ಮುಂಡಗೋಡ ತಾಲೂಕಾಡಳಿತ ಅದೇನು ಕಡೆದು ಗುಡ್ಡೆ ಹಾಕ್ತಿದೆಯೋ ಒಂದೂ ಅರ್ಥ ಆಗ್ತಿಲ್ಲ. ಇಲ್ಲಿ ಜನರಿಗೆ ಬವಣೆಗಳೇ ಹಾಸು ಹೊಕ್ಕಾಗಿದೆ. ಕೋಟಿ ಕೋಟಿ ಹಣದ ಹರಿವು ಆಗ್ತಿದೆ. ಸಾಕಷ್ಟು ಅಭಿವೃದ್ಧಿಯ ಪರ್ವವೇ ತಾಲೂಕಿನಲ್ಲಿ ನಡೆದಿದೆ. ಹಾಗೆ ಹೀಗೆ ಅಂತೇಲ್ಲ‌ ಬಡಾಯಿ ಕೊಚ್ಚಿಕೊಳ್ಳುವ ಜನಪ್ರತಿನಿಧಿಗಳಿಗೆ ಇಲ್ಲಿನ ಸಮಸ್ಯೆಗಳೇ ಕಾಣುತ್ತಿಲ್ವಾ..? ಇಂತಹದ್ದೊಂದು ಅನುಮಾನ ಮೂಡುತ್ತಿದೆ. ನಿಜ ಇದು ಅಕ್ಷರಶಃ ನಮ್ಮ ತಾಲೂಕಿನ ವ್ಯವಸ್ಥೆಗೆ ಹಿಡಿದ ಕನ್ನಡಿ.. ನಾಚಿಗ್ಗೇಡು..!

ಭಗೀರಥರ ತವರು..!
ಯಾಕಂದ್ರೆ, ಸಾಕ್ಷಾತ್ ಭಗೀರಥರ ಅವತಾರ ಮುಂಡಗೋಡ ತಾಲೂಕಿ‌ನಲ್ಲಿ ಆಗಿಯೇ ಹೋಗಿದೆ ಅಂತೇಲ್ಲ ದೊಡ್ಡ ದೊಡ್ಡ ಬ್ಯಾನರುಗಳು ಪ್ಲೆಕ್ಸ್ ಗಳು ರಾರಾಜಿಸುತ್ತವೆ. ಆದ್ರೆ ಅಂತಹ ಪ್ಲೆಕ್ಸು ಬ್ಯಾನರುಗಳ ನೆರಳಲ್ಲೇ ಅದೊಂದು ಗ್ರಾಮದ ಶಾಲಾ ವಿದ್ಯಾರ್ಥಿಗಳು ಕುಡಿಯಲು ನೀರು ಕೊಡಿ ಅಂತಾ ಪಾಠ ಬಿಟ್ಟು ರಸ್ತೆಯ ಮೇಲೆ ಬಂದು ಕುಳಿತುಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಹೌದು, ಮುಂಡಗೋಡ ತಾಲೂಕಿನ ಸಿಂಗನಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನಮಗೆ ಕುಡಿಯಲು ನೀರು ಕೊಡಿ ಅಂತಾ ಖಾಲಿ ಕೊಡಗಳೊಂದಿಗೆ ರಸ್ತೆ ಮೇಲೆ ಕುಳಿತು ಆಡಳಿತ ವ್ಯವಸ್ಥೆಗೆ ಕ್ಯಾಕರಿಸಿ ಉಗಿದಿದ್ದಾರೆ.

ಏನಿದು ಅವ್ಯವಸ್ಥೆ..!
ಅಸಲು, ಇದು ಸಿಂಗನಳ್ಳಿ ಗ್ರಾಮದ ಶಾಲಾ ವಿದ್ಯಾರ್ಥಿಗಳ ಸಮಸ್ಯೆ ಅಷ್ಟೆ ಅಲ್ಲ. ಇಡೀ ಊರಿಗೇ ಇವತ್ತು ಕುಡಿಯುವ ನೀರಿನ ಸಮಸ್ಯೆ ಇದೆ. ಅಷ್ಟಕ್ಕೂ ಇದು ಇವತ್ತೊಂದು ದಿನದ ಮಾತಲ್ಲ. ಹಲವು ವರ್ಷಗಳಿಂದಲೇ ಇಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಅದ್ರಲ್ಲೂ ಕಳೆದ 17 ದಿನದ ಈಚೆಗೆ ಕುಡಿಯಲು ಒಂದು ಹನಿ ನೀರು ಸಿಕ್ಕುತ್ತಿಲ್ಲ. ಶಾಲಾ ವಿದ್ಯಾರ್ಥಿಗಳಿಗೆ ಬಿಸಿಯೂಟ ಮಾಡಿ ಕುಡಿಯಲು, ಕೈ ತೊಳೆಯಲು, ಪಾತ್ರೆ ತೊಳೆಯಲೂ ನೀರಿಲ್ಲ.

