ಮುಂಡಗೋಡ ಬಿಜೆಪಿಯಲ್ಲಿ “ಲೋಕಲ್” ನಿರ್ಲಕ್ಷಕ್ಕೆ ನಿತ್ಯವೂ ಕತ್ತಲರಾತ್ರಿ..! ಒಳಗೊಳಗಿನ “ಕೆಂಡ” ಕ್ಕೆ ಮೈ ಛಳಿಬಿಟ್ಟು ಕೂತಿದೆ ಕಾಂಗ್ರೆಸ್..!!

ಮುಂಡಗೋಡ ತಾಲೂಕಿನಲ್ಲಿ ಬಿಜೆಪಿ ಇಷ್ಟರ ಮಟ್ಟಿಗೆ ಕುಬ್ಜವಾಯ್ತಾ..? ಅದ್ರಲ್ಲೂ ಸಚಿವ ಹೆಬ್ಬಾರ್ ಸಾಹೇಬ್ರು ಇಂತಹ ರಾಜಕಾರಣಕ್ಕೆ ಜೋತುಬಿದ್ರಾ..? ನಿಜಕ್ಕೂ ನಿಬ್ಬೆರಗಾಗಿ ಯೋಚಿಸ್ತಿದಾರೆ ಜನ. ಯಾಕಂದ್ರೆ, ವಾಸ್ತವ ಸ್ಥಿತಿಯನ್ನು ಒಪ್ಪಿಕೊಳ್ಳದೇ, ಜಿದ್ದಿನ ರಾಜಕೀಯಕ್ಕೆ ಬಂದು ನಿಂತಿರೋದಾದ್ರೂ ಯಾತಕ್ಕೆ ಅನ್ನೋ ಪ್ರಶ್ನೆ ಸಹಜವಾಗೇ ಗುಲ್ಲೆಬ್ಬಿಸಿದೆ. ಅದಕ್ಕೆ ಕಾರಣ, ಬಡ್ಡಿಗೇರಿಯ ಮುಗ್ದ ಕಾರ್ಯಕರ್ತರು ಕಾಂಗ್ರೆಸ್ ಶಾಲು ಹೊದ್ದಿಸಿಕೊಂಡು “ಕೈ” ಹಿಡಿದಿದ್ದರು ಅನ್ನೋ ಬೃಹನ್ ಕತೆ. ಆನಂತರ, ಅವ್ರನ್ನ ಮತ್ತೆ ಕರೆದು, ಬಿಜೆಪಿ ಶಾಲು ಹೊದಿಸಿ ಅದನ್ನೇ ಬಹುದೋಡ್ಡ ಸಾಧನೆ ಅಂತಾ ಬೀಗ್ತಿರೋ ಹೆಬ್ಬಾರ ಬಳಗ. ಮತ್ತೆ ಅದಕ್ಕೊಂದು ಪತ್ರಿಕಾ ಪ್ರಕಟಣೆ..! 

ಇಲ್ಲಿ, ಅಸಲೀ ಕತೆಯೇ ಬೇರೆ ಇದೆ‌. ಸಣ್ಣ ಸಂಗತಿಗಳಲ್ಲಿ ಸಂತೃಪ್ತಿ ಪಡೆಯುವ ಬದಲು, ಇಡೀ ಕ್ಷೇತ್ರದಲ್ಲಿ, ಅದ್ರಲ್ಲೂ ಮುಂಡಗೋಡ ಬಿಜೆಪಿಯಲ್ಲಿ ಒಳಗೊಳಗೆ ಏನ್ ನಡೀತಿದೆ ಅನ್ನೋದರ ಒಂದಿಷ್ಟು ಅಸಲೀ ಸಂಗತಿಗಳ ಕಡೆ ಸಾಹೇಬ್ರು ಗಮನ ಕೊಡಬೇಕಿದೆ‌.

