ಕಾತೂರಿನಿಂದ ಹಾನಗಲ್ ಅಡ್ಡೆಗೆ ಸಾಗಿಸಿದ್ದ ಕಟ್ಟಿಗೆ ಕೇಸ್ ತನಿಖೆ ಕತೆ ಏನಾಯ್ತು..? ಎಸಿಎಫ್ ಸಾಹೇಬ್ರು ಆ ” ಚಕ್ಕಂಬಕ್ಕಳ” ಫಾರೆಸ್ಟರ್ ನ ರಕ್ಷಣೆಗೆ ನಿಂತ್ರಾ..?

ಅಬ್ಬಬ್ಬಾ ಆ ಫಾರೆಸ್ಟರ್ ಅಂದ್ರೆ ಕಾತೂರು ಭಾಗದಲ್ಲಿ ಅದೇಂತದ್ದೋ ಅಂತೆ, ಕಂತೆ..! ಆತನ ಹಿಂದೆ ಸಿಕ್ಕಾಪಟ್ಟೆ ದೊಡ್ಡವರಿದ್ದಾರಂತೆ. ಹೀಗಾಗಿ, ಆತನ ಯಡವಟ್ಟುಗಳು, ದಂಧೆಗಳನ್ನೇಲ್ಲ ಕಣ್ಣಾರೆ ಕಂಡ್ರೂ ಏನೂ ಮಾಡದ ಸ್ಥಿತಿಯಲ್ಲಿ ಕುಳಿತಿದ್ದಾರಂತೆ ಮುಂಡಗೋಡಿನ ಎಸಿಎಫ್ ಸಾಹೇಬಾ..!

ಸಾಂದರ್ಭಿಕ ಚಿತ್ರ

ನಿಮಗೆ ನೆನಪಿರಬಹುದು, ಕಳೆದ 2022 ರ ಅಕ್ಟೋಬರ್ ತಿಂಗಳಲ್ಲೇ ನಿಮ್ಮ ಪಬ್ಲಿಕ್ ಫಸ್ಟ್ ನ್ಯೂಸ್ ಅದೊಂದು ಸುದ್ದಿ ಪ್ರಸಾರ ಮಾಡಿತ್ತು. ಮುಂಡಗೋಡ ತಾಲೂಕಿನ ಕಾತೂರು ಅರಣ್ಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸ್ತಿರೋ ಅವನೊಬ್ಬ ಅಧಿಕಾರಿಯಿಂದ ಹಾವೇರಿ ಜಿಲ್ಲೆಯ ಹಾನಗಲ್ಲಿನ ಅದೊಂದು ಕಟ್ಟಿಗೆ ಅಡ್ಡೆ ಅನಾಮತ್ತಾಗಿ ಸೀಜ್ ಆಗಿದ್ದ ಸಂಗತಿಯದು. ಅಂದಹಾಗೆ ಇದು ಇವತ್ತಿನ ಮಾತಲ್ಲ. ಸರಿಸುಮಾರು ಕಳೆದ ವರ್ಷದ ಎಪ್ರೀಲ್ ಕೊನೆಯ ವಾರದಲ್ಲಿ ನಡೆದಿದ್ದ ಘಟನೆ ಅದು.
ಘಟನೆ ನಡೆದು ಒಂದೂವರೇ ವರ್ಷವಾದ್ರೂ
ಘಟನೆ ಬಗ್ಗೆ ಯಾವೊಂದೂ ಕ್ರಮ ಕೈಗೊಳ್ಳದೇ ಇಡೀ ಕೇಸನ್ನೇ ಇಡಿ ಇಡಿಯಾಗಿ ತಿಪ್ಪೆ ಸಾರಿಸುವ ಹಂತದಲ್ಲಿದ್ದಾರೆ ಇಲ್ಲಿನ ಹಿರಿಯ ಅಧಿಕಾರಿಗಳು..!

