ಸೆ.17 ರಂದು ಹಲ್ಲೆಗೊಳಗಾಗಿದ್ದ ನ್ಯಾಸರ್ಗಿಯ ದಲಿತ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು..! ಬೀದಿಯಲ್ಲಿ ನಡೆದ ಜಗಳ ಸಾವಿನಲ್ಲಿ ಅಂತ್ಯವಾಯ್ತಾ..?

ಮುಂಡಗೋಡ ತಾಲೂಕಿನ ನ್ಯಾಸರ್ಗಿಯಲ್ಲಿ ಮಾರಣಾಂತಿಕ ಹಲ್ಲೆಗೆ ಒಳಗಾಗಿ ಆಸ್ಪತ್ರೆಯಲ್ಲಿದ್ದ ವ್ಯಕ್ತಿ ಸಾವು ಕಂಡಿದ್ದಾನೆ. ಕಳೆದ ಸೆಪ್ಟೆಂಬರ್ 17 ರ ರಾತ್ರಿ ನಡೆದಿದ್ದ ಹಲ್ಲೆ ಪ್ರಕರಣ ಈಗ ಸಾವಿನಲ್ಲಿ ದಿಕ್ಕು ಬದಲಿಸಿದೆ. ಹಲ್ಲೆ ನಡೆದು 13 ದಿನಗಳ ನಂತರ ಮೃತಪಟ್ಟಿದ್ದಾನೆ.

ನ್ಯಾಸರ್ಗಿಯ ಮಂಜುನಾಥ ದುರ್ಗಪ್ಪ ಬೋವಿ(57) ಎಂಬುವವನೇ ಸದ್ಯ ಸಾವನ್ನಪ್ಪಿದ ವ್ಯಕ್ತಿಯಾಗಿದ್ದು, ಕಳೆದ ಸೆಪ್ಟೆಂಬರ್ 17 ರಂದು ರಾತ್ರಿ 8 ಗಂಟೆಯ ಸುಮಾರಿಗೆ ನ್ಯಾಸರ್ಗಿ ಗ್ರಾಮದ ಸರ್ಕಾರಿ ಶಾಲೆಯ ಪಕ್ಕದ ರಸ್ತೆಯಲ್ಲಿ ಹನುಮಂತ ಭೀಮಣ್ಣ ಹರಪನಹಳ್ಳಿ ಹಾಗೂ ಮೃತ ಮಂಜುನಾಥ್ ನಡುವೆ ಮಾತಿಗೆ ಮಾತು ಬೆಳೆದು ಜಗಳ ಪ್ರಾರಂಭವಾಗಿ, ಗಲಾಟೆಯಾಗಿತ್ತು. ಈ ವೇಳೆ ಹನುಮಂತ ಹರಪನಹಳ್ಳಿ ಈತನು ಮಂಜುನಾಥ್ ಮೇಲೆ ಜಾತಿ ನಿಂದನೆ ಮಾಡಿದ್ದೂ ಅಲ್ಲದೇ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಅಂತಾ ಗಾಯಾಳು ಮಂಜುನಾಥ ಬೋವಿವಡ್ಡರ್ ಪುತ್ರ ಮುಂಡಗೋಡ ಠಾಣೆಗೆ ದೂರು ನೀಡಿದ್ದ.

ಹೀಗಾಗಿ, ಪ್ರಕರಣ ದಾಖಲಿಸಿಕೊಂಡಿದ್ದ ಮುಂಡಗೋಡ ಪೊಲೀಸರು ಜಾತಿನಿಂದನೆ ಸೇರಿದಂತೆ ಹಲ್ಲೆ ಪ್ರಕರಣದಡಿ ಆರೋಪಿ ಹನುಮಂತ ಹರಪನಳ್ಳಿ ಎಂಬುವವನನ್ನು ಬಂಧಿಸಿದ್ದರು‌. ಆದ್ರೆ ಇದೀಗ ಹಲ್ಲೆಗೊಳಗಾದ ಮಂಜುನಾಥ್ ಬೋವಿವಡ್ಡರ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಸದ್ಯ, ಹಲ್ಲೆಗೊಳಗಾಗಿದ್ದ ಮಂಜುನಾಥ್ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮುಂಡಗೋಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

error: Content is protected !!