ಯುವ ಶಕ್ತಿಗೆ ಬೆಲೆ ಕೊಡಿ..!
ಅಸಲು, ಮುಂಡಗೋಡ ಬಿಜೆಪಿಯಲ್ಲಿ ಈಗ ಎಲ್ಲವೂ ಸರಿಯಿಲ್ಲ. ಒಳಗೊಳಗೇ ಕೊತ ಕೊತ ಕುದಿಯುತ್ತಿದೆ‌. ನಿಜ ಅಂದ್ರೆ ಇಲ್ಲಿ, ಅದ್ಯಾರೋ ಹಿರಿಯ ಮುಖಂಡನೊಬ್ಬ, ತನಗೆ ಗೌರವ ಸಿಗ್ತಿಲ್ಲ ಅಂತಾ ಮೊಗಮ್ಮಾಗಿ ಒಳ ಮಸಲತ್ತು ಮಾಡ್ತಿದಾನೆ ಅಂದ್ರೆ ಅದನ್ನ ಹೇಗೋ ಕಂಟ್ರೋಲ್ ಮಾಡಬಹುದಿತ್ತು. ಆದ್ರೆ, ಇಲ್ಲಿ‌ನ ಬಿಜೆಪಿಯಲ್ಲಿ ಕೆಲವು ನಿಷ್ಟಾವಂತ ಯುವ ಪಡೆ ಅಕ್ಷರಶಃ ಆತಂಕದಲ್ಲಿದೆ. ಬಿಜೆಪಿ ಬಿಜೆಪಿ ಅಂತಾ ಕನಸಲ್ಲೂ ಕನವರಿಸುತ್ತಿದ್ದ ತಾಲೂಕಿನ ಅದೇಷ್ಟೋ ಯುವ ಶಕ್ತಿ ಸಾಕಪ್ಪ ಸಹವಾಸ ಅನ್ನುವಷ್ಟರ ಮಟ್ಟಿಗೆ ಬಂದು ನಿಂತಿದೆ. ಜಿಪಂ ಚುನಾವಣೆ ಬರಲಿ ಅಂತಾ ಕಾಯ್ತಾ ಇದೆ‌. ಆ ಚುನಾವಣೆಯಿಂದಲೇ ಗಟ್ಟಿ ಠಕ್ಕರ್ ಕೊಡಲೇ ಬೇಕು ಅಂತಾ ಕಾದು ಕುಳಿತಿದೆ‌. ಆದ್ರೆ ಇದೇಲ್ಲ ಹೆಬ್ಬಾರ್ ಸಾಹೇಬ್ರಿಗೆ ಮಾತ್ರ ಗಮನಕ್ಕೇ ಬರ್ತಿಲ್ಲ.

