ಮುಂಡಗೋಡ ತಾಲೂಕಿನ ಮೈನಳ್ಳಿಯಲ್ಲಿ ಯುವತಿಯೋರ್ವಳು ತನಗೆ ಅನ್ಯಾಯವಾಗಿದೆ ಅಂತಾ ಯುವಕನ ಮನೆಯೆದುರು ನಿನ್ನೆ ಸೋಮವಾರದಿಂದಲೂ ಸತ್ಯಾಗ್ರಹ ನಡೆಸ್ತಿದಾಳೆ. ಇಲ್ಲಿನ ಯುವಕನೊಬ್ಬ ನಂಗೆ ಪುಸಲಾಯಿಸಿ, ಪ್ರೀತಿಯ ಬಲೆ ಹೆಣೆದು, ಬಳಸಿಕೊಂಡು ಇವಾಗ ಮದುವೆ ಅಂತಾ ಮಾತಾಡಿದ್ರೆ ಆಗಲ್ಲ ಅಂತಾ ದ್ರೋಹ ಮಾಡ್ತಿದಾನೆ ಎಂದು ಅಲವತ್ತುಕೊಂಡಿದ್ದಾಳೆ..

ಘಟನೆ ಏನು..?
ಯುವತಿ ಹೇಳೋ ಪ್ರಕಾರ, ಮೈನಳ್ಳಿ ಗ್ರಾಮದ ಅದೊಬ್ಬ ಯುವಕ, ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಅದೇಂತದ್ದೋ ಟ್ರೇನಿಂಗ್ ಗೆ ಹೋದಾಗ, ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಕಾಂಡೇಬಾಗೂರ್ ಗ್ರಾಮದ 19 ವರ್ಷದ ಯುವತಿಯೊಂದಿಗೆ ಸ್ನೇಹ ಬೆಳಸಿಕೊಳ್ತಾನೆ. ಆ ಸ್ನೇಹ ಮುಂದುವರೆದು ಪ್ರೀತಿಗೆ ತಿರುಗತ್ತೆ. ಆ ನಂತರದಲ್ಲಿ ಇಬ್ಬರೂ ನಾನಿನ್ನ ಬಿಡಲಾರೆ ಅಂತಾ ಜೊತೆ ಜೊತೆಯಾಗೇ ಬೆಂಗಳೂರಿಗೆ ಕೆಲಸಕ್ಕೆ ಅಂತ ಹೋಗಿರ್ತಾರೆ. ಅಲ್ಲಿಯೂ ಇವ್ರು ಒಂದೇ ರೂಮಿನಲ್ಲಿ ವಾಸ ಮಾಡಿರ್ತಾರೆ. ಹೀಗೆ ಬರೋಬ್ಬರಿ ಒಂದು ವರ್ಷಗಳ‌ ಕಾಲ ನಡೆದ ಇವ್ರ ಪ್ರೇಮ, ಸರಸ ಸಲ್ಲಾಪ ಕಡೆ ಕಡೆಗೆ ಮದುವೆ ಮಾತಿಗೆ ಬಂದಾಗ ಯುವಕ ಬಿಲ್ ಕುಲ್ ಬದಲಾಗಿಬಿಡ್ತಾನೆ.. ನಾನು ಮಾಡಿದ್ದು ಜಸ್ಟ್ ಟೈಮ್ ಪಾಸ್ ಅಷ್ಟೆ ಮದುವೆ ಅಂದ್ರೆ ಏನೂ ಸಾಧ್ಯ ಇಲ್ಲ ಅಂತಾ ಕಡ್ಡಿ ಮುರಿದಂತೆ ಹೇಳ್ತಾನೆ. ನಂತರ ಅವಳಿಂದ ದೂರ ಆಗ್ತಾನೆ. ಹೀಗಾಗಿ, ಯುವತಿ ಇವಾಗ ದೂರವಾದ ಪ್ರೇಮಿಯನ್ನು ಹುಡುಕಿಕೊಂಡು ಮುಂಡಗೋಡಿನ ಮೈನಳ್ಳಿವರೆಗೂ ಬಂದಿದ್ದಾಳೆ.

