ಮುಂಡಗೋಡ-ಯಲ್ಲಾಪುರ ಗಡಿಯ ಕಾಡಲ್ಲಿದೆ ನಟೋರಿಯಸ್ ಗ್ಯಾಂಗ್..! ಎಚ್ಚರ ತಪ್ಪಿದ್ರೆ ‌ನಿಮಗೂ ಹಾಕ್ತಾರೆ ಗಾಳ..!

ಯಲ್ಲಾಪುರ ಪೊಲೀಸರು ಕೊ‌ಂಚ ನಿಟ್ಟುಸಿರು ಬಿಟ್ಟಿದ್ದಾರೆ. ಇಡೀ ಯಲ್ಲಾಪುರ ತಾಲೂಕಿನ ಜನರ ನಿದ್ದೆಗೆಡಿಸಿದ್ದ ಅದೊಂದು ನಟೋರಿಯಸ್ ದರೋಡೆಕೋರರ ಭಯಾನಕ ಕೃತ್ಯ ಈಗಷ್ಟೇ ಅರ್ಧ ಬಯಲಾದಂತಾಗಿದೆ. ಬರೋಬ್ಬರಿ ಒಂದೂವರೇ ತಿಂಗಳು, ಹಗಲು ರಾತ್ರಿ ಕಾರ್ಯಾಚರಣೆ ನಡೆಸಿ, ಅರ್ದದಷ್ಟು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ ಯಲ್ಲಾಪುರ ಪೊಲೀಸರು. ಅಸಲು, ಯಲ್ಲಾಪುರದ ದಕ್ಷ ಪಿಐ ಸುರೇಶ್ ಯಳ್ಳೂರು ಹಾಗು ಮತ್ತವರ ಪಡೆಗೆ ಅಕ್ಷರಶಃ ನಿದ್ದೆ ಕಸಿದುಕೊಂಡಿದ್ದ ಕೇಸ್ ಇದು‌.

ಅದು ಭಯಾನಕ ಗ್ರಾಮ..!
ಇಲ್ಲಿ ಈ ಸ್ಟೋರಿ ಹೇಳೋಕಿಂತ ಮುಂಚೆ ಈ ಗ್ರಾಮದ ಬಗ್ಗೆ ಹೇಳಲೇ ಬೇಕು. ಅಂದಹಾಗೆ,
ಯಲ್ಲಾಪುರ ತಾಲೂಕಿನಲ್ಲಿ ಬಹುತೇಕ ಈ ಊರಿನ ಹೆಸ್ರು ಕೇಳಿದ್ರೆ ಬೆಚ್ಚಿ ಬೀಳೋ ಅದೇಷ್ಟೋ ಜನರಿದ್ದಾರೆ. ಯಲ್ಲಾಪುರ ತಾಲೂಕಿನ ಮಂಚಿಕೇರಿಯಿಂದ ಸರಿ ಸುಮಾರು 10 ಕಿ.ಮೀ ಅಂತರದಲ್ಲಿರೋ ಈ ಗ್ರಾಮ, ಮುಂಡಗೋಡ ತಾಲೂಕಿನ ಸುಳ್ಳಳ್ಳಿಯಿಂದ ಕೇವಲ 6-7 ಕೀ.ಮೀ ದೂರದಲ್ಲಿದೆ. ಅಸಲು, ಈ ಗ್ರಾಮದಲ್ಲಿರೋದೇ ಕೇವಲ 9 ರಿಂದ 10 ಮನೆಗಳಂತೆ. ಆದ್ರೆ, ಆ ಮನೆಗಳಲ್ಲಿ ನಡೆಯುವ ಭಯಾನಕ ಸ್ಕೆಚ್ ಗಳು ಒಂದೆರಡಲ್ಲ ಅಂತಿದೆ ಪೊಲೀಸ್ ರೆಕಾರ್ಡ್. ಯಾಕಂದ್ರೆ, ಇದೇ ಗ್ರಾಮದಲ್ಲಿದ್ದ ಅವನೊಬ್ಬ ನಟೋರಿಯಸ್ ಈಗ ಬದುಕಿ ಉಳಿದಿಲ್ಲ. ಆದ್ರೆ, ಆತನ ಸಂತಾನಗಳು ಇವತ್ತಿಗೂ ಈ ಭಾಗದಲ್ಲಿ ಇನ್ನಿಲ್ಲದ ಕ್ರೈಮುಗಳಿಗೆ ಹೆಸರುವಾಸಿಯಾಗಿದೆ. ಪೊಲೀಸರಿಗೆ ಸವಾಲಾಗಿದೆ ಅನ್ನೋ ಪುಕಾರು ಇಡೀ ತಾಲೂಕಿನೆಲ್ಲೆಡೆ ಇದೆ.