ವಿರೋಧ ಹೆಬ್ಬಾರ್ ಮೇಲಲ್ಲ..!
ಅಷ್ಟಕ್ಕೂ, ಕ್ಷೇತ್ರದಲ್ಲಿ, ಅದ್ರಲ್ಲೂ ಮುಂಡಗೋಡ ತಾಲೂಕಿನಲ್ಲಿ ಶಿವರಾಮ್ ಹೆಬ್ಬಾರ್ ಅಂದ್ರೆ ಜನ ಪ್ರೀತಿಸ್ತಾರೆ. ಆದ್ರೆ, ಆ ಪ್ರೀತಿ ಮೊನ್ನೆಯಿದ್ದಷ್ಟು ಇವತ್ತು ಇಲ್ಲ, ಇವತ್ತು ಇದ್ದಷ್ಟು ನಾಳೆ ಇರಲ್ಲ. ಯಾಕಂದ್ರೆ, ತಾಲೂಕಿನ ಪ್ರತೀ ಗ್ರಾಮಗಳಲ್ಲೂ ಈಗ ಇನ್ನಿಲ್ಲದ ಗುಪ್ತ ದಳಗಳು ಆ್ಯಕ್ಟಿವ್ ಆಗಿವೆ. ಬಿಜೆಪಿ ವಿರುದ್ಧ ಕಾರ್ಯ ನಿರ್ವಹಿಸಲು ಅಂತಹದ್ದೊಂದು ಪಡೆ ಜನ್ಮ ಪಡೆದುಕೊಂಡಿದೆ. ಅಸಲು, ಇಲ್ಲಿ ಈ ಪಡೆ ಕಾರ್ಯ ನಿರ್ವಹಿಸ್ತಿರೋದು ಯಾರ ಇಶಾರೆಯಲ್ಲೂ ಅಲ್ಲ, ಹಾಗೆ ನೋಡಿದ್ರೆ ಈ ಯುವ ಪಡೆಯ ವಿರೋಧ ಹೆಬ್ಬಾರ್ ಸಾಹೇಬರ ಮೇಲೂ ಇಲ್ಲ. ಕೆಲವು ಲೋಕಲ್ “ಮುಖಂಡ” ರ ಕಪಿಮುಷ್ಟಿಯಲ್ಲಿ ಸಿಲುಕಿ ಒದ್ದಾಡಿ, ಸಾಕಪ್ಪ ಸಾಕು ಅಂತಾ ಮೈ ಕೊಡವಿ ಎದ್ದು ಬಿಟ್ಟಿದ್ದಾರೆ. ತಮಗಾದ ಒಂದಿಷ್ಟು ನಿರ್ಲಕ್ಷಗಳಿಂದ ಬೇಸತ್ತು ಹೋಗಿದ್ದಾರೆ ಯುವಕರು. ಹೀಗಾಗಿ, ಕೆಲವ್ರು ಬಹಿರಂಗವಾಗೇ ಸೆಡ್ಡು ಹೊಡೆದಿದ್ರೆ, ಇನ್ನೂ ಹಲವರು ಒಳಗೊಳಗೆ ಕತ್ತಿ ಮಸೆಯುತ್ತಿದ್ದಾರೆ. ಅಂತಹದ್ದೊಂದು ಸಮಯಕ್ಕಾಗಿ ಕಾದು ಕುಳಿತಿದ್ದಾರೆ.

ನಿತ್ಯವೂ ಕತ್ತಲ ರಾತ್ರಿ..!
ನಿಜ, ಸದ್ಯ ಜಿಪಂ, ತಾಪಂ ಚುನಾವಣೆಗಳು ಮುಂದೂಡಲ್ಪಟ್ಟಿವೆ ಅನ್ನೋ ಮಾಹಿತಿ ಇದೆ. ಆದ್ರೆ, ಅದು ಯಾವಾಗಾದ್ರೂ ನಡೀಲಿ, ನಮ್ಮ ಬಲಿಷ್ಟ ಪಡೆ ಇಡೀ ತಾಲೂಕಲ್ಲಿ ಗಟ್ಟಿಯಾಗಬೇಕು ಅಂತಾ ಆ ಒಂದು ಟೀಂ ಟೊಂಕ ಕಟ್ಟಿ ನಿಂತಿದೆ. ಈಗಾಗಲೇ, ತಾಲೂಕಿನಲ್ಲಿ ಪ್ರತಿನಿತ್ಯ ರಾತ್ರಿ ಗಟ್ಟಿಗೊಳ್ಳಲು ಬೇಕಾದ ಎಲ್ಲಾ ಮಸಲತ್ತುಗಳನ್ನೂ ಜಾರಿಯಿಟ್ಟಿದೆ ಆ ಟೀಂ. ಒಂದಾನೊಂದು ಕಾಲದಲ್ಲಿ ಇದೇ ಹೆಬ್ಬಾರ್ ಸಹೇಬ್ರ ಅಕ್ಕಪಕ್ಕದಲ್ಲೇ ಕೂತು ಐರನ್ ಕಾಲರ್ ಟೈಟ್ ಮಾಡಿಕೊಳ್ಳುತ್ತಿದ್ದ ಆ ಒಬ್ಬ ಮುಖಂಡ ಈಗ ಈ ಯುವ ಟೀಂ ನ ಸಾರಥ್ಯ ವಹಿಸಿದ್ದಾರೆ. ಬಹುತೇಕ ಯುವಕರೇ ತುಂಬಿರೋ ಪಡೆ ರಾತ್ರಿಯಾದಂತೆ, ನಿತ್ಯವೂ ತಂಡ ತಂಡವಾಗಿ ಹಳ್ಳಿಗಳಲ್ಲಿ ಬೇಟೆಗಿಳಿಯತ್ತೆ. ನಿಜ ಅಂದ್ರೆ ಅವರು ಹೆಜ್ಜೆಯಿಟ್ಟಲ್ಲೇಲ್ಲ ಒಂದರ್ಥದಲ್ಲಿ ಬಿಜೆಪಿಗೆ ಬಹುತೇಕ ಮೈನಸ್ಸೇ.

