ಅರೆಬೈಲು ಘಾಟಿನಲ್ಲಿ ಥೇಟು ಸಿನಿಮಾ ಸ್ಟೈಲಿನಲ್ಲೇ ರಾಬರಿ, ಕಾರು ಅಡ್ಡಗಟ್ಟಿ ದೋಚಿದ್ದು ಎಷ್ಟು ಕೋಟಿ ಗೊತ್ತಾ..?

ಯಲ್ಲಾಪುರ ಅರೆಬೈಲ್ ಘಾಟಿನಲ್ಲಿ ಭಯಾನಕ ರಾಬರಿ ನಡೆದಿದೆ‌. ಕಾರಲ್ಲಿ ತೆರಳುತ್ತಿದ್ದವರನ್ನ ಥೇಟು ಸಿನಿಮಾ ಸ್ಟೈಲಿನಲ್ಲೇ ಅಡ್ಡಗಟ್ಟಿ ಕೋಟಿ ಕೋಟಿ ಹಣ ಎಗರಿಸಿಕೊಂಡು ಹೋಗಿದ್ದಾರೆ ಖದೀಮರು. ಜೊತೆಗೆ ಕಾರನ್ನೂ ಬಿಡದೇ ರಾಬರಿ ಮಾಡಿದ್ದಾರೆ ಆಗಂತುಕರು‌. ಹೀಗಾಗಿ, ಈ ಪ್ರಕರಣವೀಗ ಇಡೀ ಯಲ್ಲಾಪುರದ ಮಂದಿಯ ನಿದ್ದೆಗೆಡಿಸಿದೆ.

ಹೇಗಾಯ್ತು..?
ಅವತ್ತು ಅಕ್ಟೋಬರ್ ಒಂದನೇ ತಾರೀಖು, ಶನಿವಾರ ರಾತ್ರಿ ನಡೆದ ಘಟನೆ ಇದು. ಬೆಳಗಾವಿಯಿಂದ ಯಲ್ಲಾಪುರ ಮಾರ್ಗವಾಗಿ ಕೇರಳಕ್ಕೆ ಚಿನ್ನ ಖರೀದಿಗಾಗಿ ಹೊರಟಿದ್ದವರನ್ನು ಅನಾಮತ್ತಾಗಿ ರಾಬರಿ ಮಾಡಲಾಗಿದೆ. ಚಿನ್ನ ಖರೀದಿಗಾಗಿ ಸ್ವಿಪ್ಟ್ ಕಾರಲ್ಲಿ ತೆರಳುತ್ತಿದ್ದ ಬೆಳಗಾವಿಯ ಆ ಇಬ್ಬರೂ ಯಲ್ಲಾಪುರದ ಅರೆಬೈಲ್ ಘಾಟಿನಲ್ಲಿ ಬರುತ್ತಿದ್ದಂತೆ, ಥೇಟು ಸಿನಿಮಾ ಸ್ಟೈಲಿನಲ್ಲೇ ಎರಡು ಕಾರುಗಳಲ್ಲಿ ಬಂದು ಅಡ್ಡ ಹಾಕಿದ್ದಾರೆ ಖದೀಮರು. ತಕ್ಷಣವೇ ಆರೇಳು ಜನ ದರೋಡೆಕೋರರ ತಂಡ ಏಕಾಏಕಿ ಕಾರಲ್ಲಿದ್ದವರನ್ನು ಹೊರಗೆಳೆದು ಹಲ್ಲೆ ಮಾಡಿದೆ. ಹೀಗಾಗಿ, ಅಕ್ಷರಶಃ ದರೋಡೆಕೋರರ ದಾಳಿಗೆ ನಲುಗಿ ಹೋಗಿದೆ “ಚಿನ್ನದ ಪಡೆ”.. ಹೀಗಾಗಿ, ಬದುಕಿದರೆ ಸಾಕು ಅಂತಾ ಶರಣಾಗಿದ್ದಾರೆ ಹಣವಂತರು. ತಕ್ಷಣವೇ ಕಾರಲ್ಲಿದ್ದ ಬರೋಬ್ಬರಿ 2 ಕೋಟಿ 11 ಲಕ್ಷದ 86 ಸಾವಿರ ರೂಪಾಯಿ ಹಣ, ಕಾರು ಸಮೇತ ಎಗರಿಸಿ ಪರಾರಿಯಾಗಿದ್ದಾರಂತೆ. ಜೊತೆಗೆ ಆ ಇಬ್ಬರ ಮೊಬೈಲ್ ಪೋನ್ ಗಳನ್ನೂ ಕೂಡ ಬಿಡದೇ ದೋಚಿದ್ದಾರಂತೆ ಆಗಂತುಕರು. ಹೀಗಾಗಿ, ಆ ಇಬ್ಬರೂ ನಿನ್ನೆ ಅಂದ್ರೆ, ಆಯುಧ ಪೂಜೆಯ ದಿನ ಯಲ್ಲಾಪುರ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದಾರೆ ಅನ್ನೊ ಮಾಹಿತಿ ಲಭ್ಯವಾಗಿದೆ.