ಅದ್ರಂತೆ ಮುಂಡಗೋಡ ತಾಲೂಕಿನ ಸುಳ್ಳಳ್ಳಿ ಭಾಗದಲ್ಲೂ ಈ ಗ್ರಾಮದ ಬಗ್ಗೆ ಇನ್ನಿಲ್ಲದ ಕತೆಗಳು ಇವತ್ತಿಗೂ ಚಾಲ್ತಿಯಲ್ಲಿವೆ. ಅಂದಹಾಗೆ, ಇದನ್ನೇಲ್ಲ ಇಲ್ಲಿ ಯಾಕೆ ಹೇಳ್ತಿದಿನಿ ಅಂದ್ರೆ ನಾನೀಗ ಹೇಳ್ತಿರೋ ಈ ಭಯಾನಕ ಸತ್ಯಕತೆ ಹುಟ್ಟಿಕೊಳ್ಳೊದೇ ಈ ಗ್ರಾಮದ ಅಂಗಳದಿಂದ. ಅದೊಂದು ಭಯಾನಕ ಗ್ಯಾಂಗ್ ನ ಅಷ್ಟೂ ಸ್ಕೆಚ್ ಗಳು ಗರಿಗೆದರೋದೇ ಈ ಹಳ್ಳಿಯ ಪಡಸಾಲೆಯಿಂದ.

ಅವತ್ತು ಜೂನ್ 14..
ಯಸ್, ಅವತ್ತು ಜೂನ್ 14. ದೂರದ ಬಾಂಬೆಯಿಂದ ಎರಡು ಕಾರುಗಳಲ್ಲಿ ಐದು ಜನರ ತಂಡ ಯಲ್ಲಾಪುರ ತಾಲೂಕಿನ ಮಂಚಿಕೆರಿಗೆ ಬಂದಿಳಿದಿತ್ತು. ಹಾಗೆ ಬಂದಿಳಿದಿತ್ತು ಅನ್ನೋದಕ್ಕಿಂತ, ಅವ್ರನ್ನ ಬರುವಂತೆ ಮಾಡಿತ್ತು ಅದೊಂದು ನಟೋರಿಯಸ್ ಗ್ಯಾಂಗ್. ಯಲ್ಲಾಪುರ ಮತ್ತು‌ ಮುಂಡಗೋಡ ತಾಲೂಕಿನ ಗಡಿಯ ಜಾಗವದು. ಸಿಡ್ಲಗುಂಡಿ ಸಮೀಪದ ಬಿಳಕಿ ಬಳಿಯ ದಟ್ಟ ಕಾಡು. ಅಕ್ಷರಶಃ ನಿರ್ಜನ ಪ್ರದೇಶ. ಅವತ್ತು, ಬಾಂಬೆಯಿಂದ ಬಂದಿದ್ದ ಐವರು ಇಲ್ಲಿಯೇ ತಮ್ಮೇಲ್ಲ ಹಣ, ಬಂಗಾರ, ಲಕ್ಷಾಂತರ ಬೆಲೆಯ ಮೊಬೈಲ್ ಪೋನ್ ಗಳನ್ನು ಅನಾಮತ್ತಾಗಿ ಆಗಂತುಕರ ಕೈಗೆ ಚೆಲ್ಲಿ ಹೋಗಬೇಕಾಗಿತ್ತು. ಯಾಕಂದ್ರೆ, ಆ ಕ್ಷಣ ಆ ಐವರಿಗೂ ಅಂತಹದ್ದೊಂದು ಭಯಾನಕ ಸಂದರ್ಭ ತಂದಿಟ್ಟಿದ್ದರು ಆಗಂತುಕರು. ಕಾಡಿನ ನಟ್ಟನಡುವೆ ಕರೆದೊಯ್ದು ಲಕ್ಷ ಲಕ್ಷ ಹಣ ಎಗರಿಸಿ ಬಿಟ್ಟಿದ್ದರು ದರೋಡೇಕೋರರು. ಹೀಗಾಗಿ, ಬದುಕಿದೆಯಾ ಬಡ ಜೀವ ಅಂತಾ ಹಾಗೋ ಹೀಗೆ ಇದ್ದ ಬದ್ದ ಹಣ ಒಡವೆ, ಮೊಬೈಲ್ ಕೊಟ್ಟು ಬಚಾವ್ ಆಗಿ ವಾಪಸ್ ಬಂದಿದ್ರು ಬಾಂಬೆ ಟೀಂ. ಆದ್ರೆ, ಏಕಾಏಕಿ ಇದೇಲ್ಲ ನಡೆದದ್ದಾದ್ರೂ ಹೇಗೆ..? ಬಾಂಬೆಯಿಂದ ಅವ್ರೇಲ್ಲ ಇಲ್ಲಿಗ್ಯಾಕೆ ಬಂದ್ರು ಅಂತೇಲ್ಲ ನಿಮಗೆ ಪ್ರಶ್ನೆ ಕಾಡ್ತಿದೆಯಲ್ವಾ..? ಇಲ್ಲಿದೆ ನೋಡಿ ಅದರ ಅಸಲೀ ಸ್ಟೋರಿ.

