ನಟೋರಿಯಸ್ ಹಂತಕ ಬಾಗಪ್ಪ ಹರಿಜನ್ ಕೊಲೆ ಕೇಸ್, ಪ್ರಮುಖ ಆರೋಪಿ ಪಿಂಟೂ ಸೇರಿ ನಾಲ್ವರ ಬಂಧನ..!

ವಿಜಯಪುರ: ಭೀಮಾತೀರದ ನಟೋರಿಯಸ್ ಹಂತಕ ಭಾಗಪ್ಪ ಹರಿಜನ ಕೊಲೆ ಪ್ರಕರಣದ ಆರೋಪಿತರು ಅಂದರ್ ಆಗಿದ್ದಾರೆ. ಪೆಬ್ರುವರಿ 11ರಂದು ಗಾಂಧಿಚೌಕ ಪೊಲೀಸ್ ಠಾಣಾ ವ್ಯಾಪ್ತಿಯ ಮದೀನಾ ನಗರದಲ್ಲಿ ರಾತ್ರಿ 09.30 ಗಂಟೆಯ ಸುಮಾರಿಗೆ ಪಿಂಟು ಹಾಗೂ ಇನ್ನೂ 4-5 ಜನ ದುಷ್ಕರ್ಮಿಗಳು ಸೇರಿಕೊಂಡು ಭಾಗಪ್ಪ ಹುಚ್ಚಪ್ಪ ಹರಿಜನ ಈತನಿಗೆ ಪಿಸ್ತೂಲ್‌ನಿಂದ ಗುಂಡು ಹಾರಿಸಿ, ಕೊಡಲಿ ಹಾಗೂ ಮಚ್ಚಿನಿಂದ ಕುತ್ತಿಗೆಗೆ, ಎದೆಗೆ ಮತ್ತು ಕೈಗಳಿಗೆ ಹಲ್ಲೆ ಮಾಡಿ ಕೊಲೆ ಮಾಡಿರುತ್ತಾರೆ. ಭಾಗಪ್ಪ ಹರಿಜನ ಈತನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.

ಈ ಬಗ್ಗೆ ಮೃತನ ಮಗಳಾದ ಗಂಗೂಬಾಯಿ ಭಾಗಪ್ಪ ಹರಿಜನ, ಸಾ: ಬಬಲಾದಿ ತಾ: ಇಂಡಿ ರವರು ನೀಡಿದ ದೂರಿನ ಮೇರೆಗೆ ಗಾಂಧಿಚೌಕ ಪೊಲೀಸ್ ಠಾಣೆ ಗುನ್ನೆ ನಂ: 32/2025 ಕಲಂ: 189(2), 191(2), 191(3), 352, 103, 190 ಬಿಎನ್ಎಸ್ ಆ್ಯಕ್ಟ್-2023 ಮತ್ತು 25(ಎ) ಭಾರತೀಯ ಆಯುಧ ಕಾಯ್ದೆ ಅಡಿ ಪ್ರಕರಣ ದಾಖಲಾಗಿರುತ್ತದೆ. ಮೃತ ಭಾಗಪ್ಪ ಹುಚ್ಚಪ್ಪ ಹರಿಜನ ಈತನ ಮೇಲೆ 10 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಅಫಜಲ್ ಪೂರ ಪೊಲೀಸ್ ಠಾಣೆಯಲ್ಲಿ 01 ಕೊಲೆ ಪ್ರಕರಣ ಸೇರಿದಂತೆ. ಒಟ್ಟು 06 ಕೊಲೆ ಪ್ರಕರಣಗಳು ದಾಖಲಾಗಿರುತ್ತವೆ.

ಪ್ರಮುಖ ಆರೋಪಿ ಪಿಂಟೂ

ಇತ್ತೀಚೆಗೆ ವಿಜಯಪುರ ನಗರದಲ್ಲಿ ರವಿ ಮೇಲಿನಕೇರಿ ಎಂಬುವವರಿಗೆ ತುಳಸಿರಾಮ ಹರಿಜನ ಹಾಗೂ ಆತನ ಸಹಚರರಾದ ಅಲೇಕ್ಸ್ ಗೊಲ್ಲರ, ಶಣ್ಮುಖ ನಡುವಿನಕೇರಿ, ಪ್ರಕಾಶ ಗೊಲ್ಲರ, ಮುರುಗೇಶ ಉಳ್ಳಾಗಡ್ಡಿ, ರಾಜೇಸಾಬ ರುದ್ರವಾಡಿ ಇವರು ಸೇರಿಕೊಂಡು ಕೊಲೆ ಮಾಡಿದ್ದು, ಆರೋಪಿತರು ಸದ್ಯ ನ್ಯಾಯಾಂಗ ಬಂಧನದಲ್ಲಿರುತ್ತಾರೆ.

ಭಾಗಪ್ಪ ಹರಿಜನ ಹಾಗೂ ರವಿ ಮೇಲಿನಕೇರಿ ಇವರು ಸಂಬಂಧಿಕರಾಗಿರುತ್ತಾರೆ. ಇವರಿಬ್ಬರ ನಡುವೆ ಕೆಲವು ವರ್ಷಗಳಿಂದ ಹಣಕಾಸಿನ ವ್ಯವಹಾರವಿದ್ದು, ಇಬ್ಬರೂ ಸೇರಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು.

