ಯಲ್ಲಾಪುರ ಕ್ಷೇತ್ರದಲ್ಲಿ ಪಕ್ಷಾಂತರದ ರೂಮರ್ರು.. ಅಷ್ಟಕ್ಕೂ, ಹೆಬ್ಬಾರ್ ಸಾಹೇಬ್ರು ಮತ್ತೆ “ಘರ್ ವಾಪಸಿ” ಅಗ್ತಾರಾ..? ಏನಿದೆ ಲೆಕ್ಕಾಚಾರ..?

ಯಲ್ಲಾಪುರ ವಿಧಾನಸಭಾ ಕ್ಷೇತ್ರ ಮತ್ತೊಮ್ಮೆ ರಾಜ್ಯಮಟ್ಟದಲ್ಲಿ ಸುದ್ದಿಯಾಗ್ತಿದೆಯಾ..? ರಾಜ್ಯ ರಾಜಕಾರಣದಲ್ಲಿ ಸದ್ಯ ಯಲ್ಲಾಪುರ ಕ್ಷೇತ್ರವನ್ನು ಬಹುಶಃ ಓರೇಗಣ್ಣಿನಿಂದ ನೋಡುವಂತಹ ಊಹಾಪೋಹಗಳು ಜಾರಿಯಲ್ಲಿವೆ. ಯಾಕಂದ್ರೆ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ವಲಸಿಗರ ಟೀಂ ನಲ್ಲಿ ಕೆಲವರು ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗೋದು ಪಕ್ಕಾ ಎನ್ನುವಂತಹ ಮಾತುಗಳು ಕೇಳಿ ಬರ್ತಿವೆ. ಅದ್ರಲ್ಲೂ ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕರೂ ಕಾಂಗ್ರೆಸ್ ಗೆ ಸೇರ್ತಾರೆ ಅನ್ನೋ ಸುದ್ದಿಗಳು ಹರಿದಾಡ್ತಿದೆ. ಆದ್ರೆ, ಇದೇಲ್ಲ ಜಸ್ಟ್ ರೂಮರ್ರು ಅಂತಾ ಶಾಸಕರ ಆಪ್ತ ವಲಯ ಸರಾಸಗಾಟಾಗಿ ತಳ್ಳಿ ಹಾಕ್ತಿದೆ.

ನಿಜಕ್ಕೂ ಸಾಧ್ಯವಾ..?
ಅಸಲು, ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿಯನ್ನು ಸದ್ಯ ಪ್ರಬಲವಾಗಿಯೇ ಮುನ್ನಡೆಸ್ತಿರೋ ಶಾಸಕ ಶಿವರಾಮ್ ಹೆಬ್ಬಾರ್, ಇಂತಹದ್ದೊಂದು ಪಕ್ಷಾಂತರದ ತೀರ್ಮಾನ ಕೈಗೊಳ್ಳೊಕೆ ಸಾಧ್ಯವಾ..? ಇಂತಹ ಪ್ರಶ್ನೆಗಳು ಸಹಜವಾಗೇ ಕಾಡ್ತಿವೆ. ಇಡೀ ರಾಜ್ಯದಲ್ಲೇ ಕಾಂಗ್ರೆಸ್ ಗಾಳಿ ಬೀಸಿ, ಗೆಲ್ಲೋದೇ ಅನುಮಾನ ಅನ್ನೊ ವಾತಾವರಣ ಇದ್ದಾಗಲೇ ಗೆದ್ದು ಬಂದವರು ಹೆಬ್ಬಾರ್. ಕ್ಷೇತ್ರದಲ್ಲಿ ಅದೇಂತದ್ದೇ ವಾತಾವರಣ ಇದ್ರೂ ನಾನು ಗೆಲ್ಲೋದೇ ಫಿಕ್ಸು ಅಂತ ಎದೆ ತಟ್ಟಿ ಹೇಳುವ ಎದೆಗಾರಿಕೆ ಉಳಿಸಿಕೊಂಡವರು. ಅದ್ಯಾವುದೇ ಗೊಂದಲಗಳು ಇದ್ರೂ ಚಾಣಾಕ್ಷತೆಯಿಂದ ನಿಭಾಯಿಸಿಕೊಂಡು ಗೆಲುವಿನ ಹಾದಿಯನ್ನ ಕ್ಲಿಯರ್ ಮಾಡಿಕೊಂಡವರು. ಹೀಗಿದ್ದಾಗಲೂ ಮತ್ತೆ ಅಂತಹದ್ದೊಂದು ತೀರ್ಮಾನಕ್ಕೆ ಅಣಿಯಾಗ್ತಾರಾ..? ನೋ ಚಾನ್ಸ್ ಅಂತಿದೆ ಆಪ್ತ ಮೂಲ.

