದರೂ, ಸರ್ಕಾರ ಪತ್ರಕರ್ತರ ಬಗ್ಗೆ ಉದಾಸೀನತೆ ತೋರುತ್ತಿರುವ ಔಚಿತ್ಯವೇನು? ಕೇವಲ ಹತ್ತು ಸಾವಿರ ಮೇಲ್ಪಟ್ಟಿರುವ ಪತ್ರಕರ್ತರ ಬಗ್ಗೆ ತಮಗ್ಯಾಕೆ ಉದಾಸೀನ ಎಂಬ ಪ್ರಶ್ನೆ ಪ್ರತಿಯೊಬ್ಬ ನಾಡಿನ ಪತ್ರಕರ್ತರನ್ನೂ ಕಾಡುತ್ತಿದೆ. ಇನ್ನು ವಾರ್ತಾ ಇಲಾಖೆಯಂತೂ ಅಕ್ರಿಡೇಷನ್ ನೆಪದಲ್ಲಿ ತಾರತಮ್ಯ ಮಾಡುತ್ತ ಬಂಡವಾಳ ಶಾಹಿಗಳಿಗೆ ಮಣೆ ಹಾಕಿ ಮಾಲಿಕರಿಗೆ, ಅವರ ಹೆಂಡತಿಗೆ, ಮಕ್ಕಳಿಗೆ ಹಾಗೂ ಅಳಿಯಂದಿರಿಗೆ ಮೀಸಲಾಗಿರುವ ಅಕ್ರಿಡೇಷಿನ್ ಕಾರ್ಡ್‍ಗಳು, ಕೇವಲ 400 ಜನ ವರದಿಗಾರರಿಗೆ ಮಾತ್ರ ಮಾಧ್ಯಮ ಮಾನ್ಯತಾ ಕಾರ್ಡ್ ದೊರೆತಿದೆ. ಮಾನ್ಯತೆಯಲ್ಲಿ ಖಾಯಂ ನೇಮಕಾತಿ ಆದೇಶ ಹೊಂದಿ ಪೂರ್ಣಾವಧಿಯಾಗಿ ಕಾರ್ಯ ನಿರ್ವಹಿಸುವ ಪತ್ರಕರ್ತರಿಗೆ ಮಾತ್ರ ಅಂತ ನಿಯಮವಿದ್ದರೂ ಈ ನಿಯಮವನ್ನು ಪ್ರಸ್ತುತ ಗಾಳಿಗೆ ತೂರಿ ಖಾಯಂ ನೇಮಕಾತಿ ಆದೇಶ ವಿಲ್ಲದಂತವರಿಗೆ ಅಕ್ರಿಡೇಷನ್ ಒದಗಿಸಿರುವುದು ಅಕ್ಷಮ್ಯ ಅಪರಾಧ. ಖಾಯಂ ನೇಮಕಾತಿ ಆದೇಶ ನೀಡದೆ ವಂಚಿಸುವ ಬಂಡವಾಳಶಾಹಿಗಳು ಮುಂದಿನ ಮಾಸಾಶನಕ್ಕೂ ಇದು ಪತ್ರಕರ್ತರಿಗೆ ಮಾರಕವಾಗಿದ್ದರಿಂದ ಇಂದು ಕೇವಲ 178 ಜನ ಪತ್ರಕರ್ತರು ಮಾತ್ರ ಮಾಸಾಶನ ಪಡೆಯುತ್ತಿದ್ದಾರೆ.

ಸರ್ಕಾರದ ಕೈಗನ್ನಡಿಯಾಗಿರುವ ಪತ್ರಕರ್ತರ ನಾಡಿ ಮಿಡಿತ ಹಾಗೂ ಸಂಕಷ್ಟಗಳನ್ನು ಅರಿಯದೆ ಕೇವಲ ಬಂಡವಾಳಶಾಹಿಗಳ ಪರ ಸಾಗುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂಬ ಯಕ್ಷ ಪ್ರಶ್ನೆಯೊಂದಿಗೆ ಈಗಲಾದರು ನಾಡಿನ ದೊರೆಯಾದ ತಾವುಗಳು ಎಚ್ಚೆತ್ತುಕೊಂಡು ಪತ್ರಕರ್ತರ ಬಗ್ಗೆ ಹಾಗೂ ಅವರ ಸಂಕಷ್ಟಗಳಿಗೆ ಆಸರೆಯಾಗಿ ಕಾನೂನು ಚೌಕಟ್ಟಿನಲ್ಲಿ ನ್ಯಾಯ ಒದಗಿಸುತ್ತೀರಿ ಎಂಬ ನಂಬಿಕೆ ನಾಡಿನ ಪತ್ರಕರ್ತರ ವಲಯದಲ್ಲಿ ಮೂಡಿದೆ.

