ಯಲ್ಲಾಪುರ ಪೊಲೀಸರು ಬಂಧಿಸಿದ್ದ ರಾಬರಿ ಗ್ಯಾಂಗ್ ನ ಆರೋಪಿಯೊಬ್ಬ ಜೈಲಿನಿಂದಲೇ ಎಸ್ಕೇಪ್ ಆಗಿದ್ದಾನೆ. ಶಿರಸಿ ಸಬ್ ಜೈಲಿನ ಅಧಿಕಾರಿಗಳ ನಿರ್ಲಕ್ಷದಿಂದ ಇವತ್ತು ಬೆಳ್ಳಂ ಬೆಳಿಗ್ಗೆ ಜೈಲಿನಿಂದಲೇ ಕಾಲ್ಕಿತ್ತಿದ್ದಾನೆ. ಅಂದಹಾಗೆ, ಶಿರಸಿ ಸಬ್ ಜೈಲಿನ ಅಧಿಕಾರಿಗಳು ಅದೇನು ಕಡೆದು ಗುಡ್ಡೆ ಹಾಕ್ತಿದ್ರೋ ಏನೋ ಗೊತ್ತಿಲ್ಲ. ಯಲ್ಲಾಪುರ ಪೊಲೀಸರ ಶ್ರಮವನ್ನೇಲ್ಲ ನೀರಲ್ಲಿ ಹೋಮ ಹಾಕಿದಂತೆ ಮಾಡಿದ್ದಾರೆ.

ಆತ ಪ್ರಕಾಶ್ ಸಿದ್ದಿ..!
24 ವರ್ಷ ವಯಸ್ಸಿನ ಪ್ರಕಾಶ್ ಕ್ರಷ್ಣಾ ಸಿದ್ದಿ ಎಂಬುವ ಆರೋಪಿ ಇವತ್ತು ಬೆಳಿಗ್ಗೆ 8.45 ರ ಸುಮಾರಿಗೆ ಜೈಲಿನಿಂದಲೇ ಪರಾರಿಯಾಗಿದ್ದಾನೆ. ಹೀಗಾಗಿ, ಜೈಲಿನ ಅಧಿಕಾರಿಗಳು ಬಾಯಿ ಬಾಯಿ ಬಡೆದುಕೊಳ್ತಿದಾರೆ. ಬಹುಶಃ ಯಲ್ಲಾಪುರ ಪೊಲೀಸರು ತಿಂಗಳುಗಟ್ಟಲೇ ಮಾಡಿದ್ದ ಕಾರ್ಯವನ್ನ ಕ್ಷಣಮಾತ್ರದಲ್ಲಿ ಉಡೀಸ್ ಮಾಡಿದ್ದಾರೆ ಜೈಲು ಅಧಿಕಾರಿಗಳು. ಈ ಕಾರಣಕ್ಕಾಗೇ ಇಡೀ ಪೊಲೀಸ್ ಇಲಾಖೆಯಲ್ಲಿ ಈ ಕೇಸ್ ಒಂಥರಾ ಮುಜುಗರಕ್ಕೆ ಕಾರಣವಾಗಿದೆ. ಅದ್ರ ಜೊತೆ ನಮ್ಮ ಜೈಲಿನಲ್ಲೂ ಹೆಗ್ಗಣಗಳ ಕಾರುಬಾರು ಇದೆಯಾ..? ಅನ್ನೋ ಅನುಮಾನ ಶುರುವಾಗಿದೆ.