ಅಷ್ಟಕ್ಕೂ ನಡೆದದ್ದೇನು..?
ಹಾವೇರಿ ಜಿಲ್ಲೆಯ ಹಾನಗಲ್ಲಿನ ಅದೊಂದು ಕಟ್ಟಿಗೆ ಅಡ್ಡೆಗೆ ಕಾತೂರು ಅರಣ್ಯದಿಂದ ಎಪ್ರೀಲ್ ತಿಂಗಳಲ್ಲಿ ಕಟ್ಟಿಗೆ ಸಾಗಿಸಿರಲಾಗಿರತ್ತೆ. ಆ ಹೊತ್ತಲ್ಲಿ ಖಚಿತ ಮಾಹಿತಿ ಪಡೆದಿದ್ದ ಹಾನಗಲ್ RFO ಶಿವರಾಜ್ ಮಠದ್ ರೇಡು ಹಾಕಿರ್ತಾರೆ. ಆ ಹೊತ್ತಲ್ಲಿ ಅಲ್ಲಿ ಅಕ್ರಮದಿಂದಲೇ ಸಾಗಿಸಿರಬಹುದು ಅನ್ನಲಾಗಿದ್ದ ಕಟ್ಟಿಗೆ ಸಿಕ್ಕಾಕಿಕೊಂಡಿರತ್ತೆ. ಅಸಲು, ಅಲ್ಲಿ ಸಿಕ್ಕಿದ್ದ ಕಟ್ಟಿಗೆಗೆ ದಾಸ್ತಾನು ಪರ್ಮಿಟ್ ಮಾತ್ರ ಇರತ್ತೆ. ಅದ್ಯಾರದ್ದೋ ಖಾಸಗಿಯವರ ಮಾಲ್ಕಿ ಪರ್ಮಿಟ್ ಮೂಲಕ ಅಲ್ಲಿಗೆ ಕಟ್ಟಿಗೆ ಕೊಂಡೊಯ್ಯಲಾಗಿರತ್ತೆ. ಹಾಗಂತ, ಆ ಎಲ್ಲಾ ಮಾಲಿಗೂ ಅವಶ್ಯಕವಾಗಿ ಬೇಕಾಗಿದ್ದ ಟ್ರಾನ್ಸಪೋರ್ಟ್ ಪರ್ಮಿಟ್ ದುರ್ಬಿನ್ ಹಾಕಿ ಹುಡುಕಿದ್ರೂ ಅವತ್ತು ಅಲ್ಲಿನ ಅಧಿಕಾರಿಗಳಿಗೆ ಸಿಗಲೇ ಇಲ್ಲ. ಸಿಗಲೇ ಇಲ್ಲ ಅನ್ನೋದಕ್ಕಿಂತ ಟ್ರಾನ್ಸಪೋರ್ಟ್ ಪರ್ಮಿಟ್ ಪಡೆಯದೇ ಬಂಢ ದೈರ್ಯದಲ್ಲಿ ಕಾತೂರಿನಿಂದ ಹಾನಗಲ್ಲಿನ ವರೆಗೂ ಅದನ್ನೇಲ್ಲ ಸಾಗಿಸರಲಾಗಿತ್ತೆ ಅನ್ನೋ‌ ಮಾಹಿತಿ ಅವ್ರಿಗೆ ಕನ್ಪರ್ಮ್ ಆಗಿತ್ತು. ಅಲ್ಲದೇ ದಾಸ್ತಾನಿನ ಕಟ್ಟಿಗೆಯ ವಿಷಯದಲ್ಲಿ ಪರ್ಮಿಟ್ ಲೆಕ್ಕಾಚಾರಕ್ಕೂ ಅಲ್ಲಿದ್ದ ಕಟ್ಟಿಗೆಗಳ ಲೆಕ್ಕಾಚಾರಗಳಿಗೂ ಯಪರಾತಪರಿ ಇತ್ತಂತೆ. ಹೀಗಾಗಿ, ಅದನ್ನೇಲ್ಲ ಗಮನಿಸಿದ್ದ ಹಾನಗಲ್ಲಿನ ದಕ್ಷ RFO ಶಿವರಾಜ್ ಮಠದ್ ಆ ಇಡೀ ಕಟ್ಟಿಗೆ ಅಡ್ಡೆಯನ್ನೇ ಸೀಜ್ ಮಾಡಿರ್ತಾರೆ.