ಆದ್ರೂ ಏನಿದೆ ಲೆಕ್ಕಾಚಾರ..?
ಅಂದಹಾಗೆ, ಯಲ್ಲಾಪುರ ಕ್ಷೇತ್ರದಲ್ಲಿ ಒಂದರ್ಥದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಿಗೂ ಸಮಬಲದ ಹೋರಾಟ ಇದ್ದೇ ಇದೆ. ಇಲ್ಲಿ ಕಾಂಗ್ರೆಸ್ಸನ್ನ ಒಂದು ಹಂತದಲ್ಲಿ ಎತ್ತಿ ಹಿಡಿಯುವ ಪಾರಂಪರಿಕ ಮತಗಳಿವೆ. ಹಾಗಂತ, ಬಿಜೆಪಿಗೂ ಕಾಂಗ್ರೆಸ್ ಗೆ ಸಮನಾಗಿಯೇ ಕಣ್ಣು ಮುಚ್ಚಿ ಮತಹಾಕುವ ಮತದಾರರಿದ್ದಾರೆ. ಹೀಗಾಗಿ, ಇಲ್ಲಿ “ಗೆಲುವು” ಅನ್ನೋದು ಏನಿದ್ರೂ ವ್ಯಕ್ತಿಗತವಾಗಿಯೇ ಸ್ಪೋಟಿಸೋ ಅಚ್ಚರಿ. ಯಾರು ತಮ್ಮತನದಿಂದ ಮತದಾರನ “ಮನ” ಗೆದ್ದಿದ್ದಾರೋ ಅವ್ರೇ ಇಲ್ಲಿ ಗೆಲ್ಲುವುದು ಪಕ್ಕಾ. ಅದ್ಯಾವುದೇ ಪಕ್ಷ ಇರಲಿ, ಅದೇನೇ ತಿಪ್ಪರಲಾಗ ಹಾಕಿದ್ರೂ 5 ಸಾವಿರದ ಆಸು ಪಾಸಿನ ಅಂತರದಲ್ಲಿ ಗೆಲುವು ದಕ್ಕುವುದು ಇಲ್ಲಿನ ಪ್ರತಿಸಲದ ಲೆಕ್ಕ. ಆದ್ರೆ, ಕಳೆದ ಉಪಚುನಾವಣೆಯಲ್ಲಿ ಮಾತ್ರ ಶಿವರಾಮ್ ಹೆಬ್ಬಾರ್ 30 ಸಾವಿರದ ಗಡಿದಾಟಿದ ಅಂತರ ಪಡೆದು ಭರ್ಜರಿ ಗೆಲುವು ಸಾಧಿಸಿದ್ದು ಇತಿಹಾಸವಷ್ಟೆ. ಅವತ್ತಿನ ಆ ಗೆಲುವಿನ ಹಿಂದೆ ಸಾಕಷ್ಟು ಕಾರಣಗಳಿದ್ದವು ಅನ್ನೋದು ಬೇರೆ ಮಾತು. ಆದ್ರೆ, ಅದೇನೇ ಆದ್ರೂ ಯಲ್ಲಾಪುರ ಕ್ಷೇತ್ರದಲ್ಲಿ ವ್ಯಕ್ತಿಗತವಾದ ಪ್ರಾಬಲ್ಯದ ಗೆಲುವು ಆಗಿರತ್ತೆ ಅನ್ನೋದೇ ಸರ್ವಕಾಲಿಕ ಸತ್ಯ. ಮೊನ್ನೆಯಷ್ಟೇ ನಡೆದ ಚುನಾವಣೆಯಲ್ಲೂ ಅದು ಸಾಬೀತಾಗಿದೆ.