ಮಂಜು ನಾಯ್ಕ್ ನಿರ್ಲಕ್ಷ..?
ಛೇ, ಯಲ್ಲಾಪುರ ಪೊಲೀಸರ ಶ್ರಮವನ್ನೇಲ್ಲ ವ್ಯರ್ಥ ಮಾಡಿದ ಶಿರಸಿ ಸಬ್ ಜೈಲಿನ ಜೈಲಾಧಿಕಾರಿ ಮಂಜು ನಾಯ್ಕ್ ಗೆ ಈಗ ಇಡೀ ಜಿಲ್ಲೆಯ ಜನ ಎಲೆ‌ಅಡಿಕೆ ಸೇವೆ ಮಾಡ್ತಿದಾರೆ. ಯಾಕಂದ್ರೆ, ಓರ್ವ ಆರೋಪಿಯನ್ನ ಈ ಅಧಿಕಾರಿ ಇವತ್ತು ಜೈಲಿನ ಹೊರಗಡೆಯ ಗಾರ್ಡನ್ನಿಗೆ ನೀರು ಹಾಕಲು ಬಿಟ್ಟಿದ್ನಂತೆ. ಹಾಗಂತ, ಮಾತು ಕೇಳಿ ಬರ್ತಿದೆ. ಹೀಗಾಗಿ, ಆ ಆರೋಪಿ ಈತನ ಮುಖದ ಮೇಲೆಯೇ ನೀರು ಬಿಟ್ಟಿದ್ದಾನೆ. ಎಸ್ಕೇಪ್ ಆಗಿದ್ದಾನೆ. ಅಷ್ಟಕ್ಕೂ ಇದೇಲ್ಲ ವ್ಯವಸ್ಥಿತ ಕೃತ್ಯವಾ..? ಆ ಆರೋಪಿಯ ಪರಾರಿಯ ಹಿಂದೆ ಜೈಲಿನ ಹೆಗ್ಗಣಗಳ ಕರಾಮತ್ತು ಕೆಲಸ ಮಾಡಿದೆಯಾ..? ಅಂತಹ ಅನುಮಾನಗಳೂ ಶುರುವಾಗಿದೆ. ತನಿಖೆ ಆಗಬೇಕು ಅಷ್ಟೆ.

ನಿಮಗೆ ನೆನಪಿರಲಿ..
ಇಡೀ ಯಲ್ಲಾಪುರ ತಾಲೂಕಿನ ಜನರ ನಿದ್ದೆಗೆಡಿಸಿದ್ದ ಅದೊಂದು ನಟೋರಿಯಸ್ ದರೋಡೆಕೋರರ ಭಯಾನಕ ಕೃತ್ಯ, ಬರೋಬ್ಬರಿ ಒಂದೂವರೇ ತಿಂಗಳು, ಹಗಲು ರಾತ್ರಿ ಕಾರ್ಯಾಚರಣೆ ನಡೆಸಿ, ಕಳೆದ ಆರು ತಿಂಗಳ ಹಿಂದೆ, ಅಂದ್ರೆ ಜುಲೈ ಮೊದಲ ವಾರದಲ್ಲೇ ಅರ್ದದಷ್ಟು ಆರೋಪಿಗಳ ಹೆಡೆಮುರಿ ಕಟ್ಟಿದ್ದರು ಯಲ್ಲಾಪುರ ಪೊಲೀಸ್ರು. ಅಸಲು, ಯಲ್ಲಾಪುರದ ಅವತ್ತಿನ ದಕ್ಷ ಪಿಐ ಸುರೇಶ್ ಯಳ್ಳೂರು ಹಾಗು ಮತ್ತವರ ಪಡೆಗೆ ಅಕ್ಷರಶಃ ನಿದ್ದೆ ಕಸಿದುಕೊಂಡಿದ್ದ ಕೇಸ್ ಅದು.