ರವಿ ಮೇಲಿನಕೇರಿ ಮೃತಪಟ್ಟ ನಂತರ ಭಾಗಪ್ಪ ಹರಿಜನ ಈತನು ರವಿ ಮೇಲಿನಕೇರಿ ಈತನ ತಮ್ಮನಾದ ಪ್ರಕಾಶ ಮೇಲಿನಕೇರಿ ಈತನಿಗೆ, ನಿಮ್ಮ ಅಣ್ಣ ನನ್ನ ಹೆಸರು ಹೇಳಿ ಹಣ, ಆಸ್ತಿ ಮತ್ತು ವಾಹನ ಎಲ್ಲವನ್ನು ಮಾಡಿಕೊಂಡಿರುತ್ತಾನೆ. ಅವೆಲ್ಲವನ್ನು ನನಗೆ ಬಿಟ್ಟು ಕೊಡಬೇಕು ಅಂತಾ ಒತ್ತಡ ಹಾಕುತ್ತಿದ್ದು, ಹಲವಾರು ಬಾರಿ ಬೆದರಿಕೆ ಸಹ ಹಾಕಿದ್ದನು. ಇತ್ತೀಚೆಗೆ ಭಾಗಪ್ಪ ಈತನು ಪ್ರಕಾಶ ಮೇಲಿನಕೇರಿ ಈತನಿಗೆ ನೀವು ಆಸ್ತಿ ಬಿಟ್ಟುಕೊಡಬೇಕು. ಇಲ್ಲದಿದ್ದರೆ 10 ಕೋಟಿ ಹಣ ಕೊಡಬೇಕು. ಅದೂ ಆಗದಿದ್ದರೆ ನಿಮ್ಮ ಅಣ್ಣನ ಹೆಂಡತಿಯನ್ನು ನನ್ನ ಹತ್ತಿರ ಕಳುಹಿಸು ಎಂದು ಅಣ್ಣನ ಹೆಂಡತಿಯ ಕುರಿತಾಗಿ ಅವಾಚ್ಯ ಪದ ಬಳಕೆ ಮಾಡಿ ಮಾತನಾಡಿರುತ್ತಾನೆ. ನಿಮ್ಮ ಅಣ್ಣನಿಗೆ ಹೇಗೆ ಹೊಡೆದಿರುತ್ತೇನೆ. ಅದೇ ತರಹ ನಿನಗೂ ಹೊಡೆಯುತ್ತೇನೆ ಅಂತಾ ಧಮಕಿ ಹಾಕಿದ್ದರಿಂದ. ಪ್ರಕಾಶ ಮೇಲಿನಕೇರಿ ಈತನಿಗೆ ತನ್ನ ಅಣ್ಣನ ಕೊಲೆ ಭಾಗಪ್ಪ ಹರಿಜನ ಈತನ ಆಜ್ಞೆಯ ಮೇರೆಗೆ ನಡೆದಿರುತ್ತದೆ ಅಂತಾ ಖಚಿತವಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ಭಾಗಪ್ಪ ಹರಿಜನ ಈತನಿಗೆ ಮುಗಿಸಿ ಬಿಡಬೇಕು ಅಂತಾ ಪ್ರಕಾಶ ಮೇಲಿನಕೇರಿ ತನ್ನ ಸಂಬಂಧಿಕ ಹಾಗೂ ಸ್ನೇಹಿತರೊಂದಿಗೆ ಸಂಚು ಮಾಡಿ. ದಿನಾಂಕ: 11.02.2025 ರಂದು ರಾತ್ರಿ 09.30 ಗಂಟೆಯ ಸುಮಾರಿಗೆ ಭಾಗಪ್ಪ ಹರಿಜನ ಈತನು ತನ್ನ ಮನೆಯ ಹೊರಗಡೆ ವಾಕಿಂಗ್ ಮಾಡುತ್ತಿದ್ದಾಗ. ಆಟೋ ಹಾಗೂ ಬೈಕ್‌ನಲ್ಲಿ ಬಂದು. ಪಿಸ್ತೂಲ್‌ನಿಂದ ಗುಂಡು ಹಾರಿಸಿ, ಕೊಡಲಿ, ಮಚ್ಚು ಹಾಗೂ ಜಂಬೆಯಿಂದ ಹೊಡೆದು ಕೊಲೆ ಮಾಡಿರುತ್ತಾರೆ.

ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರಾದ, ಇಂಡಿ ತಾಲೂಕಿನ ಅಗರಖೇಡ ಗ್ರಾಮದ
ಪ್ರಕಾಶ @ ಪಿಂಟು ಲಕ್ಷ್ಮಣ ಮೇಲಿನಕೇರಿ (26), ಹೋರ್ತಿ ಗ್ರಾಮದ ರಾಹುಲ ಭೀಮಾಶಂಕರ ತಳಕೇರಿ, (20), ಸುದೀಪ ತಾಯಿ: ರೇಣುಕಾ ಕಾಂಬಳೆ, (20), ಬೆಳಗಾವಿ ಜಿಲ್ಲೆ ಬೈಲಹೊಂಗಲದ ಮಣಿಕಂಠ @ ಗದಿಗೆಪ್ಪ ಶಂಕ್ರಪ್ಪ ಬೆನಕೊಪ್ಪ, (27) ಬಂಧಿತರಾಗಿದ್ದಾರೆ.

ಆರೋಪಿತರಿಂದ ಕೃತ್ಯಕ್ಕೆ ಬಳಸಲಾದ ಆಯುಧ ಹಾಗೂ ವಾಹನಗಳನ್ನು ಜಪ್ತಿ ಮಾಡುವುದು ಹಾಗೂ ಇನ್ನಿತರ ತನಿಖಾ ಕಾರ್ಯ ಪ್ರಗತಿಯಲ್ಲಿರುತ್ತದೆ ಮತಾ ವಿಜಯಪುರ ಎಸ್ಪಿ ಭೀಮಾಶಂಕರ್ ತಿಳಿಸಿದ್ದಾರೆ.