ಅಡ್ಡೆ ಮಾಲೀಕ ಹೇಳಿದ್ದ..!
ಇನ್ನು, RFO ಮಠದ್ ಸಾಹೇಬ್ರು ಯಾವಾಗ ಕಟ್ಟಿಗೆ ಅಡ್ಡೆ ಸೀಜ್ ಮಾಡಿದ್ರೋ, ಅಲ್ಲಿನ ಅಡ್ಡೆಯ ಮಾಲೀಕ ಅಲ್ಲಿ ಸಿಕ್ಕಿದ್ದ ಕಟ್ಟಿಗೆಯ ಅಸಲೀ ಮಾಲೀಕ ಯಾರು ಅಂತಾ ಬಾಯಿ ಬಿಟ್ಟಿದ್ದ. ದುರಂತ ಅಂದ್ರೆ ಹಾಗೆ ಟ್ರಾನ್ಸ್ ಪೋರ್ಟ್ ಪರ್ಮಿಟ್ ಪಡೆಯದೇ ಹಾನಗಲ್ಲಿಗೆ ಕಟ್ಟಿಗೆ ಸಾಗಿಸಿದ್ದು ಕಾತೂರಿನ ಅದೊಬ್ಬ ಅರಣ್ಯ ಅಧಿಕಾರಿ ಅಂತಾ ಅವತ್ತೇ ಬಟಾಬಯಲು ಮಾಡಿದ್ದ. ಹೀಗಾಗಿ, ಆ ಪ್ರಕರಣವನ್ನು ಸಿರಿಯಸ್ ಆಗಿ ತೆಗೆದುಕೊಂಡ ಹಾನಗಲ್ಲಿ‌ನ RFO ಶಿವರಾಜ್ ಮಠದ್ ತಕ್ಷಣವೇ ಪ್ರಕರಣದ ಸಂಪೂರ್ಣ ಮಜಕೂರಗಳನ್ನೂ ಅಲ್ಲಿನ ಎಸಿಎಫ್ ರವರಿಗೆ ವರದಿ ನೀಡಿದ್ದರು.

ಹಾನಗಲ್ಲಿನ ದಕ್ಷ RFO ಮಠದ್

ಆ ನಂತರ..!
ಇಷ್ಟೇಲ್ಲ ನಡೆದ ನಂತರ, ಹಾನಗಲ್ಲಿನ ಎಸಿಎಫ್ ಸಾಹೇಬ್ರು ಆ ಇಡೀ ಪ್ರಕರಣದ ಫೈಲನ್ನು ಯಥಾವತ್ತಾಗಿ ಮುಂಡಗೋಡಿನ ಅರಣ್ಯ ಇಲಾಖೆಗೆ ವರ್ಗಾಯಿಸಿದ್ದಾರೆ. ಕೂಲಂಕುಶವಾಗಿ ತನಿಖೆ‌ ಮಾಡಿ ವರದಿ ನೀಡಿ ಅಂತಾ ಅವತ್ತೇ ರವಾನಿಸಿದ್ದಾರೆ. ಹೀಗಾಗಿ, ಆ ಪ್ರಕರಣದ ಫೈಲು ಸದ್ಯ ಮುಂಡಗೋಡಿನ ಎಸಿಎಫ್ ರವರ ಟೇಬಲ್ಲಿನ ಮೇಲೆ ಬಿದ್ದು ವರ್ಷಗಳೇ ಕಳೆದಿದೆ. ಆದ್ರೆ, ಕ್ರಮವಿರಲಿ, ಆ ಫೈಲನ್ನು ತೆರೆದು ನೋಡಿದ್ದಾರೋ ಇಲ್ವೋ ಗೊತ್ತಿಲ್ಲ. ಅಷ್ಟಕ್ಕೂ ಇದೇಲ್ಲ ಮುಂಡಗೋಡಿನ ದಕ್ಷ ಎಸಿಎಫ್ ವಾಲಿ ಸಾಹೇಬ್ರ ಟೇಬಲ್ಲಿನ ಮೇಲೆ ಇದ್ರೂ ಅದ್ಯಾವ ಕೈ ಇವ್ರನ್ನ ಕ್ರಮ ಕೈಗೊಳ್ಳದಂತೆ ತಡೆದಿದೆಯೋ ಯಾರಿಗೂ ಅರ್ಥವಾಗ್ತಿಲ್ಲ..