“ಲೋಕಲ್” ನಿರ್ಲಕ್ಷ..!
ಹಾಗೆ, ಆ ಯುವ ಪಡೆ ಹಳ್ಳಿಗಳಲ್ಲಿ ನಡೆಸೋ ಕತ್ತಲ ರಾತ್ರಿಯ ಮೀಟಿಂಗುಗಳಲ್ಲಿ ಬಹುತೇಕ ಚರ್ಚೆಯಾಗುವ ವಿಷಯವೇ “ಲೋಕಲ್ ನಿರ್ಲಕ್ಷ”. ಜೊತೆಗೆ, ಪ್ರಸಕ್ತ ಬೆಲೆ ಏರಿಕೆಯ ಅಸ್ತ್ರವನ್ನು ಪ್ರಯೋಗಿಸಿ ಜನರ ಮನಸು ಗೆಲ್ಲುತ್ತಿದ್ದಾರೆ. ಇದೇಲ್ಲದರ ಹೊರತಾಗಿ ಮುಂದೆ ನಮ್ಮ ನಾಯಕರಾಗಿ ಪ್ರಶಾಂತಣ್ಣ ಬರ್ತಿದಾರೆ ಅಂತಾ ಈಗಿಂದಲೇ ಬೀಜ ಬಿತ್ತುತ್ತಿದ್ದಾರೆ. ಯುವ ಶಕ್ತಿ ಮನಸು ಮಾಡಿದ್ರೆ ಏನೇಲ್ಲ ಮಾಡಬಹುದು ಅಂತಾ ತೋರಿಸಿ ಕೊಡೋ ಪ್ಲಾನ್ ಮಾಡಿದ್ದಾರೆ. ಆದ್ರೆ, ಇಷ್ಟೇಲ್ಲ ತಮ್ಮ ನಡುವೇ ನಡೀತಿದ್ರೂ ಹೆಬ್ಬಾರ್ ಸಾಹೇಬ್ರು ಮಾತ್ರ ಆ ಬಗ್ಗೆ ಇನ್ನೂ ಯೋಚಿಸುತ್ತಲೇ ಇಲ್ಲ. ಬದಲಾಗಿ, ಬಡ್ಡಿಗೇರಿಯಲ್ಲಿ ಒಂದಿಷ್ಟು ಜನ ಕಾಂಗ್ರೆಸ್ ಸೇರಿದರಂತೆ, ಅವ್ರಿಗೆ ಕಾಂಗ್ರೆಸ್ ನವರು ಒತ್ತಾಯಪೂರ್ವಕ ಸೇರಿಸಿಕೊಂಡಿದ್ರಂತೆ ಅಂತಾ ಬೊಬ್ಬೆ ಹೊಡಕೊಂಡು, ಅವ್ರಿಗೆ ಮತ್ತೆ ಕೇಸರಿ ಶಾಲು ಹೊದಿಸಿ, ಅದೇಂತದ್ದೋ ಖುಶಿ ಪಟ್ಟಿದ್ದಾರೆ. ಇದನ್ನ ನೋಡಿ ಎಲ್ಲಿಂದ ನಗಬೇಕೋ ಅರ್ಥವೇ ಆಗ್ತಿಲ್ಲ.