ಸಂಗ್ರಹ ಚಿತ್ರ

ಏನದು ಕೇಸ್..?
ನಿಮಗೆ ನೆನಪಿರಲಿ, ಅವತ್ತು ಜೂನ್ 14. ದೂರದ ಬಾಂಬೆಯಿಂದ ಎರಡು ಕಾರುಗಳಲ್ಲಿ ಐದು ಜನರ ತಂಡ ಯಲ್ಲಾಪುರ ತಾಲೂಕಿನ ಮಂಚಿಕೆರಿಗೆ ಬಂದಿಳಿದಿತ್ತು. ಹಾಗೆ ಬಂದಿಳಿದಿತ್ತು ಅನ್ನೋದಕ್ಕಿಂತ, ಅವ್ರನ್ನ ಬರುವಂತೆ ಮಾಡಿತ್ತು ಅದೊಂದು ನಟೋರಿಯಸ್ ಗ್ಯಾಂಗ್. ಯಲ್ಲಾಪುರ ಮತ್ತು‌ ಮುಂಡಗೋಡ ತಾಲೂಕಿನ ಗಡಿಯ ಜಾಗವದು. ಸಿಡ್ಲಗುಂಡಿ ಸಮೀಪದ ಬಿಳಕಿ ಬಳಿಯ ದಟ್ಟ ಕಾಡು. ಅಕ್ಷರಶಃ ನಿರ್ಜನ ಪ್ರದೇಶ. ಅವತ್ತು, ಬಾಂಬೆಯಿಂದ ಬಂದಿದ್ದ ಐವರು ಇಲ್ಲಿಯೇ ತಮ್ಮೇಲ್ಲ ಹಣ, ಬಂಗಾರ, ಲಕ್ಷಾಂತರ ಬೆಲೆಯ ಮೊಬೈಲ್ ಪೋನ್ ಗಳನ್ನು ಅನಾಮತ್ತಾಗಿ ಆಗಂತುಕರ ಕೈಗೆ ಚೆಲ್ಲಿ ಹೋಗಬೇಕಾಗಿತ್ತು. ಯಾಕಂದ್ರೆ, ಆ ಕ್ಷಣ ಆ ಐವರಿಗೂ ಅಂತಹದ್ದೊಂದು ಭಯಾನಕ ಸಂದರ್ಭ ತಂದಿಟ್ಟಿದ್ದರು ಆಗಂತುಕರು. ಕಾಡಿನ ನಟ್ಟನಡುವೆ ಕರೆದೊಯ್ದು ಲಕ್ಷ ಲಕ್ಷ ಹಣ ಎಗರಿಸಿ ಬಿಟ್ಟಿದ್ದರು ದರೋಡೇಕೋರರು. ಹೀಗಾಗಿ, ಬದುಕಿದೆಯಾ ಬಡ ಜೀವ ಅಂತಾ ಹಾಗೋ ಹೀಗೆ ಇದ್ದ ಬದ್ದ ಹಣ ಒಡವೆ, ಮೊಬೈಲ್ ಕೊಟ್ಟು ಬಚಾವ್ ಆಗಿ ವಾಪಸ್ ಬಂದಿದ್ರು ಬಾಂಬೆ ಟೀಂ. ಅಂದಹಾಗೆ, ಆ ಖತರ್ನಾಕ ರಾಬರಿ ಗ್ಯಾಂಗ್ ನಲ್ಲಿ ಇದ್ದವನು, ಇವತ್ತು ಎಸ್ಕೇಪ್ ಆಗಿದ್ದಾನಲ್ಲ ಪ್ರಕಾಶ್ ಸಿದ್ದಿ ಕೂಡ ಒಬ್ಬ ಅನ್ನೊ ಆರೋಪವಿದೆ.

ಪಕ್ಕಾ ವಂಚಕ ಟೀಂ..!
ಹೌದು, ಅದೊಂದು ದಟ್ಟ ಕಾಡಿನ ನಡುವೆಯೇ ನಡಿಯೊ ಬಹುದೊಡ್ಡ ವಂಚನೆಯ ಕರಾಳ ದಂಧೆ. ನಿಮಗೆ ನೆನಪಿರಬಹುದು, ಕಳೆದ ವರ್ಷ ಮುಂಡಗೋಡ ತಾಲೂಕಿನ ಮಳಗಿ ಧರ್ಮಾ ಜಲಾಶಯದಲ್ಲಿ, ದೂರದ ಚಿಕ್ಕೋಡಿಯ ವ್ಯಕ್ತಿಯೊಬ್ಬ ಅನಾಮತ್ತಾಗಿ ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದ. ಅದೇನೋ ಚೀಪ್ ರೇಟ್ ಚಿನ್ನದ ಆಸೆ ತೋರಿಸಿದ್ದ ಅದೊಂದು ವಂಚಕ ಪಡೆ ಆತನನ್ನ ಕರೆಸಿ ಲಕ್ಷ ಲಕ್ಷ ಹಣ ಲಪಟಾಯಿಸಿತ್ತು. ಅದೇ ಮಾದರಿಯಲ್ಲೇ ವಂಚಿಸುವ ಗ್ಯಾಂಗ್ ಯಲ್ಲಾಪುರ ತಾಲೂಕಿನ ಕಾಡಲ್ಲೇ ಆ್ಯಕ್ಟಿವ್ ಆಗಿದೆ. ಆದ್ರೆ ಇವ್ರ ವಂಚನೆಯ ಸ್ಟೈಲೇ ಬೇರೆ. ಕಾಡಿನ ನಡುವೆ ಇರುವ ಇವ್ರು, ಅದೇನೋ ಬ್ಲ್ಯಾಕ್ ಟರ್ಮರಿಕ್ ಅಂದ್ರೆ, ಕಪ್ಪು ಅರಿಷಿಣದ ಆಸೆ ತೋರಿಸಿ ಕೋಟಿ ಕುಳಗಳನ್ನು ಬಲೆಗೆ ಹಾಕೊತಿದಾರೆ. ಅಂದಹಾಗೆ, ಅಂತಹ ಗ್ಯಾಂಗ್ ನ ಸಕ್ರೀಯ ಕಾರ್ಯಕರ್ತನಾಗಿದ್ದವನು ಇದೇ ಪ್ರಕಾಶ್ ಸಿದ್ದಿ ಎನ್ನುವ ಆರೋಪವಿದೆ.

