ಯಲ್ಲಾಪುರ ತಾಲೂಕಿನಲ್ಲಿ ನಿನ್ನೆ ರಾತ್ರಿ ಭೀಕರ ಹತ್ಯೆಯಾಗಿದೆ. ಮಹಿಳೆಯೋರ್ವಳನ್ನ ಆಗಂತುಕರು ಭೀಕರವಾಗಿ ಹತ್ಯೆ ಮಾಡಿ ಹೋಗಿದ್ದಾರೆ. ಯಲ್ಲಾಪುರ-ಶಿರಸಿ ಗಡಿಭಾಗದ ತುಡುಗುಣಿಯಲ್ಲಿ ಇಂತಹದ್ದೊಂದು ಹತ್ಯೆ ನಡೆದಿದ್ದು, ಇಡೀ ಯಲ್ಲಾಪುರ ತಾಲೂಕೇ ಬೆಚ್ಚಿ ಬೀಳುವಂತೆ ಮಾಡಿದೆ.

ಅಂದಹಾಗೆ, ಇಲ್ಲಿ ಹೀಗೆ ಭೀಕರ ಹತ್ಯೆಯಾಗಿ ಬಿದ್ದವಳ ಹೆಸರು, ಸರೋಜಾ ನಾಯರ್, ವಯಸ್ಸು ಈಗಿನ್ನು 35 ರ ಆಸು ಪಾಸು. ತುಡುಗುಣಿಯ ಕಾಡಿನಲ್ಲಿರೋ ಮನೆಯಲ್ಲಿ ವಾಸವಿದ್ದ ಈಕೆಯನ್ನ ನಿನ್ನೆ ರಾತ್ರಿ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಯಲ್ಲಾಪುರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಕೈಗೊಂಡಿದ್ದಾರೆ. ನಿಮಗೆ ಗೊತ್ತಿರಲಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದಕ್ಷ ಪೊಲೀಸ್ ಪಡೆ ಇದೆ‌. ಕೊಲೆಯ ರಹಸ್ಯ ಕೆಲವೇ ಗಂಟೆಗಳಲ್ಲಿ ಬಟಾಬಯಲಾಗಲಿದೆ. ಅದ್ಯಾವನೇ ಇರಲಿ, ಅದೇಂತವನೇ ಹಂತಕ ಇದ್ರೂ ಕೆಲವೇ ಗಂಟೆಗಳಲ್ಲಿ ಹೆಡೆಮುರಿ ಕಟ್ಟೋದು ಮಾತ್ರ ಪಕ್ಕಾ.

ಅನೈತಿಕ ಮರ್ಡರಾ.‌?
ಹಾಗೆ, ಕಾಡಿನಲ್ಲಿರೋ ಮನೆಯಲ್ಲಿ ಮಹಿಳೆಯೊಬ್ಬಳ ಭೀಕರ ಹತ್ಯೆಯಾಗಿದೆ ಅಂದ್ರೆ, ಅದರ ಹಿಂದೆ ಅದ್ಯಾವನೋ ಎಡಬಿಡಂಗಿ, ಪಾಗಲ್ ಪ್ರೇಮಿಯ ಹುಚ್ಚುತನ ಕೆಲಸ ಮಾಡಿದೆಯಾ..? ಅಥವಾ ಅನೈತಿಕತೆಯ ಹಾದಿಗೆ ಅಡ್ಡಲಾಗಿ, ಕಿರಿಕ್ಕು ಮಾಡಿಕೊಂಡ ಕಾರಣಕ್ಕೆ ನಡುರಾತ್ರಿಯಲ್ಲೇ ಹೆಣ ಬಿತ್ತಾ..? ಅಷ್ಟಕ್ಕೂ ಅಲ್ಲಿ, ಬೀಕರ ಹತ್ಯೆಯಾಗಿ ಹಾಗೆ ಬಿದ್ದಿರೋ ಮಹಿಳೆ, ಆಕೆಯೊಬ್ಬಳೆ ಮನೆಯಲ್ಲಿರಲಿಲ್ಲ. ಬದಲಾಗಿ, ಆಕೆಯ ತಾಯಿ ಸೇರಿ ಹಲವರು ಇದ್ರು. ಹಾಗಿದ್ರೆ, ಸರೋಜಾ ಅನ್ನೋ ಮಹಿಳೆಯ‌ ಮೇಲಷ್ಟೇ ಆಗಂತುಕರ ಸಿಟ್ಟು ಯಾಕೆ..? ಕೊಲೆಯ ರೀತಿ ನೋಡಿದ್ರೆ, ಅಲ್ಲಿ ಯಾರದ್ದೋ ಮೇಲಿನ ಸಿಟ್ಟಿಗೆ ಇನ್ಯಾರೋ ಬಲಿಯಾದ್ರಾ..? ಅನ್ನೋ ಹಾಗಿದೆ‌. ಹೀಗಾಗಿ, ಈ ಭೀಕರ ಹತ್ಯೆಯ ಅಸಲಿ ಕಾರಣವಾದ್ರೂ ಏನು..? ಹಂತಕರು ಆಕೆಯನ್ನೇ ಯಾಕೆ ಹತ್ಯೆ ಮಾಡಿದ್ರು..? ನಿಜ ಅಂದ್ರೆ, ಸದ್ಯ ತನಿಖೆಯ ಹಾದಿ ಸುಲಭವಾಗಿಲ್ಲ.. ಪೊಲೀಸರೂ ತಲೆ ಕೆಡಿಸಿಕೊಂಡು ಕೂತಿದ್ದಾರೆ.