ವಿವೇಕ್ ಸಾಹೇಬ್ರಿಗೆ ಸುಸ್ತಾಯ್ತಾ..?
ನಿಜ, ಇಡೀ ಯಲ್ಲಾಪುರ ಕ್ಷೇತ್ರದಲ್ಲಿ ಹೆಬ್ಬಾರ್ ಸಾಹೇಬ್ರಿಗೆ ಅದೇಷ್ಟು ಜನ ಅಪ್ಪಿ ಅಲಂಗಿಸಿದ್ದಾರೋ ಅಷ್ಟೇ ಪ್ರೀತಿ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ರಿಗೂ ನೀಡ್ತಾರೆ. ಅದ್ರಲ್ಲೂ, ಮುಂಡಗೋಡ ತಾಲೂಕಿನಲ್ಲಿ ಬಿಜೆಪಿಯ ಯುವ ಪಡೆ ತನಗೊಬ್ಬ ಗಟ್ಟಿ ನಾಯಕ ಸಿಕ್ಕ ಅನ್ನೋ ಖುಶಿಯಲ್ಲಿದ್ರು. ಆದ್ರೆ, ಅದ್ಯಾಕೋ ಏನೋ ವಿವೇಕ್ ಸಾಹೇಬ್ರು ಇತ್ತೀಚೆಗೆ ಸುಸ್ತಾದಂತೆ ಕಾಣ್ತಿದಾರೆ. ಹಾಗಂತಾ ಅವ್ರದ್ದೇ ಪಕ್ಷದ ಯುವಕರು ಅಲವತ್ತು ಕೊಳ್ತಿದಾರೆ.

ಒಂದು ನೆನಪಿರಲಿ, ಹಾಗೊಂದು ವೇಳೆ ಇದೇ ನಿರ್ಲಕ್ಷ ಮುಂದುವರೆದಿದ್ದೇ ಆದಲ್ಲಿ ಬಹುಶಃ ಮುಂಡಗೋಡ ತಾಲೂಕಿನಲ್ಲಿ ಬಿಜೆಪಿಗೆ ಬಹುದೊಡ್ಡ ಹೊಡೆತ ಬೀಳೋದ್ರಲ್ಲಿ ಎರಡು ಮಾತಿಲ್ಲ.

ಯಾಕ್ರಿ ಅರ್ಥ ಆಗ್ತಿಲ್ಲ..?
ಅಸಲು, ಮುಂಡಗೋಡ ತಾಲೂಕಿನ ಬಿಜೆಪಿಯಲ್ಲಿ ಹಿರಿಯ ಮುಖಂಡರ ಮುನಿಸು ಎಷ್ಟರ ಮಟ್ಟಿಗೆ ಎಫೆಕ್ಟ್ ಕೊಡತ್ತೋ ಗೊತ್ತಿಲ್ಲ, ಆದ್ರೆ, ಟೊಂಕಕಟ್ಟಿ ಹಗಲೂ ರಾತ್ರಿ ಪಕ್ಷಕ್ಕಾಗಿ ಬೆವರು ಹರಿಸಿದ್ದ ಯುವಕರ ಮುನಿಸು ಮಾತ್ರ ಖಂಡಿತ ಪಕ್ಷಕ್ಕೆ ಒಳ್ಳೆಯ ಸೂಚನೆಯಲ್ಲ. ಅಷ್ಟಕ್ಕೂ ಪಕ್ಷದ ಬಲವರ್ಧನೆಯಲ್ಲಿ, ಆ ಯುವಕರ ಪಾಲು ಎಷ್ಟಿದೆ ಅನ್ನೋದು ನಿಮಗ್ಯಾಕೆ ಅರಿವಿಗೆ ಬರ್ತಿಲ್ಲ..? ಈ ಪ್ರಶ್ನೆ ನಾವು ಕೇಳ್ತಿಲ್ಲ. ನಿಮ್ಮದೇ ಯುವ ಕಾರ್ಯಕರ್ತರು ಕೇಳ್ತಿದಾರೆ. ಆದಷ್ಟು ಬೇಗ ಎಚ್ಚೆತ್ತುಕೊಳ್ಳಬೇಕಿದೆ. ಇದು ಬಿಜೆಪಿ ಪಾಲಿಗೆ ಸದ್ಯದ ಅವಶ್ಯಕತೆ.

error: Content is protected !!