ಏನಿದು ಬ್ಲ್ಯಾಕ್ ಟರ್ಮರಿಕ್..?
ಅಂದಹಾಗೆ, ಬ್ಲ್ಯಾಕ್ ಟರ್ಮರಿಕ್ (ಕಪ್ಪು ಅರಿಷಿಣ) ಸದ್ಯ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆಜಿಗೇ ಕೋಟಿ ಕೋಟಿ ಬೆಲೆ ಬಾಳತ್ತೆ ಅನ್ನೊ ಮಾತುಗಳಿವೆ. ಕ್ಯಾನ್ಸರ್ ಸೇರಿದಂತೆ ಹಲವು ಮಾರಣಾಂತಿಕ‌ ಕಾಯಿಲೆಗಳಿಗೆ ಇದು ರಾಮಬಾಣವಂತೆ. ಹಲವು ಕಾಯಿಲೆಗಳಿಗೆ ಈ ಅರಿಷಿಣವನ್ನ , ಬಳಸಲಾಗ್ತಿದೆಯಂತೆ. ಹೀಗಾಗಿ, ಇದಕ್ಕೆ ಚಿನ್ನದ ಬೆಲೆ ಇದೆಯಂತೆ. ಇದನ್ನೇ ಬಂಡವಾಳ‌ ಮಾಡಿಕೊಂಡಿರೋ ಅದೊಂದು ಗ್ಯಾಂಗ್ ತಮ್ಮ ವಂಚಕ‌ ಬುದ್ದಿಗೆ ಬಳಸಿಕೊಂಡಿದೆ. ಅಸಲು, ಆ ಬ್ಲ್ಯಾಕ್ ಟರ್ಮರಿಕ್ ನಮ್ಮ‌ಕಡೆಯೆಲ್ಲ ಬೆಳೆಯೋದೇ ಇಲ್ಲವಂತೆ. ಆದ್ರೆ, ಯಲ್ಲಾಪುರದ ದಟ್ಟ ಅರಣ್ಯದಲ್ಲಿ ಅದೇಲ್ಲ ನಮಗೆ ಹೇರಳವಾಗಿ ಸಿಗುತ್ತದೆ ಅಂತೇಲ್ಲ ಪುಂಗಿಯೂದಿ, ಆಸೆಬುರುಕ ಗಿರಾಕಿಗಳನ್ನು ಸೆಳೆಯುತ್ತದೆ ಈ ಗ್ಯಾಂಗ್.

