ಇದು ಉತ್ತರ ಕನ್ನಡದ ಹೆಮ್ಮೆ..! ಪ್ರತಿಷ್ಠಿತ ನಾಸಾಗೆ ಕನ್ನಡ ಕುವರನ ಆಯ್ಕೆ..!!

ಸಿದ್ದಾಪುರ: ಹಂಟ್ಸ್‌ವಿಲ್ ನಲ್ಲಿರುವ ಅಲಬಾಮಾ ವಿಶ್ವವಿದ್ಯಾಲಯದ (UAH) ಇಬ್ಬರು ಡಾಕ್ಟರೇಟ್ ವಿದ್ಯಾರ್ಥಿಗಳು ಸಲ್ಲಿಸಿರುವ ಸಂಶೋಧನಾ ಪ್ರಸ್ತಾವನೆಯನ್ನು​ ಬಾಹ್ಯಾಕಾಶ ವಿಜ್ಞಾನ ವಿಭಾಗವು ನಾಸಾ ಅರ್ಥ್ ಮತ್ತು ಸ್ಪೇಸ್ ಸೈನ್ಸ್ ಮತ್ತು ಟೆಕ್ನಾಲಜಿ (FINESST) ಅನುದಾನದಲ್ಲಿ  NASA ಫ್ಯೂಚರ್​ ಇನ್​ವೆಸ್ಟಿಗೇಟರ್​ ಪ್ರಶಸ್ತಿಗೆ  ಭಾಜನವಾಗಿದೆ.

ಕ್ಯಾಥರೀನ್ ಡೇವಿಡ್ಸನ್ ಮತ್ತು ದಿನೇಶ (ದಿನೇಶ್) ವಸಂತ ಹೆಗಡೆ ತಲಾ 135000 ಅಮೇರಿಕನ್​ ಡಾಲರ್ ಅನ್ನು ​ ಸ್ಟೈಫಂಡ್ , ಟ್ಯೂಷನ್, ಸಂಶೋಧನಾ ಚಟುವಟಿಕೆಗಳು ಮತ್ತು ಪ್ರಯಾಣ ವೆಚ್ಚಗಳನ್ನು ಭರಿಸಲು, ಕಾರ್ಯಾಗಾರಗಳು ಮತ್ತು ಸಮ್ಮೇಳನಗಳಿಗೆ ಹಾಜರಾಗಲು ಮತ್ತು ಸಂಶೋಧನೆಯನ್ನು ಮುಂದುವರೆಸಲು ನೀಡಲಾಗುವುದು ಎಂದು ವಿಶ್ವವಿದ್ಯಾನಿಯಲದ ಅಧಿಕೃತ ವೆಬ್​ಸೈಟ್​ ತನ್ನ ನ್ಯೂಸ್​​ ಲೆಟರ್​ನಲ್ಲಿ ತಿಳಿಸಿದೆ.