ACF ವಾಲಿ ಸಾಹೇಬ್ರು

ಯಾಕ್ರಿ ವಾಲೀ ಸಾಹೇಬ್ರೇ..?
ಅಷ್ಟಕ್ಕೂ, ಎಸಿಎಫ್ ವಾಲಿ ಸಾಹೇಬ್ರು ಬಹುಶಃ ಆ ಇಡೀ ಪ್ರಕರಣದ ಅಸಲೀಯತ್ತು ಆಳವಾಗಿ ಅಧ್ಯಯನ ಮಾಡಿ ಆಗಿದೆ. ಆದ್ರೆ, ಜಸ್ಟ್ ಒಂದು ಶರಾ ಬರೆದು ಸೈನು ಗೀಚಿ, ಆ ಎಡಬಿಡಂಗಿ ಫಾರೆಸ್ಟರನ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ಆದ್ರೆ, ಪಾಪ ವಾಲಿ ಸಾಹೇಬರ ಮೇಲೆ ಅದ್ಯಾರ “ಬಲಿಷ್ಟ” ಸಾಹೇಬನ ಒತ್ತಡ ತರಲಾಗಿದೆಯೋ ಅದೂ ಕೂಡ ಗೊತ್ತಿಲ್ಲ. ಯಾಕಂದ್ರೆ, ಆ ಐನಾತಿ ಫಾರೆಸ್ಟರ್ ನಿಗೆ ಅದೇಂತದ್ದೋ ದೊಡ್ಡ ದೊಡ್ಡವರ ಬಲ ಇದೆ ಅಂತೆ. ರಾಜಕೀಯದವರ ಕೃಪಾಕಟಾಕ್ಷ ಇದೆಯಂತೆ. ಹೀಗಾಗಿ, ಆತನ ತಂಟೆಗೆ ಯಾರೂ ಹೋಗೋಕೆ ಭಯ ಪಡ್ತಾರಂತೆ. ಅಂತಹದ್ದೊಂದು ಹವಾ‌ ಮೆಂಟೇನ್ ಮಾಡಿ ಓಡಾಡಿಕೊಂಡಿರೋ ಆತನ ಅಕ್ರಮಗಳ ಯಾದಿಗಳು ಒಂದೆರಡಲ್ಲ.

ನಾಲ್ಕು ಎಕರೆ ಬಗೆದು ತಿಂದ್ರಾ..?
ಅಂದಹಾಗೆ, ಕಾತೂರಿನಲ್ಲಿರೋ ಅರಣ್ಯ ಇಲಾಖೆಯ ಕಚೇರಿಯ ಕೂಗಳತೆ ದೂರದಲ್ಲಿಯೇ ಬರೋಬ್ಬರಿ ನಾಲ್ಕು ಎಕರೆಯಷ್ಟು ಅರಣ್ಯ ಪ್ರದೇಶ ಪುಂಡರ ಪಾಲಾಗಿದೆ‌ ಅಂತಾ ಆರೋಪವಿದೆ. ಅದಕ್ಕೂ ಕೂಡ ಇದೇ ಫಾರೆಸ್ಟರ್ ಬೆಂಗಾವಲಾಗಿ ನಿಂತು, ಅರಣ್ಯ ದೇವಿಯನ್ನೇ ಬಗೆದು ತಿಂದಿದ್ದಾನಂತೆ. ಆ ಪ್ರದೇಶದಲ್ಲಿದ್ದ ಬೆಲೆಬಾಳುವ ಮರಗಳು ಹಾಡಹಗಲೇ ಇದೇ ಅಧಿಕಾರಿಗಳ ಕಣ್ಗಾವಲಿನಲ್ಲಿ ಕಡಿದು ಸಾಗಾಟ ಆಗಿದೆ ಅನ್ನೋ ಕೂಗು ಇಡೀ ಕಾತೂರಿನಾದ್ಯಂತ ಹರಿದಾಡ್ತಿದೆ. ಆದ್ರೆ ನರವಿಲ್ಲದ ಅರಣ್ಯ ರಕ್ಷಕರ ಏನಂದ್ರೆ ಏನೂ ಕೆಲಸ ಮಾಡ್ತಿಲ್ಲ. ಹೀಗಾಗಿ, ಕಾತೂರಿನ ಪ್ರಜ್ಞಾವಂತರು ಇನ್ನೇನು ಬೀದಿಗಿಳಿದು ಇಂತಹ ಅಧಿಕಾರಿಗಳ ವಿರುದ್ಧ ಸಿಡಿದೇಳುವ ಎಲ್ಲಾ ಸಾಧ್ಯತೆ ಇದೆ. ಹಾಗೇನಾದ್ರೂ ಆದ್ರೆ ಕಾತೂರು ಅರಣ್ಯ ವ್ಯಾಪ್ತಿಯ ಅಧಿಕಾರಿಗಳ ಮಾನ ಹರಾಜು ಆಗೋದ್ರಲ್ಲಿ ಎರಡು ಮಾತಿಲ್ಲ.