ಬಾಂಬೆಯಿಂದ..!
ಅಸಲು, ಇದೇ ಕಪ್ಪು ಅರಿಷಿಣದ ಆಸೆ ತೋರಿಸಿ ಪೋನ್ ಕಾಲ್ ಗಳಿಂದಲೇ ಬಲೆ ಬೀಸಿತ್ತು ಈ ಖತರ್ನಾಕ ಗ್ಯಾಂಗ್. ಅವತ್ತು ಈ ಗ್ಯಾಂಗ್ ನ ವಂಚಕ ಮಾತುಗಳಿಗೆ ಸವದತ್ತಿಯ ಅವನೊಬ್ಬ ತಗಲಾಕ್ಕೊಂಡಿದ್ದ. ಆತ, ಮರುಳಾಗಿ ಬೆಳಗಾವಿ ಮತ್ತೊರ್ವನ ಸಂಪರ್ಕ ಸಾಧಿಸಿದ್ದ, ಹಾಗೆ ಬೆಳಗಾವಿಯವನಿಂದ ಬಾಂಬೆಯ ವ್ಯಕ್ತಿ ಅನಾಯಾಸವಾಗಿ ವಂಚಕರು ಹೆಣೆದ ಮೋಸದ ಬಲೆಗೆ ಸಿಲುಕಿಕೊಂಡಿದ್ದ.

ಅತಿಯಾಸೆ..!
ಬ್ಲಾಕ್ ಟರ್ಮರಿಕ್ ಆಸೆಯಿಂದ ಮಹಾರಾಷ್ಟ್ರದ ಬಾಂಬೆಯಿಂದ ಬಂದಿದ್ದವನು, ಅಂತೋನಿ ದಿವ್ಯಕುಮಾರ್ ಪ್ರಾನ್ಸಿಸ್ ಪರೇರಾ ಎಂಬುವ ವ್ಯಕ್ತಿ ತನ್ನ ಗೆಳೆಯರೊಂದಿಗೆ ಮಂಚಿಕೇರಿಗೆ ಬಂದಿಳಿದಿದ್ದ. ಜೊತೆಗೆ ಬರೋಬ್ಬರಿ 9.33 ಲಕ್ಷ ಹಣ ತಂದಿದ್ದ. ಹಾಗೆ, ವಂಚಕರು ಕರೆದಲ್ಲಿಗೆ ಹೋಗಿದ್ದ. ಅವತ್ತು ಜೂನ್ 14 ರ ಮಟ ಮಟ ಮದ್ಯಾನ ದಟ್ಟ ಕಾಡಿನ ನಡುವೆ ಕರೆಸಿಕೊಂಡಿದ್ದ ವಂಚಕ ಟೀಂ, ಕಾಡಿ‌ನಲ್ಲಿ ಕಾಲಿಡುತ್ತಿದ್ದಂತೆ ಹರಿತವಾದ ಮಾರಕಾಸ್ತ್ರಗಳಿಂದ ಐವರನ್ನೂ ಭಯಭೀತಗೊಳಿಸಿತ್ತು. ಜೀವ ಉಳಿಬೇಕಂದ್ರೆ ನಿಮ್ಮಲ್ಲಿರೋ ಎಲ್ಲಾ ಹಣ, ಚಿನ್ನ, ಮೊಬೈಲ್ ಪೋನ್ ಗಳನ್ನು ಕೊಟ್ಟು ಹೋಗ್ತಾ ಇರಿ ಅಂತಾ ಅವಾಜ್ ಹಾಕಿತ್ತು. ಆ ಹೊತ್ತಲ್ಲಿ, ಆ ಬಾಂಬೆ ಟೀಂ ಗೆ ಉಸಿರು ಬಿಡಲೂ ಸಾಧ್ಯವಾಗದ ಸ್ಥಿತಿ. ಅಲುಗಾಡಲೂ ಆಗದ ಹಾಗೆ ಆ ವಂಚಕ ಟೀಂ ಆಕ್ರಮಿಸಿಕೊಂಡಿತ್ತು. ಹೀಗಾಗಿ, ಬಾಂಬೆ ಬಳಗ ತಮ್ಮಲ್ಲಿದ್ದ 9.33 ಲಕ್ಷ ಹಣ ಮತ್ತು ಲಕ್ಷ ಲಕ್ಷ ಬೆಲೆ ಬಾಳುವ ಏಳು ಐ ಪೋನ್ ಗಳನ್ನು, ಚಿನ್ನದ ಉಂಗುರುಗಳನ್ನು ಅನಾಮತ್ತಾಗಿ ಆ ಗ್ಯಾಂಗ್ ನ ಕೈಗೆ ಇಟ್ಟು ಜೀವ ಉಳಿಸಿಕೊಂಡು ಬಂದಿತ್ತು. ಬರೋಬ್ಬರಿ 14 ಲಕ್ಷ 30 ಸಾವಿರ ಮೌಲ್ಯದ ಸಂಪತ್ತು ಕಳೆದುಕೊಂಡಿತ್ತು ಆ ಬಾಂಬೆ ಪಡೆ. ಅಷ್ಟೆ..