ಎರಡನೇ ವರ್ಷದ ಡಾಕ್ಟರೇಟ್ ವಿದ್ಯಾರ್ಥಿಯಾಗಿರುವ ಹೆಗಡೆ, ಬಾಹ್ಯಾಕಾಶ ವಿಜ್ಞಾನ ವಿಭಾಗದಲ್ಲಿ ಮತ್ತು ಯುಎಎಚ್ ಸೆಂಟರ್ ಫಾರ್ ಸ್ಪೇಸ್ ಪ್ಲಾಸ್ಮಾ ಮತ್ತು ಏರೋನಾಮಿಕ್ ರಿಸರ್ಚ್‌ನಲ್ಲಿ ಪದವಿ ಸಂಶೋಧನಾ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ, ಬಾಹ್ಯಾಕಾಶ ಹವಾಮಾನದ ಕುರಿತು ತಮ್ಮ ಸಂಶೋಧನೆಯನ್ನು ಮುಂದುವರಿಸಲು ಈ ಅನುದಾನವನ್ನು ನೀಡಲಾಗಿದೆ. ಹೆಗಡೆಯವರ ಸಂಶೋದನಾ ಪ್ರಸ್ತಾವನೆ, “ಬಾಹ್ಯಾಕಾಶ ಹವಾಮಾನದ ಅನಿಶ್ಚಿತತೆಗಳ ಪರಿಮಾಣಾತ್ಮಕ ಅಧ್ಯಯನ ಮುಖ್ಯವಾಗಿರುತ್ತದೆ . ಬಾಹ್ಯಾಕಾಶ ಹವಾಮಾನ ವಿಜ್ಞಾನಿ ಮತ್ತು ಬಾಹ್ಯಾಕಾಶ ವಿಜ್ಞಾನದ ವಿಶೇಷ ಪ್ರಾಧ್ಯಾಪಕರಾದ ಡಾ.ನಿಕೊಲಾಯ್ ಪೊಗೊರೆಲೋವ್ ಇವರಿಗೆ ಸಲಹೆ ಮತ್ತು ಮಾರ್ಗದರ್ಶನ ನೀಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ, ಸಶಿಗುಳಿ ಗ್ರಾಮದ ದಿನೇಶ್ ವಸಂತ ಹೆಗಡೆ, ನಾಸಾ ಗುರುತಿಸಿರುವ ಅಪ್ಪಟ ಕನ್ನಡ ಮಣ್ಣಿನ ಪ್ರತಿಭೆ. ಇವರು ಕ್ರಮವಾಗಿ ವಾಜಗದ್ದೆ ಮತ್ತು ಹಾರ್ಸಿಕಟ್ಟಾ ದಲ್ಲಿ ಕನ್ನಡ ಮಾಧ್ಯಮದಲ್ಲಿ ತಮ್ಮ ಪ್ರಾಥಮಿಕ ಹಾಗು ಪ್ರೌಢಶಾಲಾ ಅಧ್ಯಯನ ಮಾಡಿರುತ್ತಾರೆ.
ಮೈಸೂರಿನ ಯುವರಾಜ ಕಾಲೇಜಿನಲ್ಲಿ ತನ್ನ ಬಿಎಸ್ಸಿ ಪದವಿ ಮುಗಿಸಿ ನಂತರ ಮೈಸೂರು ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರ ಎಂಎಸ್ಸಿ ಪದವಿ ಗಳಿಸಿ, ಹೆಚ್ಚಿನ ಅಧ್ಯಯನಕ್ಕೆ ಅಮೇರಿಕಾಕ್ಕೆ ಹಾರಿದ ದಿನೇಶ್​ ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಪತಾಕೆ ಹಾರಿಸಿದ್ದಾರೆ.

ಕಾಲೇಜು ದಿನಗಳಲ್ಲೇ ವಿಜ್ಞಾನದ ಜೊತೆಗೆ ಸಾಂಸ್ಕೃತಿಕವಾಗಿಯೂ ಭಾಗವಹಿಸುತ್ತಿದ್ದ ದಿನೇಶ್​ ಮೈಸೂರಿನ ನಿರಂತರ ರಂಗ ತಂಡದಲ್ಲಿ ನಟನಾಗಿ ಗುರುತಿಸಿಕೊಂಡಿದ್ದರು, ಅಲ್ಲದೇ ಅನೇಕ ಕಾಲೇಜು ನಾಟಕೋತ್ಸವಗಳಲ್ಲಿ ಭಾಗವಹಿಸಿದ ಹೆಗ್ಗಳಿಕೆ ಇವರದು.

ಭೂ ವಿಜ್ಞಾನ, ಹೆಲಿಯೊಫಿಸಿಕ್ಸ್, ಗ್ರಹ ವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರ ವಿಷಯಗಳನ್ನು ಅಧ್ಯಯನ ಮಾಡುತ್ತಿರುವ, ನಾಸಾ ವಿಜ್ಞಾನದ ಮಿಷನ್ ನಿರ್ದೇಶನಾಲಯದೊಂದಿಗೆ ಈ ಕೆಳಗಿನ ಒಂದು ಅಥವಾ ಹೆಚ್ಚಿನ ಕ್ಷೇತ್ರಗಳಲ್ಲಿ ಹೊಂದಿಕೊಂಡಂತೆ ಸಂಶೋಧನೆಯನ್ನು ಮಾಡುತ್ತಿರುವ ಸಂಶೋಧನಾ ವಿದ್ಯಾರ್ಥಿಗಳಿಗೆ ನಾಸಾ ಈ ಅತ್ಯುತ್ತಮ ಪ್ರಶಸ್ತಿ ನೀಡುತ್ತದೆ.