ಪೊಲೀಸರಿಗೆ ಮೊರೆ..!
ಇನ್ನು, ಹೀಗೆ ನೇರವಾಗಿ ಮುಂಡಗೋಡಿಗೆ ಬಂದಿಳಿದಿದ್ದ ಯುವತಿ, ಇಲ್ಲಿನ ಪೊಲೀಸ್ ಠಾಣೆಗೆ ಹೋಗಿ ನಂಗೆ ಹೀಗೆ ಆಗಿದೆ, ನನ್ನ ಪ್ರೇಮಿಯ ಜೊತೆ ಸೇರಿಸಿ ಅಂತಾ ಅಲವತ್ತು ಕೊಳ್ತಾಳೆ ಆದ್ರೆ, ಮುಂಡಗೋಡ ಪೊಲೀಸರು ಆ ಯುವತಿಗೆ ಬುದ್ದಿವಾದ ಹೇಳಿ ಕಳಿಸಿದ್ದಾರೆ ಅನ್ನೋ‌ ಮಾಹಿತಿ ಲಭ್ಯವಾಗಿದೆ. ಹೀಗಾಗಿ, ಮತ್ತೆ ಯುವತಿ ಮೈನಳ್ಳಿಯ ಯುವಕನ ಮನೆ ಬಳಿ ಬಂದು ಮನೆ ಎದುರೇ ಧರಣಿ ಕುಳಿತಿದ್ದಾಳೆ. ದುರಂತ ಅಂದ್ರೆ ಏಕಾಂಗಿಯಾಗಿ ಬಂದಿರೋ ಯುವತಿಗೆ ಕಾನೂನು ಸಹ ಸಹಕಾರಿಯಾಗಿಲ್ಲ. ಜೊತೆಗೆ ಯಾರೂ ಕ್ಯಾರೇ ಅಂದಿಲ್ಲ. ಹೀಗಾಗಿ, ಮಯುನಳ್ಳಿಯ ಕೆಲ ಮುಖಂಡರು, ಗ್ರಾಮಸ್ಥರು ಯುವತಿಗೆ ಊಟ ತಿಂಡಿ ಕೊಟ್ಟು ಸಹಾಯಕ್ಕೆ ಬಂದಿದ್ದಾರೆ. ಆದ್ರೆ ಈ ಕ್ಷಣಕ್ಕೂ ಯಾವೊಬ್ಬ ಮಹಿಳಾ ಇಲಾಖೆಯ ಅಧಿಕಾರಿಗಳಾಗಲಿ, ಪೊಲೀಸರಾಗಲಿ ಬಂದಿಲ್ಲ ಅನ್ನೋದು ಗ್ರಾಮಸ್ಥರ ಆರೋಪ.

ರಕ್ಷಣೆ ಸಿಗಲಿ..!
ಅಸಲು, ಹಾವೇರಿ ಜಿಲ್ಲೆಯಿಂದ ತನ್ನ ಪ್ರಿಯತಮನನ್ನು ಹುಡುಕಿಕೊಂಡು ಬಂದಿರೋ ಯುವತಿಗೆ ರಕ್ಷಣೆ ಬೇಕಿದೆ. ತಪ್ಪು, ಸರಿ ಅದೇನೇ ಇರಲಿ, ಆ ಯುವತಿಗೆ ಪೊಲೀಸರು ರಕ್ಷಣೆ ಒದಗಿಸಬೇಕಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಯುವತಿಗೆ ನೆರವಿಗೆ ಬರಬೇಕಿದೆ. ಅಂದಾಗ ಮಾತ್ರ ಇಲ್ಲಿ ನ್ಯಾಯ ಅನ್ನೋದು ಬಲಿಷ್ಟವಾಗಬಹುದು.

error: Content is protected !!