ಅದು ಹೆಬ್ಬಾರ್ ಗೆಲುವು..!
ಹಾಗೆ ನೋಡಿದ್ರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಲ್ಲಾಪುರ ಕ್ಷೇತ್ರದಲ್ಲಿ ಗೆದ್ದಿದ್ದು ಬಿಜೆಪಿ ಅನ್ನೋದಕ್ಕಿಂತ, ಶಿವರಾಮ್ ಹೆಬ್ಬಾರ್ ಅನ್ನೋದು ವಾಸ್ತವಿಕ ಸತ್ಯ. ಇಲ್ಲಿ, ಕಾಂಗ್ರೆಸ್ ಗೆದ್ದೇ ಬಿಡತ್ತೆ ಅಂತಾ ಪಟಾಕಿ ಸಿಡಿಸಲು ಸಜ್ಜಾಗಿದ್ದಾವಾಗಲೇ ಅಚ್ಚರಿ ಎಂಬಂತೆ ಹೆಬ್ಬಾರ್ ವಿಜಯದ ಪತಾಕೆ ಹಿಡಿದು ಎದ್ದು ಬಂದಿದ್ದರು. ಅಸಲು, ಶಿವರಾಮ್ ಹೆಬ್ಬಾರ್ ಗೆಲುವಿಗೆ ತೊಡಕಾಗಲೆಂದೇ ಖುದ್ದು ಬಿಜೆಪಿಯೊಳಗಿನ ಬಹುದೊಡ್ಡ ಬಳಗ ಒಳಗೊಳಗೇ ಕತ್ತಿ ಮಸೆದಿದ್ದು ಗುಟ್ಟಾಗಿ ಉಳಿದಿರಲಿಲ್ಲ. ಆದ್ರೆ, ಅದೇಷ್ಟೇ ಒಳ ಏಟುಗಳು ಬಿದ್ರೂ, ಅದೇಷ್ಟೇ ಒಳಸುಳಿಗಳು ಎದ್ದರೂ, ಶಿವರಾಮ್ ಹೆಬ್ಬಾರ್ ಗೆಲುವು ತಡೆಯಲು ಸಾಧ್ಯವಾಗಲೇ ಇಲ್ಲ. ಹೀಗಾಗಿ, ಇದೇಲ್ಲವನ್ನು ಒಳಗೊಳಗೇ ಅರ್ಥೈಸಿಕೊಂಡಿದ್ದ ಹೆಬ್ಬಾರರು ಗೆದ್ದ ನಂತರದ ಸಭೆಯಲ್ಲಿ “ವಿಷಕಂಠ” ನಂತೆ ಮಾತಾಡಿ ಘರ್ಜಿಸಿದ್ದರು. ಹೊರಗಿನ ವಿರೋಧಿಗಳನ್ನು ಎದುರಿಸೋಕಿಂತ ಒಳಗಿನವರ “ಕಲಹ” ತಣಿಸುವ ಸಲುವಾಗಿ ಒಂದಿಷ್ಟು ಮಾತಿನ ಮೊನಚು ಬಾಣ ಬಿಟ್ಟಿದ್ದರು.