*ಪತ್ರಕರ್ತರ ಪ್ರಮುಖ ಬೇಡಿಕೆಗಳು*

1. ಸರ್ಕಾರ ಹಾಗೂ ಸಾರ್ವಜನಿಕರ ಮಧ್ಯ ಸಂಪರ್ಕ ಸೇತುವೆಯಾಗಿ ಪ್ರಾಣದ ಹಂಗನ್ನು ತೊರೆದು ನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ಪತ್ರಕರ್ತರಿಗೆ ಸರ್ಕಾರ ಪತ್ರಕರ್ತರ ರಕ್ಷಣಾ ಕಾಯ್ದೆ ಶೀಘ್ರ ಜಾರಿಗೊಳಿಸಬೇಕು.

2. ವಾರ್ತಾ ಇಲಾಖೆಯಲ್ಲಿ ಖಾಲಿ ಇರುವ 300ಕ್ಕೂ ಅಧಿಕ ಸಿಬ್ಬಂದಿಯವರನ್ನು ಸರ್ಕಾರ ಕೂಡಲೇ ನೇಮಕಗೊಳಿಸಿ ಪತ್ರಕರ್ತರ ಕಾರ್ಯಗಳನ್ನು ತ್ವರಿತವಾಗಿ ಆಗುವಂತೆ ಕ್ರಮ ವಹಿಸಬೇಕು.

3. ಅಕ್ರಿಡೇಟ್ ಹಾಗೂ ನಾನ್‍ಅಕ್ರಿಡೇಟ್‍ ಜರ್ನಲಿಸ್ಟ್ ಎನ್ನುವ ತಾರತಮ್ಯವನ್ನು ಸರ್ಕಾರ ಈ ಕೂಡಲೇ ಕೈ ಬಿಡಬೇಕು. ಸರ್ಕಾರ ವಾರ್ತಾ ಇಲಾಖೆ ಮೂಲಕ ಕೆ.ಎಸ್.ಆರ್.ಟಿ.ಸಿ. ನಿಗಮದಿಂದ ಅಕ್ರಿಡೇಟ್‍ ಜರ್ನಲಿಸ್ಟಗಳಿಗೆ ಮಾತ್ರ ಉಚಿತ ಬಸ್ ಪಾಸ್‍ ರಾಜ್ಯಾದ್ಯಂತ ಓಡಾಡಲು ಅವಕಾಶ ಕಲ್ಪಿಸಿಕೊಟ್ಟರೆ ಅದೇ ರೀತಿ ನಾನ್- ಅಕ್ರಿಡೇಟ್‍ ಜರ್ನಲಿಸ್ಟಗಳಿಗೆ (ಅಂದರೆ ಆರ್.ಎನ್.ಐ. ಹೊಂದಿರುವಂತ ಪತ್ರಕರ್ತರಿಗೆ) ಬಿ.ಎಂ.ಟಿ.ಸಿ. ಕಾರ್ಪೋರೇಷನ್ ವತಿಯಿಂದ ವರ್ಷಕ್ಕೆ 600 ರೂಪಾಯಿಗಳನ್ನು ಪಾವತಿಸಿದರೆ ವರ್ಷ ಪೂರ್ತಿ ಬಿ.ಎಂ.ಟಿ.ಸಿ.ಯಲ್ಲಿ ಪತ್ರಕರ್ತರಿಗೆ ಓಡಾಡಲು ಅವಕಾಶ ಕಲ್ಪಿಸಿದ್ದು ತಾರತಮ್ಯಕ್ಕೊಂದು ಸ್ಪಷ್ಟ ಪುರಾವೆಯಂತಿದೆ. ಈ ರೀತಿಯಾಗಿ ಸರ್ಕಾರ ಅಕ್ರಿಡೇಟ್ ಹಾಗೂ ನಾನ್‍ ಅಕ್ರಿಡೇಟ್‍ ಎಂಬ ತಾರತಮ್ಯ ಪತ್ರಕರ್ತರಲ್ಲಿ ಮೂಡಿಸಿರುವುದು ಕಾನೂನು ಬಾಹಿರವಾಗಿರುವ ಹಿನ್ನೆಲೆಯಲ್ಲಿ ಇದನ್ನು ಕೂಡಲೇ ಸರಿಪಡಿಸಬೇಕು.