ಮನವಿ ನೀಡಿ, ಎಚ್ಚರಿಸಿದ್ರು..!
ಹೀಗಾಗಿ, ಕಳೆದ ಫೆ. 15 ರಂದೇ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಕಾತೂರು ಗ್ರಾಮ ಪಂಚಾಯತಿಗೆ ಖಡಕ್ಕಾಗಿ ಆಗ್ರಹಿಸಿ ಮನವಿ ನೀಡಿದ್ರು. ನೀರು ಕೊಡದೇ ಹೋದ್ರೆ ರಸ್ತೆ ತಡೆದು ಪ್ರತಿಭಟಿಸೋದಾಗಿ ಎಚ್ಚರಿಸಿದ್ರು. ಆದ್ರೂ ನಿರ್ಲಜ್ಯ ಗ್ರಾಮ ಪಂಚಾಯತಿ ಅಧಿಕಾರಿಗಳು ಈ ಕಡೆ ಮುಖ ಮಾಡಿಯೂ ನೋಡಿಲ್ಲ. ಹೀಗಾಗಿ, ವಿದ್ಯಾರ್ಥಿಗಳ ಆಕ್ರೋಶದ ಕಟ್ಟೆ ಒಡೆದಿದೆ. ಈ ಕಾರಣಕ್ಕಾಗೇ ಇವತ್ತು ಶಿರಸಿ- ಹುಬ್ಬಳ್ಳಿ ರಾಜ್ಯ ಹೆದ್ದಾರಿ ಮೇಲೆ ಕುಳಿತು ರಸ್ತೆ ತಡೆ ನಡೆಸಿದ್ದಾರೆ. ಪುಟ್ಟ ಪುಟ್ಟ ಕಂದಮ್ಮಗಳು ರಸ್ತೆ ಮೇಲೆ ಕುಳಿತು ಕುಡಿಯಲು ನೀರು ಕೊಡಿ ಅಂತಾ ಹಂಬಲಿಸಿದ್ದಾರೆ. ಆದ್ರೆ, ಎಸಿ ರೂಮಲ್ಲಿ ಕುಳಿತು ಲಲ್ಲೆ ಹೊಡೆಯುವ ಅಧಿಕಾರಿಗಳಿಗೆ ಈ ಮಕ್ಕಳ ಗೋಳು ಕೇಳಿಸುತ್ತಿಲ್ಲ. ಇದು ನಮ್ಮ ತಾಲೂಕಿನ ದುರಂತ ಅಲ್ಲವೇ ಭಗೀರಥರೇ..? ಇದಕ್ಕಿಂತ ನಾಚಿಗ್ಗೇಡು ಬೇಕಾ..?

ಎಲ್ಲಿದ್ದಾರೆ ಅಧಿಕಾರಿಗಳು.‌.?
ನಿಜ, ತಿಂಗಳುಗಟ್ಟಲೇ ಕುಡಿಯುವ ನೀರಿಗಾಗಿ ಪರಿತಪಿಸಿ ಆಡಳಿತ ವ್ಯವಸ್ಥೆಯ ಬಾಗಿಲು ಬಡಿದರೂ ಕಣ್ಣೆತ್ತಿಯೂ ನೋಡದ ಅಧಿಕಾರಿಗಳು ಒಂದೆಡೆಯಾದ್ರೆ, ಉದ್ದೂದ್ದ ಬಾಷಣ ಬಿಗಿದು, ಓಟು ಗಿಟ್ಟಿಸಲು ಓಡೋಡಿ ಬರುವ ಜನಪ್ರತಿನಿಧಿಗಳ‌ ನಿರ್ಲಕ್ಷ, ಬೇಜವಾಬ್ದಾರಿ ಜನರ ಜೀವ ಹಿಂಡುತ್ತಿದೆ. ಈ ಕಾರಣಕ್ಕಾಗೇ ಶಾಲೆಯಲ್ಲಿ ಪಾಠ ಕಲಿಯಬೇಕಾಗಿದ್ದ ವಿದ್ಯಾರ್ಥಿಗಳು ರಸ್ತೆಯ ಮೇಲೆ ಬಂದು, ಸುಡು ಬಿಸಿಲಲ್ಲಿ ಕುಡಿಯಲು ನೀರು ಕೊಡಿ ಅಂತಾ ಅಂಗಲಾಚುವ ಸ್ಥಿತಿ ನಿರ್ಮಾಣವಾಗಿದ್ದು. ನಿಜಕ್ಕೂ ನಾವು ಇನ್ನೂ ಅದ್ಯಾವ ಜಮಾನಾದಲ್ಲಿ ಇದ್ದೀವಿ ಅಂತಾ ಮಮ್ಮಲ ಮರುಗುವಂತಾಗಿದೆ. ಇನ್ನಾದ್ರೂ ಎಚ್ಚೆತ್ತುಕೊಳ್ಳಿ “ಸಾ”ಹೇಬರುಗಳೇ..!

error: Content is protected !!