ಬಿಜೆಪಿಯಲ್ಲಿ..!
ಅಸಲಿಗೆ, ಹೆಬ್ಬಾರ್ ಕಾಂಗ್ರೆಸ್ ತೊರೆದು ಬಿಜೆಪಿಯೊಳಗೆ ಹೆಜ್ಜೆ ಇಟ್ಟಾಗಿನಿಂದ, ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿಯೊಳಗೆ ತಣ್ಣಗಿನ ಪೀಕಲಾಟಗಳು ಶುರುವಾಗಿದ್ದವು. ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಬಿಜೆಪಿಯಿಂದ ಮತ್ತೆ ಉಪಚುನಾವಣೆ ಎದುರಿಸಿದ್ದ ಹೆಬ್ಬಾರರಿಗೆ ಬಹುಶಃ ಅವತ್ತು ಯಡಿಯೂರಪ್ಪನವರ ಕಟ್ಟಾಜ್ಞೆಗಳು ಭಾರೀ ಅಂತರದಿಂದ ಗೆಲ್ಲುವಂತೆ ಮಾಡಿದ್ದವು. ಅವತ್ತು, ಕ್ಷೇತ್ರದ ಇಡೀ ಕೇಸರಿ ಪಡೆ ಗಟ್ಟಿಯಾಗಿ ನಿಂತು ಹೆಬ್ಬಾರ್ ಗೆಲುವಿಗೆ ಶ್ರಮಿಸಿತ್ತು. ಹೆಬ್ಬಾರ್ ಭರ್ಜರಿ ಗೆಲುವು ಸಾಧಿಸಿದ್ದರು. ಜೊತೆಗೆ ಸಚಿವರೂ ಆದ್ರು. ಆ ನಂತರದಲ್ಲಿ ಕ್ಷೇತ್ರದ ಬಿಜೆಪಿಯಲ್ಲಿ ಮಾತ್ರ ಪರಿಸ್ಥಿತಿಗಳು ಬದಲಾಗುತ್ತ ಹೋದವು. ಮೂಲ, ವಲಸಿಗರ ನಡುವಿನ ತಿಕ್ಕಾಟಗಳು ಒಳಗೊಳಗೇ ಕುದಿಯತೊಡಗಿದ್ದವು. ನಿಜ ಅಂದ್ರೆ ಪಕ್ಷದೊಳಗಿನ ಆಂತರಿಕ ಕಲಹಗಳನ್ನ ನಿಭಾಯಿಸುವಲ್ಲಿ ಇಡೀ ಹೆಬ್ಬಾರ್ ಪಡೆಯೇ ಸುಸ್ತು ಹೊಡೆದಿತ್ತು. ಆದ್ರೂ, ಶಿವರಾಮ್ ಹೆಬ್ಬಾರರ ಚಾಣಾಕ್ಷತನದ ಹೆಜ್ಜೆಗಳು ಗೆಲುವಿನ ದಡ ಸೇರಿಸಿದ್ದವು. ಆದ್ರೆ, ಒಳಗೊಳಗಿನ ಕಲಹಗಳು ಅಷ್ಟಕ್ಕೆ “ತಾಮಣಿ” ಆಗಿದೆಯಾ..? ಬಹುಶಃ ಅಂತಹ ವಾತಾವರಣ ಸದ್ಯಕ್ಕೆ ಕಾಣುತ್ತಿಲ್ಲ.