ದೂರು ದಾಖಲಿಸಿದ್ದರು..!
ಯಾವಾಗ, ತಮ್ಮೇಲ್ಲ ಹಣ, ಚಿನ್ನ, ಮೊಬೈಲ್ ಕಸಿದುಕೊಂಡು‌ ಮೋಸ ಮಾಡಿದ್ರೊ, ಆ ಗ್ಯಾಂಗ್ ವಿರುದ್ಧ ಬಾಂಬೆಯ ಆ ಟೀಂ ಅವತ್ತೆ ಸಂಜೆ, ಅಂದ್ರೆ ಜೂನ್ 14 ರಂದು ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಿಸಿತ್ತು.‌ನಡೆದ ಅಷ್ಟೂ ಘಟನೆಯ‌ನ್ನೂ ಪೊಲೀಸರ ಎದುರು ಬಿಚ್ಚಿ ಇಟ್ಟಿತ್ತು ಬಳಗ. ಹೀಗಾಗಿ, ಕೇಸು ದಾಖಲಿಸಿಕೊಂಡು ಫಿಲ್ಡಿಗಿಳಿದಿದ್ದ ಯಲ್ಲಾಪುರ ಪಿಐ ಸುರೇಶ್ ಯಳ್ಳೂರು ಮತ್ತವರ ಪಡೆ, ಮಂಚಿಕೇರಿಯಯ ದಟ್ಟ ಅರಣ್ಯದಲ್ಲಿ ಆರೋಪಿಗಳಿಗಾಗಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದರು. ಪರಿಣಾಮ
ಮೊತೇಶ ಸಂತಾನ್ @ ಮಸಣ್ಯಾ ಸಿದ್ದಿ ಹುಲಿಯಾ ಲಕ್ಷ್ಮಣ ಸಿದ್ದಿ, ಪ್ರಕಾಶ ತಂದೆ ಕೃಷ್ಣ ಸಿದ್ಧಿ, ಪಿಲೀಪ್ ತಂದೆ ಕೃಷ್ಣ ಸಿದ್ದಿ ಎಂಬುವ ನಾಲ್ವರು ಖತರ್ನಾಕ ಕಿಲಾಡಿಗಳು ಅಂದರ್ ಆಗಿದ್ದರು. ಆದ್ರೆ, ಕೇಸ್ ನಲ್ಲಿ ಮಹಿಳೆಯರೂ ಸೇರಿ ಇನ್ನೂ ಹಲವರು ಭಾಗಿಯಾಗಿರೋ ಬಗ್ಗೆ ಖಚಿತ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಹೀಗಾಗಿ, ತಲಾಶ್ ಜಾರಿಯಲ್ಲಿದೆ. ಆದ್ರೆ, ಅಷ್ಟೊತ್ತಿಗಾಗಲೇ ಜೈಲಿಗೆ ಅಟ್ಟಿದ್ದ ಓರ್ವ ಖತರ್ನಾಕ ಕಿಲಾಡಿ ಇವತ್ತು ಪರಾರಿಯಾಗಿದ್ದಾನೆ. ಅಸಲು, ಆತ ಪರಾರಿಯಾಗಿದ್ದ ಕ್ಷಣವೇ ಎಲ್ಲವೂ ಮುಗಿದಂತೆ ಆಗಿದೆ. ಮತ್ತೆ ಆತ ಸಿಕ್ಕೋದು ಅಂದ್ರೆ ಅದೊಂದು ಪವಾಡವೇ ಆಗಬೇಕು ಅಷ್ಟೆ. ಹಾಗಿದೆ ಅವರ ಖತರ್ನಾಕ ಜಾಲ..

error: Content is protected !!