4. ಇನ್ನು ಸಂಕಷ್ಟದಲ್ಲಿರುವ ಪತ್ರಕರ್ತರ ಮಾಸಾಶನ ನಿಯಮ 7ರಲ್ಲಿ ವಾರ, ಪಾಕ್ಷಿಕ, ಮಾಸಿಕ ಹಾಗೂ ಇನ್ನಿತರ ಪತ್ರಿಕೆಗಳ ಪ್ರತಿನಿಧಿಗಳು ಮಾಸಾಶನ ಪಡೆಯಲು ಅರ್ಹತೆ ಹೊಂದಿರುವುದಿಲ್ಲವೆಂದು ಸ್ಪಷ್ಟವಾಗಿ ನಿಬಂಧನೆ ಹೊರಡಿಸಿರುವುದು ಕೂಡ ಕಾನೂನು ಬಾಹಿರ. ದಿನ ಪತ್ರಿಕೆಗಳ ರೀತಿಯಲ್ಲೇ ನಿಯತಕಾಲಿಕೆಗಳು ಕೂಡ `ರೆಜಿಸ್ಟ್ರಾರ್‍ ಆಫ್ ನ್ಯೂಸ್ ಪೇಪರ್‍ ಇಂಡಿಯಾ’ ವತಿಯಿಂದ ಪರವಾನಿಗೆ ಹೊಂದಿ ಪತ್ರಿಕೆಗಳನ್ನು ಹೊರತರುವ ಹಿನ್ನೆಲೆಯಲ್ಲಿ ಈ ಪತ್ರಕರ್ತರಿಗೂ ಮಾಸಾಶನ ದೊರೆಯಲೇಬೇಕು.

5. ಜಿಲ್ಲಾ ವ್ಯಾಪ್ತಿಯಲ್ಲಿರುವ ಪತ್ರಿಕಾ ಭವನಗಳನ್ನು ಯಾವೊಂದು ಪತ್ರಿಕಾ ಸಂಘಟನೆಗಳಿಗೆ ನೀಡದೆ ಆಯಾ ಜಿಲ್ಲಾಧಿಕಾರಿಗಳ ಸುಪರ್ಧಿಯಲ್ಲಿ ವಾರ್ತಾ ಇಲಾಖೆಯ ಅಧಿಕಾರಿಗಳ ಮೂಲಕ ನಿರ್ವಹಣೆಗೆ ಆದೇಶಿಸಬೇಕು.

6. ನಾಡಿನ ಪತ್ರಕರ್ತರ ಹಿತಕ್ಕಾಗಿ ಪತ್ರಕರ್ತರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು.

7. ಪತ್ರಕರ್ತರು ಕರ್ತವ್ಯ ನಿರ್ವಹಿಸುವಾಗ ಸಹಜ ಸಾವು ಹಾಗೂ ಅಪಘಾತದಿಂದ ಮೃತಪಟ್ಟರೆ ಆ ಪತ್ರಕರ್ತರ ಕುಟಂಬಕ್ಕೆ ಸರ್ಕಾರದಿಂದ 10 ಲಕ್ಷ ರೂಪಾಯಿಗಳ ಪರಿಹಾರ ಒದಗಿಸಬೇಕು.

8. 2018-19ರ ಆಯವ್ಯಯದಲ್ಲಿ ದಿನಪತ್ರಿಕೆ ಹಂಚುವವರ (ಪತ್ರಿಕಾ ವಿತರಕರು) ಕ್ಷೇಮಾಭಿವೃದ್ಧಿಗೆ 2 ಕೋಟಿಯ ಕ್ಷೇಮ ನಿಧಿ ಅಂದಿನ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಘೋಷಣೆಯಾಗಿದ್ದರೂ ಹೇಳಿಕೆಗೆ ಮಾತ್ರ ಸೀಮಿತವಾದ ಈ ನಿಧಿಯನ್ನು ಕೂಡಲೇ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿಯ ಖಾತೆಗೆ ಸರ್ಕಾರ ಜಮಾವಣೆ ಮಾಡಬೇಕು.

ನಮ್ಮ ಭೇಡಿಕೆಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದಲ್ಲಿ ಕಾನೂನು ಹೋರಾಟ ಅನಿವಾರ್ಯ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕಾರ್ಯ ನಿರತ ಪತ್ರಕರ್ತರ ದ್ವನಿ ಸಂಘಟನೆಯ ಜಿಲ್ಲಾದ್ಯಕ್ಸ ಸದಾನಂದ ದೇಶಭಂಡಾರಿ, ಕಾ. ನಿ. ಪ. ದ್ವನಿ ಹಳಿಯಾಳ ತಾಲೂಕಾದ್ಯಕ್ಷ ಯೋಗರಾಜ್ ಎಸ್. ಕೆ, ಕುಮಟಾ ತಾಲೂಕಾಧ್ಯಕ್ಸ ನೀಲಕಂಠ ಭಲೆಗಾರ, ಸದಸ್ಯರಾದ ಉದಯ ಭಟ್, ವಿಶ್ವನಾಥ ನಾಯ್ಕ, ಸಂಜು ಕೊಳೋರು, ಶಿವಾನಂದ ಜಿವೋಜಿ ಇನ್ನಿತರರು ಇದ್ದರು.

error: Content is protected !!