ಹಾನಗಲ್ಲಿಗೆ ಹೋಗಿದ್ದು ಅದೇ ಮಾಲಾ..?
ಅಸಲು, ಕಾತೂರಿನಿಂದ ಅವತ್ತು ಸಾಗಿಸಲಾಗಿದ್ದ ಕಟ್ಟಿಗೆ ಎಲ್ಲಿಯದು..? ಕಾತೂರಿನ ಅರಣ್ಯ ಇಲಾಖೆ ಕಚೇರಿಯ ಕೂಗಳತೆ ದೂರದಲ್ಲಿರೋ ಆ ನಾಲ್ಕು ಎಕರೆ ಅತಿಕ್ರಮಣ ಮಾಡಿಕೊಂಡಿರೋ ಜಾಗದ್ದಾ..? ಹಾಗೆನೋಡಿದ್ರೆ ಈಗ್ಗೆ ಕೆಲವೇ ವರ್ಷಗಳ ಹಿಂದೆ ಆ ಅತಿಕ್ರಮಣ ಮಾಡಿಕೊಂಡಿದ್ದ ಪ್ರದೇಶದಲ್ಲಿ ಲಕ್ಷ ಲಕ್ಷ ಬೆಲೆಬಾಳುವ ಮರಗಳಿದ್ದವು, ಆದ್ರೆ ಅವೇಲ್ಲ ಈಗ ನಾಪತ್ತೆಯಾಗಿವೆ ಹಾಗಂತಾ ಕಾತೂರಿಗರು ಆತಂಕ ವ್ಯಕ್ತ ಪಡಿಸ್ತಿದಾರೆ. ಹಾಗಿದ್ರೆ, ಆ ಅತಿಕ್ರಮಣ ಜಾಗದಲ್ಲಿದ್ದ ಬೆಲೆಬಾಳುವ ಅರಣ್ಯ ಸಂಪತ್ತು ಇದೇ ಫಾರೆಸ್ಟರನ‌ ಮೂಲಕ ಎಸ್ಕೇಪ್ ಆಯ್ತಾ..? ಜಬರ್ದಸ್ತ್ ತನಿಖೆಯಾಗಬೇಕಿದೆ‌‌.

ಅಷ್ಟಕ್ಕೂ ತನಿಖೆ ಯಾವಾಗ..?
ಅಸಲು, ಹಾನಗಲ್ ಎಸಿಎಫ್ ಸಾಹೇಬ್ರು ಕಳಿಸಿರೋ ಫೈಲ್ ನ ತನಿಖೆ ಯಾವಾಗ ಶುರುವಾಗತ್ತೆ..? ಆ ತನಿಖೆಯ ಹಾದಿಗೆ ಯಾರಾದ್ರೂ ಬಲಿಷ್ಟ ಕೈಗಳು ತಡೆಯೊಡ್ಡಿದ್ದಾವಾ..? ಹಾಗೇನೂ ಇಲ್ಲ ಅಂದ್ರೆ ಆ ತನಿಖೆಯ ಫೈಲು ವರ್ಷಗಳ ಕಾಲ ಯಾಕೆ ಧೂಳು ತಿನ್ನುತ್ತಿದೆ..? ಇದನ್ನೇಲ್ಲ ಎಸಿಎಫ್ ಸಾಹೇಬರು ಉತ್ತರಿಸಬೇಕಿದೆ‌. ಇಲ್ಲಿ ತಪ್ಪೋ ಒಪ್ಪೋ ಗೊತ್ತಿಲ್ಲ. ಅಲ್ಲಿ ಸಿಕ್ಕಿರುವ ಕಟ್ಟಿಗೆ ಅಕ್ರಮವೋ ಸಕ್ರಮವೋ ಅದೂ ಕೂಡ ಗೊತ್ತಿಲ್ಲ. ಅದೇಲ್ಲ ಸತ್ಯಾಂಶ ಏನೇ ಇರಲಿ ಸಾರ್ವಜನಿಕರಿಗೂ ತಿಳಿಯಬೇಕಿದೆ‌ ಅಲ್ವಾ..?
ಹಾಗಿದ್ರೆ ತಿಳಿಸೋರು ಯಾರು..?

error: Content is protected !!