ಸಂಗ್ರಹ ಚಿತ್ರ

ಪ್ರೊಫೆಶನಲ್ ಗ್ಯಾಂಗ್..?
ಅಸಲು, ಹೀಗೆ ನಿರ್ಭಿಡೆಯಿಂದ ಕರಾರುವಾಕ್ ರಾಬರಿ ಮಾಡೋದಂದ್ರೆ ಸುಲಭದ ಮಾತೇನಲ್ಲ. ಅಕ್ಷರಶಃ ಪ್ಲ್ಯಾನ್ಡ್ ಆಗಿನೇ ಮಾಡಿರೋ ಈ ದರೋಡೆ ಕೇಸ್ ನಲ್ಲಿ ಬಹುಶಃ ಪ್ರೊಫೆಶನಲ್ ಖದೀಮರೇ ಭಾಗಿಯಾಗಿರೋ ಸಾಧ್ಯತೆ ಹೆಚ್ಚಿದೆ. ಹಾಗೆನೋಡಿದ್ರೆ, ಬೆಳಗಾವಿಯಿಂದ ಕಾರಲ್ಲಿ ಬಂದ “ಚಿನ್ನದ ಪಡೆ”ಯ ಸಂಪೂರ್ಣ ಹಿಸ್ಟರಿ ಗೊತ್ತಿರೋರೇ ಇಂತಹ ಭಯಾನಕ ಸ್ಕೆಚ್ ಹಾಕಿದ್ದಾರೆ ಅನ್ನೋ ಅನುಮಾನ ಶುರುವಾಗಿದೆ. ಯಾಕಂದ್ರೆ, ಕರಾರುವಾಕ್ಕಾಗಿ ಕಾರನ್ನು ಬೆನ್ನತ್ತಿದ್ದ ಆ ಟೀಂ ದಟ್ಟ ಕಾಡಿನ ನಡುವೆ, ಮೊಬೈಲ್ ನೆಟವರ್ಕ್ ಇರದ ಜಾಗದಲ್ಲೇ ಬಂದು ಸಲೀಸಾಗಿ ದರೋಡೆ ಮಾಡಿಕೊಂಡು ಹೋಗಿದೆ ಅಂದ್ರೆ ಸಾಮಾನ್ಯ ಮಾತಾ..?

ಲೋಕಲ್ ಗ್ಯಾಂಗ್..?
ನಿಜ ಅಂದ್ರೆ, ಯಲ್ಲಾಪುರ ತಾಲೂಕಿನಲ್ಲೂ ಇಂತದ್ದೇ ರಾಬರಿ ಮಾಡುವ ಅದೊಂದು ಪಡೆ ಆ್ಯಕ್ಟಿವ್ ಆಗಿದೆ. ಈಗ್ಗೆ ಕೆಲವೇ ದಿನಗಳ ಹಿಂದೆ ಕಪ್ಪು ಅರಿಷಿಣದ ಹೆಸರಲ್ಲಿ ವಂಚಿಸಿ ರಾಬರಿ ಮಾಡಿದ್ದ “ಲೋಕಲ್” ಟೀಂ ಪೊಲೀಸರ ಬಲೆಗೆ ಬಿದ್ದಿತ್ತು. ಯಲ್ಲಾಪುರ ತಾಲೂಕಿನ ಅದೊಂದು ಭಾಗದಲ್ಲಿ ಈ ಖತರ್ನಾಕ ಪಡೆ ಇವತ್ತಿಗೂ ಕಾಡಲ್ಲೇ ಕುಳಿತು ಭಯಾನಕ ಸ್ಕೆಚ್ ಹಾಕುವ ಚಾಳಿ ಮುಂದುವರೆಸಿದೆ. ಹೀಗಾಗಿ, ಈ ಗ್ಯಾಂಗ್ ಮೇಲೆ ಪೊಲೀಸರ ಹದ್ದಿನ ಕಣ್ಣಿದೆ. ಇನ್ನೇನು ಕೆಲವೇ ದಿನಗಳಲ್ಲಿ ಆ ಗ್ಯಾಂಗ್ ನ ಹೆಡೆಮುರಿ ಕಟ್ಟೋದೂ ಕನ್ಪರ್ಮ್ ಆಗಿದೆ‌ ಅದು ಒತ್ತಟ್ಟಿಗಿರಲಿ..

ಸದ್ಯ ಯಲ್ಲಾಪುರದ ಅರೆಬೈಲು ಘಾಟಿನಲ್ಲಿ ನಡೆದಿರೋ ಭಯಾನಕ ರಾಬರಿಯ ಹಿಂದೆ ಲೋಕಲ್ “ಸ್ಕೆಚ್” ಏನಾದ್ರೂ ವರ್ಕೌಟ್ ಆಗಿದೆಯಾ..? ಮೇಲ್ನೋಟಕ್ಕೆ ಈ ಕೇಸ್ ನೋಡಿದ್ರೆ ಅಂತಹ ಯಾವ ಅನುಮಾನ ಬರ್ತಿಲ್ಲ ಅನ್ನೋದು ಖಾಕಿ ಮೂಲಗಳ ಮಾತು. ಒಟ್ನಲ್ಲಿ, ಯಲ್ಲಾಪುರ ಪಿಐ ಸುರೇಶ್ ಯಳ್ಳೂರ್ ಮತ್ತವರ ಪಡೆ ದರೋಡೆ ಕೇಸ್ ನ ಬೇಧಿಸಲು ಸನ್ನದ್ಧವಾಗ್ತಿದೆ. ಮುಂದೇನಾಗತ್ತೊ ಕಾಯಬೇಕಿದೆ‌.

*************

error: Content is protected !!