ಗಟ್ಟಿಯಿದೆ ಕಾಂಗ್ರೆಸ್..!
ಇಲ್ಲಿ ಮತ್ತೊಂದು ಲೆಕ್ಕಾಚಾರವನ್ನು ವಿಶ್ಲೇಷಿಸಲೇ ಬೇಕು. ಇಡೀ ಯಲ್ಲಾಪುರ ಕ್ಷೇತ್ರದಲ್ಲಿ ಇವತ್ತಿಗೂ ಕಾಂಗ್ರೆಸ್ ಪಡೆ ಗಟ್ಟಿ ಮುಟ್ಟಾಗಿದೆ. ಕಳೆದ ಉಪಚುನಾವಣೆಯಲ್ಲಿ ಒಡೆದ ಮನೆಯಾಗಿದ್ದ ಕಾಂಗ್ರೆಸ್ ಗೆ ಅಭ್ಯರ್ಥಿಯಾಗಿದ್ದು ಶಿರಸಿಯ ಭೀಮಣ್ಣ ನಾಯ್ಕ್. ಹಾಗಿದ್ದರೂ ಅವತ್ತು ಕಾಂಗ್ರೆಸ್ 50 ಸಾವಿರ ಮತಗಳ ಆಸುಪಾಸಿನ ನಿಚ್ಚಳತೆ ಪಡೆದುಕೊಂಡಿತ್ತು. ಹೀಗಾಗಿ, ಈ ಕ್ಷೇತ್ರದಲ್ಲಿ ಅದೇನೇ ಸಂಭವಿಸಿದ್ರೂ ಕಾಂಗ್ರೆಸ್ ಗೆ ಬಿಜೆಪಿಗಿಂತ, ತನ್ನದೇ ಆದ ಪಕ್ಕಾ ಮತಗಳಿವೆ ಅನ್ನೋದು ಕನ್ಪರ್ಮ ಆಗಿತ್ತು. ಅದ್ರಲ್ಲೂ ಈಗಷ್ಟೇ ನಡೆದು ಹೋದ ವಿಧಾನಸಭಾ ಚುನಾವಣೆಯಲ್ಲಿ ವಿ.ಎಸ್. ಪಾಟೀಲರೂ ಕೂಡ ಸೋತಿದ್ದು ಹೇಳಿಕೊಳ್ಳುವ ಅಂತರದಲ್ಲಿ ಅಲ್ಲ. ಹೀಗಾಗಿ, ಮತ್ತೆ ಕ್ಷೇತ್ರದಲ್ಲಿ ಕಾಂಗ್ರೆಸ್ ಇನ್ನೂ ಗಟ್ಟಿಯಾಗಿದೆ ಅನ್ನೋ ಸಂದೇಶ ರವಾನೆಯಾಗಿದೆ. ಹೀಗಾಗಿ, ಬಹುಶಃ ಇದೇಲ್ಲವನ್ನೂ ಯೋಚಿಸಿ ಶಿವರಾಮ್ ಹೆಬ್ಬಾರರು ಮತ್ತೆ “ಘರ್ ವಾಪಸಿ”ಗೆ ತೀರ್ಮಾನಿದ್ರಾ..? ಗೊತ್ತಿಲ್ಲ.

ನಿಂತ ನೀರಲ್ಲ..!
ಹಾಗಂತ, ರಾಜಕಾರಣ ಅನ್ನೋದು ಯಾವತ್ತಿಗೂ ನಿಂತ ನೀರಾಗಲ್ಲ. ಅಲ್ಲಿ ಯಾವಾಗಲೂ ಹರಿವ ಝುಳು ಝುಳು, ಹೊಸತನದ ಅನ್ವೇಷಣೆಗಳು, ಹೊಸತನದ ಲೆಕ್ಕಾಚಾರಗಳು ಇದ್ದೇ ಇರತ್ತೆ. ಲಾಭ-ನಷ್ಟಗಳ ಲೆಕ್ಕಾಚಾರಗಳು ಒಂದೆಡೆಯಾದ್ರೆ, ರಾಜಕೀಯ ಭವಿಷ್ಯತ್ತಿಗಾಗಿ ಕೆಲ ತೀರ್ಮಾನಗಳೂ ಕೂಡ ಮಹತ್ವ ಪಡೆದಿರತ್ತೆ. ಇದೇಲ್ಲದರ ಹೊರತಾಗಿ ಅಧಿಕಾರ ಅನ್ನೋದೇ ಹಾಗೆ ಅಲ್ವಾ..? ಏನು ಬೇಕಾದ್ರೂ ನಡೀಬಹುದು.

*ಸಂತೋಷ ಶೆಟ್ಟೆಪ್ಪನವರ್

error: Content is protected !!