ಪಕ್ಕಾ ವಂಚಕ ಟೀಂ..!
ಹೌದು, ಅದೊಂದು ದಟ್ಟ ಕಾಡಿನ ನಡುವೆಯೇ ನಡಿಯೊ ಬಹುದೊಡ್ಡ ವಂಚನೆಯ ಕರಾಳ ದಂಧೆ. ನಿಮಗೆ ನೆನಪಿರಬಹುದು, ಕಳೆದ ವರ್ಷ ಮುಂಡಗೋಡ ತಾಲೂಕಿನ ಮಳಗಿ ಧರ್ಮಾ ಜಲಾಶಯದಲ್ಲಿ, ದೂರದ ಚಿಕ್ಕೋಡಿಯ ವ್ಯಕ್ತಿಯೊಬ್ಬ ಅನಾಮತ್ತಾಗಿ ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದ. ಅದೇನೋ ಚೀಪ್ ರೇಟ್ ಚಿನ್ನದ ಆಸೆ ತೋರಿಸಿದ್ದ ಅದೊಂದು ವಂಚಕ ಪಡೆ ಆತನನ್ನ ಕರೆಸಿ ಲಕ್ಷ ಲಕ್ಷ ಹಣ ಲಪಟಾಯಿಸಿತ್ತು. ಅದೇ ಮಾದರಿಯಲ್ಲೇ ವಂಚಿಸುವ ಗ್ಯಾಂಗ್ ಯಲ್ಲಾಪುರ ತಾಲೂಕಿನ ಮಂಚಿಕೇರಿ ಸಮೀಪದ ಕಾಡಲ್ಲೇ ಆ್ಯಕ್ಟಿವ್ ಆಗಿದೆ. ಆದ್ರೆ ಇವ್ರ ವಂಚನೆಯ ಸ್ಟೈಲೇ ಬೇರೆ. ಕಾಡಿನ ನಡುವೆ ಇರುವ ಇವ್ರು, ಅದೇನೋ ಬ್ಲ್ಯಾಕ್ ಟರ್ಮರಿಕ್ ಅಂದ್ರೆ, ಕಪ್ಪು ಅರಿಷಿಣದ ಆಸೆ ತೋರಿಸಿ ಕೋಟಿ ಕುಳಗಳನ್ನು ಬಲೆಗೆ ಹಾಕೊತಿದಾರೆ.