ಹಣಕಾಸಿನ ಕಾರಣವಾ..?
ಇನ್ನು, ಈ ಮಹಿಳೆಯ ಭೀಕರ ಹತ್ಯೆಯ ಹಿಂದೆ ಹಣಕಾಸಿನ ವ್ಯವಹಾರ ಕೈ ಆಡಿಸಿದೆಯಾ..? ಹಾಗಿಲ್ಲ ಅನಿಸತ್ತೆ, ನಿಜ ಅಂದ್ರೆ ಇದೊಂದು ನಾಯರ ಕುಟುಂಬ. ಬಹುತೇಕ ಶ್ರಮ ಜೀವನ ಇವರದ್ದು. ಇಲ್ಲಿ ಬಂದು ನೆಲಸಿ ದಶಕಗಳೇ ಕಳೆದಿವೆ. ಇದ್ದುದರಲ್ಲೇ ಒಂದಿಷ್ಟು
ಕೆಲಸ ಮಾಡಿಕೊಂಡು ಗಟ್ಟಿಗೊಂಡಿದ್ದಾರೆ. ಹೀಗಿದ್ದಾಗ ಇವ್ರಿಗೆ ಹಣಕಾಸಿನ ವ್ಯವಹಾರಗಳೂ ಹೇಳಿಕೊಳ್ಳುವ ಮಟ್ಟಿಗೆ ಇಲ್ಲಾರಿ ಅಂತಾ ಇವ್ರ ಕುಟುಂಬವನ್ನು ಹತ್ತಿರದಿಂದ ಬಲ್ಲ ಅಕ್ಕಪಕ್ಕದ ಮಂದಿ ಹೇಳ್ತಿದಾರೆ.

ಅವನೊಬ್ಬ..?
ಹೀಗಿರೋ, ಈ ನಾಯರ ಕುಟುಂಬದಲ್ಲಿ ಗೋವಾದಿಂದ ಬಂದಿದ್ದ ಅದೊಂದು ಬಾತ್ಮಿ ಒಂದಿಷ್ಟು ಭಯಾನಕ, ಅಷ್ಟೇ ರೋಚಕವಾಗಿದೆ. ಅವನೊಬ್ಬ ಹೀರೋ ಈ ಮನೆಯ ಅಂಗಳಕ್ಕೆ ಆಗಾಗ ಬರ್ತಿದ್ದನಂತೆ. ಶಿರಸಿ ತಾಲೂಕು ಹಾಗೂ ಯಲ್ಲಾಪುರ ತಾಲೂಕಿನ ಗಡಿಯಲ್ಲಿರೋ ಈ ಕಾಡು ಮನೆಗೆ, ಶಿರಸಿಯ ಅವನೊಬ್ಬನ ನೆರಳು ಕೆಲಸ ಮಾಡಿರೋ ಒಂದಿಷ್ಟು ಅನುಮಾನಗಳಿವೆ. ಹಾಗಾದ್ರೆ, ಈ ಮರ್ಡರ್ ನ ರಕ್ತದ ವಾಸನೆಯ ಹಿಂದೆ ಆತನ ಬೆವರು ಬೆರೆತಿದೆಯಾ..? ಗೊತ್ತಿಲ್ಲ.

ಆದ್ರೆ, ಯಲ್ಲಾಪುರ ಪೊಲೀಸರು ಚಾಣಾಕ್ಷರಿದ್ದಾರೆ. ಅದ್ರಲ್ಲೂ ಈ ಮರ್ಡರ್ ಕೇಸ್ ನ ತನಿಖಾ ತಂಡದಲ್ಲಿ ಕ್ರೈಂ ಗಳ ಆಳ, ಅಗಲ ಬಲ್ಲ ಮಹಾನ್ ತಲೆಗಳಿವೆ. ಈ ಕೇಸ್ ಸದ್ಯ ಅಂತವರ ಟೇಬಲ್ಲಿನ ಮೇಲಿದೆ. ನಾಳೆಯಷ್ಟೊತ್ತಿಗೆ ಆ ಹಂತಕರು ಅದ್ಯಾರೇ ಇದ್ರೂ ಪೊಲೀಸರ ಮುಂದೆ ಮಂಡಿಯೂರಿರ್ತಾರೆ. ಇದು ಮಾತ್ರ ಪಕ್ಕಾ..!

error: Content is protected !!