ಕುಮಟಾ ಹಾಗೂ ಹೊನ್ನಾವರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 14 ಕಳ್ಳತನ ಪ್ರಕರಣಗಳಲ್ಲಿ ಬೇಕಾಗಿದ್ದ ಇಬ್ಬರು ಆರೋಪಿಗಳನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು ದಾಖಲಾಗುತ್ತಿದ್ದರಿಂದ ಶೀಘ್ರವೇ ಪ್ರಕರಣಗಳನ್ನು ಬೇಧಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಒಂದು ತಂಡವನ್ನು ರಚಿಸಿದ್ದರು. ಈ ತಂಡ ಆರೋಪಿಗಳಾದ ಚಂದಾವರದ ಸಜ್ಜಾದ ಅಹ್ಮದ್ ಹಾಗೂ ಮುಬಾಸೀರ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಹೊನ್ನಾವರ ಪೊಲೀಸ್ ಠಾಣೆಯ 11 ಪ್ರಕರಣಗಳು ಹಾಗೂ ಕುಮಟಾ ಠಾಣೆಯ 3 ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು 20 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಆರೋಪಿತರ ಕಡೆಯಿಂದ ಜಪ್ತಿಪಡಿಸಿಕೊಳ್ಳಲಾಗಿದೆ. ಅಲ್ಲದೇ ಆರೋಪಿತರು ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಸುಮಾರು 2,50,000 ರೂ. ಬೆಲೆಯ ಮಾರುತಿ ಕಂಪನಿಯ ರಿಟ್ಜ್ ಕಾರು ಹಾಗೂ ಸುಮಾರು 25,000 ರೂ. ಬೆಲೆಯ ಪಲ್ಸರ್ ಬೈಕ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಭಟ್ಕಳ ಉಪ ವಿಭಾಗದ ಎಎಸ್ ಪಿ ನಿಖಿಲ್ ಬಿ. ಮಾರ್ಗದರ್ಶನದಲ್ಲಿ ಹೊನ್ನಾವರ ಠಾಣೆಯ ಸಿಪಿಐ ವಸಂತ ಆಚಾರ್ಯ ನೇತೃತ್ವದಲ್ಲಿ ಪಿಎಸ್ಐ ಶಶಿಕುಮಾರ್ ಸಿ.ಆರ್., ಕ್ರೈಂ ಪಿಎಸ್ಐ ಸಾವಿತ್ರಿ ನಾಯಕ, ಪಿಎಸ್ಐ 2 ಅಶೋಕಕುಮಾರ, ಠಾಣೆಯ ಸಿಬ್ಬಂದಿಗಳಾದ ಕೃಷ್ಣ ಡಿ. ಗೌಡ, ರಮೇಶ ಭೀ. ಲಮಾಣಿ, ಮಹಾವೀರ ಡಿ.ಎಸ್. ಉದಯ ಮುಗದೂರ, ರಯೀಸ್ ಭಾಗವಾನ್, ಅಶೋಕ ನಾಯ್ಕ, ತಿಮ್ಮಪ್ಪ ವೈದ್ಯ, ಜೀಪ್ ಚಾಲಕರಾದ ಶಿವಾನಂದ ಚಿತ್ರಗಿ, ಚಂದ್ರಶೇಖರ ನಾಯ್ಕ ಹಾಗೂ ಕಾರವಾರದ ಜಿಲ್ಲಾ ಪೊಲೀಸ್ ಕಛೇರಿಯ ಟೆಕ್ನಿಕಲ್ ವಿಭಾಗದ ಸಿಬ್ಬಂಧಿ ಸುಧೀರ ಮಡಿವಾಳ, ಅಣ್ಣಪ್ಪ ಬಡಿಗೇರ, ರಮೇಶ ನಾಯ್ಕ ಇವರು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರು ಈ ತಂಡಕ್ಕೆ ಪ್ರಶಂಸೆ ವ್ಯಕ್ತ ಪಡಿಸಿದ್ದು, ಪತ್ತೆ ಕಾರ್ಯದ ತಂಡದವರಿಗೆ ಬಹುಮಾನ ಘೋಷಣೆ ಮಾಡಿದ್ದಾರೆ