ಏನಿದು ಬ್ಲ್ಯಾಕ್ ಟರ್ಮರಿಕ್..?
ಅಂದಹಾಗೆ, ಬ್ಲ್ಯಾಕ್ ಟರ್ಮರಿಕ್ (ಕಪ್ಪು ಅರಿಷಿಣ) ಸದ್ಯ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆಜಿಗೇ ಕೋಟಿ ಕೋಟಿ ಬೆಲೆ ಬಾಳತ್ತೆ ಅನ್ನೊ ಮಾತುಗಳಿವೆ. ಕ್ಯಾನ್ಸರ್ ಸೇರಿದಂತೆ ಹಲವು ಮಾರಣಾಂತಿಕ‌ ಕಾಯಿಲೆಗಳಿಗೆ ಇದು ರಾಮಬಾಣವಂತೆ. ಹಲವು ಕಾಯಿಲೆಗಳಿಗೆ ಈ ಅರಿಷಿಣವನ್ನ , ಬಳಸಲಾಗ್ತಿದೆಯಂತೆ. ಹೀಗಾಗಿ, ಇದಕ್ಕೆ ಚಿನ್ನದ ಬೆಲೆ ಇದೆಯಂತೆ. ಇದನ್ನೇ ಬಂಡವಾಳ‌ ಮಾಡಿಕೊಂಡಿರೋ ಅದೊಂದು ಗ್ಯಾಂಗ್ ತಮ್ಮ ವಂಚಕ‌ ಬುದ್ದಿಗೆ ಬಳಸಿಕೊಂಡಿದೆ. ಅಸಲು, ಆ ಬ್ಲ್ಯಾಕ್ ಟರ್ಮರಿಕ್ ನಮ್ಮ‌ಕಡೆಯೆಲ್ಲ ಬೆಳೆಯೋದೇ ಇಲ್ಲವಂತೆ. ಆದ್ರೆ, ಯಲ್ಲಾಪುರದ ದಟ್ಟ ಅರಣ್ಯದಲ್ಲಿ ಅದೇಲ್ಲ ನಮಗೆ ಹೇರಳವಾಗಿ ಸಿಗುತ್ತದೆ ಅಂತೇಲ್ಲ ಪುಂಗಿಯೂದಿ, ಆಸೆಬುರುಕ ಗಿರಾಕಿಗಳನ್ನು ಸೆಳೆಯುತ್ತದೆ ಈ ಗ್ಯಾಂಗ್.

ಬಾಂಬೆಯಿಂದ..!
ಅಸಲು, ಇದೇ ಕಪ್ಪು ಅರಿಷಿಣದ ಆಸೆ ತೋರಿಸಿ ಪೋನ್ ಕಾಲ್ ಗಳಿಂದಲೇ ಬಲೆ ಬೀಸಿತ್ತು ಈ ಖತರ್ನಾಕ ಗ್ಯಾಂಗ್. ಅವತ್ತು ಈ ಗ್ಯಾಂಗ್ ನ ವಂಚಕ ಮಾತುಗಳಿಗೆ ಸವದತ್ತಿಯ ಅವನೊಬ್ಬ ತಗಲಾಕ್ಕೊಂಡಿದ್ದ. ಆತ, ಮರುಳಾಗಿ ಬೆಳಗಾವಿ ಮತ್ತೊರ್ವನ ಸಂಪರ್ಕ ಸಾಧಿಸಿದ್ದ, ಹಾಗೆ ಬೆಳಗಾವಿಯವನಿಂದ ಬಾಂಬೆಯ ವ್ಯಕ್ತಿ ಅನಾಯಾಸವಾಗಿ ವಂಚಕರು ಹೆಣೆದ ಮೋಸದ ಬಲೆಗೆ ಸಿಲುಕಿಕೊಂಡಿದ್ದ.