ತಾನು ಆಯ್ಕೆ ಆಗಿಲ್ಲ ಎಂದು ಆರಂಭದಲ್ಲಿ ಭಾವಿಸಿದ್ದೆ, ನಂತರ ಬಂದ ಆಫರ್ ಲೆಟರ್ ನನ್ನ ಆತ್ಮ ವಿಶ್ವಾಸ, ಸಂತೋಷ, ಭವಿಷ್ಯದ ಗುರಿ, ಕನಸು ಎಲ್ಲವನ್ನು ಇಮ್ಮಡಿಗೊಳಿಸಿತು ಎಂದು ಹೆಗಡೆ ಹೇಳಿದ್ದಾರೆ. “ನಾನು ಆಯ್ಕೆಯಾಗಿದ್ದೇನೆ ಎಂದು ತಿಳಿದಾಗ ನನಗೆ ತುಂಬಾ ಸಂತೋಷವಾಯಿತು ಮತ್ತು ಆಶ್ಚರ್ಯವಾಯಿತು”, “ಸಂಶೋದನಾ ಪ್ರಸ್ತಾವನೆಯ ಫಲಿತಾಂಶ ಪ್ರಕಟಣೆಯ ಅಧಿಸೂಚನೆಯ ಗಡುವು ಈಗಾಗಲೇ ಮುಗಿದಿರುವುದರಿಂದ, ನಮ್ಮ ಈ ಯೋಜನೆಯನ್ನು ಆಯ್ಕೆ ಮಾಡಲಾಗುವುದಿಲ್ಲ ಎಂದು ನಾನು ಭಾವಿಸಿದ್ದೆ. ಆಯ್ಕೆಯನ್ನು ಖಚಿತಪಡಿಸಿಕೊಳ್ಳಲು ನಾನು ಆಫರ್ ಲೆಟರ್ ಅನ್ನು ಎರಡು ಬಾರಿ ಪರಿಶೀಲಿಸಿದೆ “, “ಸ್ವಲ್ಪ ಸಮಯದ ನಂತರ, ನನ್ನ ಮೇಲ್ವಿಚಾರಕರಿಂದ ನನಗೆ ಇಮೇಲ್ ಬಂದು ಈ ಸಂತೋಷದ ವಿಷಯ ದೃಡಪಟ್ಟಿತು. ತಕ್ಷಣವೇ ನಾನು ಭಾರತದಲ್ಲಿರುವ ನನ್ನ ಅಕ್ಕನಿಗೆ ಈ ಶುಭ ಸುದ್ದಿಯನ್ನು ಹಂಚಿಕೊಳ್ಳಲು ಕರೆ ಮಾಡಿದೆ ಎಂದರು ದಿನೇಶ್​ ಹೆಗಡೆ.

ಸೌರ ಮಾರುತದ ಗುಣಲಕ್ಷಣಗಳನ್ನು ಅಧ್ಯಯನ ಮಾಡುತ್ತಿರುವ ದಿನೇಶ್​, ಪ್ಲಾಸ್ಮಾ ಸ್ಥಿತಿಯಲ್ಲಿ ಮುಖ್ಯವಾಗಿ ಪ್ರೋಟಾನ್‌ಗಳು ಮತ್ತು ಎಲೆಕ್ಟ್ರಾನ್‌ಗಳನ್ನು ಒಳಗೊಂಡಿರುವ ನಿರಂತರ ಹರಿವು ಸೂರ್ಯನಿಂದ ಹೊರಕ್ಕೆ ಹೇಗೆ ಹರಿಯುತ್ತದೆ ಮತ್ತು ತನ್ನ ಒಳಗೆ ಹುದುಗಿರುವ ಸೌರ ಕಾಂತೀಯ ಕ್ಷೇತ್ರವನ್ನು ಅದರೊಂದಿಗೆ ಹೇಗೆ ಒಯ್ಯುತ್ತದೆ ಎನ್ನುವ ವಿಚಾರದ ಕುರಿತು ಅಧ್ಯಯನ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

error: Content is protected !!