ಅತಿಯಾಸೆ..!
ಬ್ಲಾಕ್ ಟರ್ಮರಿಕ್ ಆಸೆಯಿಂದ ಮಹಾರಾಷ್ಟ್ರದ ಬಾಂಬೆಯಿಂದ ಬಂದಿದ್ದವನು, ಅಂತೋನಿ ದಿವ್ಯಕುಮಾರ್ ಪ್ರಾನ್ಸಿಸ್ ಪರೇರಾ ಎಂಬುವ ವ್ಯಕ್ತಿ ತನ್ನ ಗೆಳೆಯರೊಂದಿಗೆ ಮಂಚಿಕೇರಿಗೆ ಬಂದಿಳಿದಿದ್ದ. ಜೊತೆಗೆ ಬರೋಬ್ಬರಿ 9.33 ಲಕ್ಷ ಹಣ ತಂದಿದ್ದ. ಹಾಗೆ, ವಂಚಕರು ಕರೆದಲ್ಲಿಗೆ ಹೋಗಿದ್ದ. ಅವತ್ತು ಜೂನ್ 14 ರ ಮಟ ಮಟ ಮದ್ಯಾನ ದಟ್ಟ ಕಾಡಿನ ನಡುವೆ ಕರೆಸಿಕೊಂಡಿದ್ದ ವಂಚಕ ಟೀಂ, ಕಾಡಿ‌ನಲ್ಲಿ ಕಾಲಿಡುತ್ತಿದ್ದಂತೆ ಹರಿತವಾದ ಮಾರಕಾಸ್ತ್ರಗಳಿಂದ ಐವರನ್ನೂ ಭಯಭೀತಗೊಳಿಸಿತ್ತು. ಜೀವ ಉಳಿಬೇಕಂದ್ರೆ ನಿಮ್ಮಲ್ಲಿರೋ ಎಲ್ಲಾ ಹಣ, ಚಿನ್ನ, ಮೊಬೈಲ್ ಪೋನ್ ಗಳನ್ನು ಕೊಟ್ಟು ಹೋಗ್ತಾ ಇರಿ ಅಂತಾ ಅವಾಜ್ ಹಾಕಿತ್ತು. ಆ ಹೊತ್ತಲ್ಲಿ, ಆ ಬಾಂಬೆ ಟೀಂ ಗೆ ಉಸಿರು ಬಿಡಲೂ ಸಾಧ್ಯವಾಗದ ಸ್ಥಿತಿ. ಅಲುಗಾಡಲೂ ಆಗದ ಹಾಗೆ ಆ ವಂಚಕ ಟೀಂ ಆಕ್ರಮಿಸಿಕೊಂಡಿತ್ತು. ಹೀಗಾಗಿ, ಬಾಂಬೆ ಬಳಗ ತಮ್ಮಲ್ಲಿದ್ದ 9.33 ಲಕ್ಷ ಹಣ ಮತ್ತು ಲಕ್ಷ ಲಕ್ಷ ಬೆಲೆ ಬಾಳುವ ಏಳು ಐ ಪೋನ್ ಗಳನ್ನು, ಚಿನ್ನದ ಉಂಗುರುಗಳನ್ನು ಅನಾಮತ್ತಾಗಿ ಆ ಗ್ಯಾಂಗ್ ನ ಕೈಗೆ ಇಟ್ಟು ಜೀವ ಉಳಿಸಿಕೊಂಡು ಬಂದಿತ್ತು. ಬರೋಬ್ಬರಿ 14 ಲಕ್ಷ 30 ಸಾವಿರ ಮೌಲ್ಯದ ಸಂಪತ್ತು ಕಳೆದುಕೊಂಡಿತ್ತು ಆ ಬಾಂಬೆ ಪಡೆ. ಅಷ್ಟೆ..

ದೂರು..!
ಯಾವಾಗ, ತಮ್ಮೇಲ್ಲ ಹಣ, ಚಿನ್ನ, ಮೊಬೈಲ್ ಕಸಿದುಕೊಂಡು‌ ಮೋಸ ಮಾಡಿದ್ರೊ, ಆ ಗ್ಯಾಂಗ್ ವಿರುದ್ಧ ಬಾಂಬೆಯ ಆ ಟೀಂ ಅವತ್ತೆ ಸಂಜೆ, ಅಂದ್ರೆ ಜೂನ್ 14 ರಂದು ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಿಸಿತ್ತು.‌ನಡೆದ ಅಷ್ಟೂ ಘಟನೆಯ‌ನ್ನೂ ಪೊಲೀಸರ ಎದುರು ಬಿಚ್ಚಿ ಇಟ್ಟಿತ್ತು ಬಳಗ. ಹೀಗಾಗಿ, ಕೇಸು ದಾಖಲಿಸಿಕೊಂಡು ಫಿಲ್ಡಿಗಿಳಿದಿದ್ದ ಯಲ್ಲಾಪುರ ಪಿಐ ಸುರೇಶ್ ಯಳ್ಳೂರು ಮತ್ತವರ ಪಡೆ, ಮಂಚಿಕೇರಿಯಯ ದಟ್ಟ ಅರಣ್ಯದಲ್ಲಿ ಆರೋಪಿಗಳಿಗಾಗಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದರು. ಪರಿಣಾಮ ಬರೋಬ್ಬರಿ ಒಂದೂವರೆ ತಿಂಗಳ ನಂತರ ನಾಲ್ವರು ಖತರ್ನಾಕ ಕಿಲಾಡಿಗಳು ತಗಲಾಕ್ಕೊಂಡಿದ್ದಾರೆ. ಮೊತೇಶ ಸಂತಾನ್ @ ಮಸಣ್ಯಾ ಸಿದ್ದಿ, ಹುಲಿಯಾ ಲಕ್ಷ್ಮಣ ಸಿದ್ದಿ, ಪ್ರಕಾಶ ತಂದೆ ಕೃಷ್ಣ ಸಿದ್ಧಿ, ಪಿಲೀಪ್ ತಂದೆ ಕೃಷ್ಣ ಸಿದ್ದಿ ಎಂಬುವ ನಾಲ್ವರು ಖತರ್ನಾಕ ಕಿಲಾಡಿಗಳು ಅಂದರ್ ಆಗಿದ್ದಾರೆ. ಆದ್ರೆ, ಕೇಸ್ ನಲ್ಲಿ ಮಹಿಳೆಯರೂ ಸೇರಿ ಇನ್ನೂ ಹಲವರು ಭಾಗಿಯಾಗಿರೋ ಬಗ್ಗೆ ಖಚಿತ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ತಲಾಶ್ ಜಾರಿಯಲ್ಲಿದೆ.

ಕಾಡಲ್ಲೇ ಅಡಗಿದ್ದಾರೆ ಕಳ್ಳರು..!
ಅಸಲು, ಹಾಗೆ ರಾಬರಿ‌ ಮಾಡಿಕೊಂಡು ಲಕ್ಷ ಲಕ್ಷ ಹಣ ಕೈಗೆ ಸಿಕ್ಕಿದ್ದೇ ತಡ, ಆ ಖತರ್ನಾಕ ಗ್ಯಾಂಗ್ ಅಕ್ಷರಶಃ ದಟ್ಟ ಕಾಡಿನಲ್ಲಿ ತಲೆ‌ಮರೆಸಿಕೊಂಡಿರತ್ತೆ. ಹೀಗಾಗಿ, ಯಲ್ಲಾಪುರ ಪೊಲೀಸರಿಗೆ ಆ ಗ್ಯಾಂಗ್ ಬೆನ್ನತ್ತುವುದೇ ಸವಾಲಾಗಿ ಪರಿಣಮಿಸಿತ್ತು. ಆದ್ರೂ ಬಿಡದ ಖಾಕಿ ಪಡೆ ಸದ್ಯ ನಾಲ್ವರನ್ನು ಎಳೆದು ತಂದಿದೆ. ಇ‌ನ್ನೂ ಹಲವರಿಗಾಗಿ ಶೋಧ ಚಾಲ್ತಿಯಲ್ಲಿದೆ.

ಉತ್ತರ ಕನ್ನಡ ಎಸ್ಪಿ ಡಾ. ಸುಮನಾ ಪೆನ್ನೇಕರ,
ಹೆಚ್ಚುವರಿ ಪೊಲೀಸ ಅಧೀಕ್ಷಕ ಎಸ್. ಬದರಿನಾಥ್, ಶಿರಸಿ ಡಿವೈಎಸ್ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ. ಪಿಐ ಸುರೇಶ ಯಳ್ಳೂರ, ನೇತ್ರತ್ವದಲ್ಲಿ ಪಿಎಸ್ಐ ಅಮೀನಸಾಬ್ ಎಮ್,ಅತ್ತಾರ, ಎ.ಎಸ್.ಐ ವಿಠಲ ಮಾಲವಾಡಕರ ಹಾಗೂ ಸಿಬ್ಬಂದಿಯವರಾದ, ಬಸವರಾಜ ಹಗರಿ, ಮಹ್ಮದ ಶಪೀ, ಗಜಾನನ, ಬಸವರಾಜ ಮಳಗನಕೊಪ್ಪ, ಚನ್ನಕೇಶವ, ಪರಶುರಾಮ ಕಾಳೆ, ಅಮರ, ಪರಶುರಾಮ ದೊಮ್ಮನಿ, ನಂದೀಶ, ಸುರೇಶ ಕಂಟ್ರಾಕ್ಟರ್. ಹಾಗೂ ಮಹಿಳಾ ಸಿಬ್ಬಂದಿಯವರಾದ ಶೋಭಾ ನಾಯ್ಕ, ಸೀಮಾ ಗೌಡ ಕಾರ್ಯಾಚರಣೆಯಲ್ಲಿದ್ದರು.

error: Content is protected !!